ಬೆಂಗಳೂರು: ಲೆಜೆಂಡರಿ ನಟ ದಿಲೀಪ್ ಸಾಬ್ ಬುಧವಾರ ನಿಧನವಾಗುವುದರೊಂದಿಗೆ ಒಂದು ಯುಗಾಂತ್ಯವಾಗಿದೆ. ಮೇರುನಟನ ಅಗಲುವಿಕೆಗೆ ದೇಶಾದ್ಯಂತ ಸಂತಾಪದ ಮಹಾಪೂರವೇ ಹರಿದುಬಂದಿದೆ. ನಟಿ ಶರ್ಮೀಳಾ ಮಾಂಡ್ರೆ ಸೇರಿದಂತೆ ಹಲವರು ದಿಲೀಪ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ.
ಬೆಂಗಳೂರಿನೊಂದಿಗೆ ದಿಲೀಪ್ ಸಾಬ್ ಹೊಂದಿದ್ದ ನಿಕಟ ಸಂಪರ್ಕವನ್ನು ಶರ್ಮೀಳಾ ಮಾಂಡ್ರೆ ಹೇಳಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ತಾತ ರಮಾನಂದ್ ಮಾಂಡ್ರೆ ಹಾಗೂ ದಿಲೀಪ್ ಕುಮಾರ್ ಅವರೊಂದಿಗೆ ಇದ್ದ ಆಪ್ತ ಬಾಂಧವ್ಯವನ್ನು ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಹಂಚಿಕೊಂಡಿದ್ದಾರೆ.
ದಿಲೀಪ್ ಕುಮಾರ್ ನಮ್ಮೊಂದಿಗೆ ಕುಟುಂಬದಂತೆ ಇದ್ದರು, 2009ರಲ್ಲಿ ನಮ್ಮ ತಾತ ಸಾಯುವವರೆಗೂ ದಿಲೀಪ್ ಕುಮಾರ್ ಅವರೊಂದಿಗೆ ಅತ್ಯಂತ ಆಪ್ತವಾಗಿದ್ದೇವು ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ. ಎಷ್ಟರಮಟ್ಟಿಗೆಂದರೆ, ಅಜ್ಜಾ ಫೈನಾನ್ಷಿಯರ್ ಮತ್ತು ವಿತರಕರಾಗಿ ಚಿತ್ರರಂಗಕ್ಕೆ ಧುಮುಕುವುದಕ್ಕೆ ಒಂದು ಪ್ರಮುಖ ಕಾರಣ ದಿಲೀಪ್ ಸಾಬ್. ಅವರಿಲ್ಲದಿದ್ದರೆ ಕುಟುಂಬವು ಜವಳಿ ವ್ಯವಹಾರದಲ್ಲಿಯೇ ತೊಡಗಬೇಕಾಗಿತ್ತು ಎಂದು ಶರ್ಮೀಳಾ ಹೇಳಿದರು.
ಹೀಗೆ ತನ್ನ ತಾತ ಚಿತ್ರೋದ್ಯಮದಲ್ಲಿ ಬೆಳೆದು ಬಂದ ಹಾದಿಯನ್ನು ವಿವರಿಸಿದ ಶರ್ಮೀಳಾ, ಸಂಗಮ್ ಸೇರಿದಂತೆ ಹಲವಾರು ಚಿತ್ರಮಂದಿರಗಳನ್ನು ಹೊಂದಿದ್ದು, ಕರ್ನಾಟಕದ ಹಿಂದಿ ಚಲನಚಿತ್ರಗಳ ಏಕೈಕ ವಿತರಕರಾಗಿದ್ದರು ಎಂದು ತಿಳಿಸಿದರು.
ಬೆಂಗಳೂರಿಗೆ ಬಂದಾಗ ಮಾಂಡ್ರೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ ದಿಲೀಪ್ ಸಾಬ್ ಮತ್ತು ಸಾಯಿರಾ ಭಾನು ಅವರ ಹಿಂದಿನ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಶರ್ಮೀಳಾ, ದಿಲೀಪ್ ಕುಮಾರ್ ಬೆಂಗಳೂರಿಗೆ ಬಂದಾಗ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ನಮ್ಮ ತಾತನ ಮನೆಯಲ್ಲಿ ತಂಗುತ್ತಿದ್ದರು. ಬೇರೆ ಎಲ್ಲೂ ತಂಗಲು ನಮ್ಮ ಅಜ್ಜ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಹೇಳಿದರು.
ಅನಾರೋಗ್ಯಕ್ಕೆ ಒಳಗಾದ ನಂತರ ಬೆಂಗಳೂರಿಗೆ ಬರುವುದನ್ನು ದಿಲೀಪ್ ಕುಮಾರ್ ನಿಲ್ಲಿಸಿದರು. ಏಳನೇ ತರಗತಿಯಲಿದ್ದಾಗ ಅವರೊಂದಿಗೆ ಮಾತನಾಡಿದ್ದಾಗಿ ನೆನಪಿಸಿಕೊಳ್ಳುವ ಶರ್ಮೀಳಾ, ದಿಲೀಪ್ ಕುಮಾರ್, ಜನರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದರು. ಮೈಸೂರು ಮಸಾಲ ದೋಸೆ ಅಂದ್ರೆ ದಿಲೀಪ್ ಸಾಬ್ ಗೆ ಅಚ್ಚುಮೆಚ್ಚಿನ ಉಪಾಹಾರ ಈ ರೀತಿಯ ದೋಸೆ ಮುಂಬೈಯಲ್ಲಿ ಸಿಗದೆ, ಬಿಸಿ ಬಿಸಿ ದೋಸೆ ತಿನ್ನಲು ಅನೇಕ ಬಾರಿ ಬೆಂಗಳೂರಿಗೆ ಬರುತ್ತಿದ್ದಾಗಿ ಎಂದು ಅಜ್ಜ ನನಗೆ ತಿಳಿಸಿದ್ದರು ಎಂದು ಶರ್ಮೀಳಾ ಮಾಂಡ್ರೆ ಹೇಳಿದರು.
Advertisement