ಚೆನ್ನೈ: ಚಿತ್ರವೊಂದರ ಚಿತ್ರೀಕರಣ ವೇಳೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಅವರ ಕೈಗೆ ಗಂಭೀರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ತಮಿಳಿನ ಖ್ಯಾತ ನಟ ಧುನುಷ್ ಅವರ ಬಹು ನಿರೀಕ್ಷಿತ ಚಿತ್ರ 'ತಿರುಚಿತ್ರಾಂಬಲಂ' ಚಿತ್ರದ ಫೈಟಿಂಗ್ ದೃಶ್ಯದ ಚಿತ್ರೀಕರಣವ ವೇಳೆ ಪ್ರಕಾಶ್ ರೈ ಅವರ ಕೈಗೆ ಗಂಭೀರ ಗಾಯವಾಗಿದೆ. ಹೀಗಾಗಿ ಅವರ ವೈದ್ಯ ಸ್ನೇಹಿತ ಡಾ.ಗುರುವಾ ರೆಡ್ಡಿ ಅವರ ಸಲಹೆಯ ಮೇರೆಗೆ ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಪ್ರಕಾಶ್ ರೈ ಅವರು ಟ್ವೀಟ್ ಮಾಡಿದ್ದು, ಚಿಕ್ಕದಾಗಿ ಕೆಳಗೆ ಬಿದ್ದೆ. ಕೈಗೆ ಚಿಕ್ಕ ಪೆಟ್ಟಾಗಿದ್ದು, ನನ್ನ ಸ್ನೇಹಿತ ಡಾ. ಗುರುವಾ ರೆಡ್ಡಿ ಜೊತೆ ಹೈದರಾಬಾದ್ ಗೆ ಶಸ್ತ್ರ ಚಿಕಿತ್ಸೆಗಾಗಿ ತೆರಳುತ್ತಿದ್ದೇನೆ. ಶೀಘ್ರದಲ್ಲೇ ಗುಣಮುಖನಾಗಿ ಬರುತ್ತೇನೆ. ನಿಮ್ಮ ಹಾರೈಕೆ ನನ್ನ ಜೊತೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 5ರಿಂದ ಚೆನ್ನೈನಲ್ಲಿ ನಟ ಧುನುಷ್ ರ 'ತಿರುಚಿತ್ರಾಂಬಲಂ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ನಟ ಪ್ರಕಾಶ್ ರೈ ಅವರೂ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ನಟ ಪ್ರಕಾಶ್ ರೈ ಕನ್ನಡದ ಕೆಜಿಎಫ್-2 ಚಿತ್ರದಲ್ಲಿ ನಟಿಸಿದ್ದು ಚಿತ್ರ ತೆರೆಗೆ ಸಿದ್ದವಾಗುತ್ತಿದೆ. ಅಲ್ಲದೆ ಮುಂಬೈ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಕುರಿತಾದ ಮೇಜರ್, ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ, ರಜಿನಿಕಾಂತ್ ಅಭಿನಯದ ಅಣ್ಣಾತ್ತೆ, ಎನಿಮಿ, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಠ ಮತ್ತು ಪೊನ್ನಿಯನ್ ಸೆಲ್ವನ್ ಚಿತ್ರಗಳಲ್ಲಿ ನಟ ಪ್ರಕಾಶ್ ರೈ ಅಭಿನಯಿಸಿದ್ದಾರೆ.
Advertisement