ಬೆಂಗಳೂರು: 'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ನಟ ರಾಜವರ್ಧನ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದು, ತಮ್ಮದೇ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ರೆಡ್ ಡೈಮಂಡ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ರಾಜವರ್ಧನ್ ಹುಟ್ಟುಹಾಕಿದ್ದು, ತಮ್ಮ ಮುಂದಿನ ಚಿತ್ರವನ್ನು ಇದೇ ಬ್ಯಾನರ್ ನಡಿಯಲ್ಲಿ ಸೆಟ್ಟೇರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜವರ್ಧನ್ ಮಾಹಿತಿ ನೀಡಿದ್ದು, ನನ್ನ ಕನಸು ಇದೀಗ ನನಸಾಗಿದೆ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನೀವು ಸದಾ ನನ್ನ ಬೆನ್ನ ಹಿಂದೆ ಬೆಂಬಲ ನೀಡಿ ಧೈರ್ಯ ತುಂಬಿದ್ದೀರಿ. ನನ್ನ ಈ ಹೊಸ ಸಂಸ್ಥೆಯ ಮೂಲಕ ಹೊಸ ಚಿತ್ರಗಳು ಮೂಡುತ್ತದೆ. ಖಂಡಿತವಾಗಿಯೂ ಶತಾಗತಾಯ ನಿಮ್ಮನ್ನು ಮನರಂಜಿಸುತ್ತೇವೆ. ನಿಮ್ಮ ಎಲ್ಲರ ಆಶೀರ್ವಾದ ಮತ್ತು ಬೆಂಬಲ ಯಾವಾಗಲೂ ಬೇಕು. ಚಿತ್ರದ ಫಸ್ಟ್ ಲುಕ್ ಮತ್ತು ಅಧಿಕೃತ ಲೋಗೊ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ.
ಮುಂದಿನ ಚಿತ್ರವು ನೈಜ ಕಥೆಯಾಧಾರಿತವಾಗಿರಲಿದ್ದು, ನಿರ್ದೇಶಕ ಕುಮರೇಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಪ್ರೀತಿ ಮತ್ತು ರೋಚಕತೆಯ ಅಂಶಗಳನ್ನು ಹೊಂದಿರುವ ಕ್ರಿಯಾ ಆಧಾರಿತ ಕಥಾವಸ್ತುವಾಗಿದೆ. ಈ ಪಾತ್ರಕ್ಕಾಗಿ ನಟ ರಾಜವರ್ಧನ್ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಆ ಬದಲಾವಣೆ ಏನು ಎಂಬುದನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ.
Advertisement