ಬೆಂಗಳೂರು : ಡ್ರಗ್ಸ್ ಪ್ರಕರಣದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಸೋಮವಾರ ಆದೇಶ ಪ್ರಕಟಿಸಲಿದೆ.
ಸೋಮವಾರ ಅವರಿಗೆ ಜಾಮೀನು ಸಿಗಲಿದೆಯಾ ಅಥವಾ ಸೆರೆವಾಸ ಮುಂದುವರೆಯಲಿದೆಯಾ ಎಂಬುದು ನಿರ್ಧಾರವಾಗಲಿದೆ. ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿರುವ ಎನ್ಡಿಪಿಎಸ್ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿ ಕುರಿತಾಗಿ ಸೋಮವಾರ ಆದೇಶ ಪ್ರಕಟಿಸಲಿದೆ.
ಜಾರಿ ನಿರ್ದೇಶನಾಲಯ ಕೂಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ ಕೂಡ ಅವರ ವಿಚಾರಣೆ ಆರಂಭಿಸಿದೆ. ಅವರ ವಿಚಾರಣೆಗೆ ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಪುರಸ್ಕೃತವಾದ ಹಿನ್ನಲೆ ಇಂದಿನಿಂದ ಸಿಸಿಬಿ ಜೊತೆ ಇಡಿ ತನಿಖೆ ಕೂಡ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿಯೇ ನಟಿಯರಿಬ್ಬರ ವಿಚಾರಣೆಯನ್ನು ಸಿಸಿಬಿ ನಡೆಸುತ್ತಿದೆ.
ರಾಗಿಣಿ ಮತ್ತು ಸಂಜನಾ ಜೊತೆಗೆ ರಾಹುಲ್ ಥಾನ್ಸೆ, ವಿರೇಂದ್ರ ಖನ್ನಾ,ರವಿಶಂಕರ್ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ, ರಾಗಿಣಿ ಪರ ವಕೀಲರು ಜಾಮೀನು ನೀಡುವಂತೆ ಕೋರ್ಟ್ನಲ್ಲಿ ಈಗಾಗಲೇ ವಾದ ಮಂಡಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರು. ಅಲ್ಲದೇ ಕರೆದಾಕ್ಷಣ ಅವರು ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯದಲ್ಲಿ ಮಂಡಿಸಿದ್ದರು.
Advertisement