ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಯಬಿದ್ದು ಥಿಯೇಟರ್ ತೆರೆದರೂ ಕೂಡ ಜನರು ಸಿನೆಮಾ ಥಿಯೇಟರ್ ಗೆ ಬರುವುದಕ್ಕೆ ಇನ್ನೂ ಮನಸ್ಸು ಮಾಡುತ್ತಿಲ್ಲ, ಧೈರ್ಯ ತೋರುತ್ತಿಲ್ಲ. ಲಾಕ್ ಡೌನ್ ಮುಗಿದು ಮುಕ್ತವಾದ ನಂತರ ಸಿನೆಮಾ ಥಿಯೇಟರ್ ಮುಕ್ತವಾದ ನಂತರ ಮೊದಲ ವಾರಾಂತ್ಯದಲ್ಲಿ ಜನರಿಲ್ಲದೆ ಥಿಯೇಟರ್ ಬಣಗುಡುತ್ತಿತ್ತು. ಶೇಕಡಾ 10ರಿಂದ 15ರಷ್ಟು ಮಾತ್ರ ಸೀಟುಗಳು ಭರ್ತಿಯಾಗಿದ್ದವು.
ದಸರಾ ರಜೆಯಲ್ಲಿ ಉತ್ತಮ ವ್ಯಾಪಾರವಾಗಬಹುದು ಎಂಬ ನಿರೀಕ್ಷೆಯಲ್ಲಿ ಥಿಯೇಟರ್ ಮಾಲೀಕರಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಕಳೆದ ವಾರಾಂತ್ಯದಲ್ಲಿ ಭಣಗುಡುತ್ತಿದ್ದವು. ಚಿಕ್ಕಪೇಟೆಯ ಸಂತೋಷ ಥಿಯೇಟರ್ ನಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ಶಿವಾರ್ಜುನ ಪ್ರದರ್ಶನಗೊಳ್ಳುತ್ತಿದೆ. ಥಿಯೇಟರ್ ನಲ್ಲಿ ಸಾವಿರ ಸೀಟುಗಳ ಸಾಮರ್ಥ್ಯವಿದ್ದರೂ ಕೂಡ 150ರಿಂದ 180 ಸೀಟುಗಳು ಮಾತ್ರ ಭರ್ತಿಯಾಗಿವೆ. ಚಿರು ಸರ್ಜಾ ಅಭಿಮಾನಿಗಳು ಕೂಡ ಅಷ್ಟೊಂದು ಬರುತ್ತಿಲ್ಲ ಎನ್ನುತ್ತಾರೆ ಥಿಯೇಟರ್ ಮ್ಯಾನೇಜರ್ ಮಂಜು ಬಿಡಪ್ಪ.
ಈ ವಾರ ಮತ್ತು ಮುಂದಿನ ವಾರ ದಸರಾ ರಜೆಯಲ್ಲಿ ಥಿಯೇಟರ್ ಗೆ ಸ್ವಲ್ಪ ಜನರು ಬರಬಹುದು ಎಂಬ ನಿರೀಕ್ಷೆಯಲ್ಲಿ ಥಿಯೇಟರ್ ಮಾಲೀಕರಿದ್ದಾರೆ. ಸರ್ಕಾರದ ಆದೇಶದಂತೆ ಸ್ಯಾನಿಟೈಸರ್ ಹಾಕಿ, ಶೇಕಡಾ 50ರ ಸೀಟು ಸಾಮರ್ಥ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟಿಕೆಟ್ ಕೌಂಟರ್ ಗಳಲ್ಲಿ, ಫುಡ್ ಕೌಂಟರ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತೆರೆದಿದ್ದಾರೆ. ಆದರೆ ಜನರು ಮಾತ್ರ ಬರುತ್ತಿಲ್ಲ.
ಹೆಸರಘಟ್ಟದ ಅಶೋಕ ಥಿಯೇಟರ್ ಮಾಲೀಕ ರೋಶನ್ ಅಶೋಕ, ಪ್ರೇಕ್ಷಕರ ಸುರಕ್ಷತೆಗೆ ನಿಜಕ್ಕೂ ಆದ್ಯತೆ ನೀಡುತ್ತೇವೆ. ಸರ್ಕಾರದ ಆದೇಶದ ಹೊರತಾಗಿಯೂ ಪ್ರತಿ ಶೋ ಮುಗಿದ ನಂತರ ಸೀಟುಗಳನ್ನು ಸ್ಯಾನಿಟೈಸ್ ಮಾಡುತ್ತೇವೆ. ಥಿಯೇಟರ್ ನಲ್ಲಿ ಶಿವಾರ್ಜುನ ಪ್ರದರ್ಶನ ಕಾಣುತ್ತಿದೆ. ಆದರೆ ಮೊದಲ ವಾರ ನಾವಂದುಕೊಂಡಷ್ಟು ಜನ ಬರಲಿಲ್ಲ ಎಂದು ಅಶೋಕ ಹೇಳುತ್ತಾರೆ.
Advertisement