ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಂಭಾವನೆ ವಿಚಾರದಲ್ಲಿ ಜಗಳ, ವೈಮನಸ್ಸು ಏರ್ಪಟ್ಟ ಸಾಕಷ್ಟು ಉದಾಹರಣೆ ಇದೆ. ನಿರ್ಮಾಪಕರು ಸಂಭಾವನೆ ಕೊಟ್ಟಿಲ್ಲ ಎಂದು ದೂರುವ ಅನೇಕ ನಟ/ನಟಿಯರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪುನೀತ್ ಕುಟುಂಬದವರು ಮತ್ತೊಮ್ಮೆ ದೊಡ್ಡತನ ಮೆರೆದಿದ್ದಾರೆ.
ಪುನೀತ್ ನಿಧನರಾಗುವುದಕ್ಕೂ ಮೊದಲು ಅನೇಕ ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಕೆಲವು ಚಿತ್ರಗಳು ಪೂರ್ಣಗೊಂಡಿವೆ. ಉಳಿದ ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ಈ ಪೈಕಿ ಕೆಲ ಸಿನಿಮಾಗಳಿಗೆ ಪುನೀತ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದರು. ಈ ಪೈಕಿ ಒಂದು ಸಿನಿಮಾದ ಅಡ್ವಾನ್ಸ್ ಅನ್ನು ಪುನೀತ್ ಪತ್ನಿ ಅಶ್ವಿನಿ ಅವರು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು, ‘ಪುನೀತ್ ತಮ್ಮ ಡೈರಿಯಲ್ಲಿ ಬರೆದಿದ್ದಾರೆ.
ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ’ ಎಂದರು ಆ ಮಹಿಳೆ. ಹೀಗೆ ಹೇಳಿದ ಮಹಿಳೆ ಅಶ್ವಿನಿ ಪುನೀತ್ ರಾಜ್ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ’ ಎಂದು ಅವರು ಬರೆದುಕೊಂಡಿದ್ದಾರೆ.
Advertisement