ಚೆನ್ನೈ: ಹೃದಯಾಘಾತದಿಂದ ಬಳಲುತ್ತಿದ್ದ ನಟ ವಿವೇಖ್ ಅವರ ಎಡ ಅಪಧಮನಿಯಲ್ಲಿ ಶೇಕಡ 100% ರಷ್ಟು ರಕ್ತ ಹೆಪ್ಪುಗಟ್ಟಿದ್ದು, ಇದಕ್ಕೂ ಕೋವಿಡ್ ವ್ಯಾಕ್ಸಿನೇಷನ್ಗೆ ಸಂಬಂಧ ಇಲ್ಲದಿರಬಹುದೆಂದು ಸಿಐಎಂಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ರಾಜು ಶಿವಸಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಿವಸಾಮಿ, 59 ವರ್ಷದ ನಟ "ವೆಂಟ್ರಿಕ್ಯುಲರ್ ಫೈಬ್ರಿಲೇಷನ್" ಎಂಬ ಪ್ರತ್ಯೇಕ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿರುವುದಾಗಿ ಹೇಳಿದರು.
ಮೊದಲ ಬಾರಿಗೆ ವಿವೇಕ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಅಂಜಿಯೊಗ್ರಾಮ್ ನಂತರ ಅಂಜಿಯೊಪ್ಲಾಸ್ಟಿ ಮಾಡಿ ಹೃದಯಕ್ಕೆ ಸ್ಟಂಟ್ ಅಳವಡಿಸಿಲಾಗಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಸುಧಾರಿಸಲು ಕನಿಷ್ಠ 24 ಗಂಟೆ ತೆಗೆದುಕೊಳ್ಳಬಹುದು ಎಂದು ಡಾ. ಶಿವಸಾಮಿ ತಿಳಿಸಿದರು.
ಶುಕ್ರವಾರ ಬೆಳಗ್ಗೆ 11 ಗಂಟೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ವಿವೇಕ್ ಅವರನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆ ತಂದಾಗ, ತುರ್ತು ಹಾಗೂ ಹೃದಯ ತಜ್ಞರು ತಕ್ಷಣ ಸ್ಪಂದಿಸಿದ್ದಾರೆ. ಇದು ನಿಜವಾಗಿಯೂ ಹೃದಯ ಸಮಸ್ಯೆಯಾಗಿದೆ. ನಾವು ಜೀನ್-ಪರೀಕ್ಷೆ ಮತ್ತು ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಅದರಲ್ಲಿ ಕೋವಿಡ್ನ ಯಾವುದೇ ಒಳಗೊಳ್ಳುವಿಕೆ ಕಂಡುಬಂದಿಲ್ಲ ಎಂದು ಅವರು ಹೇಳಿದರು.
ವಿವೇಖ್ ಕಾರ್ಡಿಯೋಜೆನಿಕ್ ಆಘಾತದೊಂದಿಗೆ ತೀವ್ರವಾದ ಅಪಧಮನಿಯ ಸಮಸ್ಯೆಯಿಂದ ಬಳಲುತ್ತಿದ್ದು, ಇದೊಂದು ಪ್ರತ್ಯೇಕ ಘಟನೆಯಾಗಿದೆ. ಕೋವಿಡ್ ವ್ಯಾಕ್ಸಿನೇಷನ್ ನಿಂದ ಇದು ಆಗಿರುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಸೇವಾ ನಿರ್ದೇಶಕ ಡಾ. ವಿಜಯ್ ಕುಮಾರ್ ಸಹಿ ಇರುವ ಆಸ್ಪತ್ರೆ ಹೆಲ್ತ್ ಬುಲೆಟಿನ್ ನಲ್ಲಿ ಹೇಳಲಾಗಿದೆ.
ವಿವೇಕ್ ಅವರಿಗೆ ಬಹುಹಂತದ ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ ಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ಡಾ. ಜೆ. ರಾಧಾಕೃಷ್ಣನ್ ತಿಳಿಸಿದ್ದಾರೆ.
ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ವಿವೇಕ್ ಸೇರಿದಂತೆ 830 ಜನರು ಗುರುವಾರ ಕೋವಾಕ್ಸಿನ್ ಪಡೆದುಕೊಂಡಿದ್ದರು. ಇಂದು ಸಹ ಹಲವು ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. ಒಟ್ಟಾರೇ 5. 6 ಲಕ್ಷ ಜನರು ಕೋವಾಕ್ಸಿನ್ ತೆಗೆದುಕೊಂಡಿದ್ದಾರೆ. ಲಸಿಕೆಯಿಂದ ಅಡ್ಡ ಪರಿಣಾಮವಾಗುವುದನ್ನು ನಾವು ಗಮನಿಸಿಲ್ಲ, ಇದು ಲಸಿಕೆ ಸಂಬಂಧಿಸಿಲ್ಲ ಎಂದು ರಾಧಾಕೃಷ್ಣನ್ ಪುನರುಚ್ಚರಿಸಿದ್ದಾರೆ.
ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆಗಳು ಸುರಕ್ಷಿತವಾಗಿದ್ದು, ಲಸಿಕೆ ಪಡೆಯಲು ಜನರು ಮುಂದೆ ಬರುವಂತೆ ವಿವೇಕ್ ಲಸಿಕೆ ತೆಗೆದುಕೊಂಡ ನಂತರ ಹೇಳಿದ್ದರು.
Advertisement