ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ನಿರ್ಮಾಪಕ ಉಮಾಪತಿ ವಿರುದ್ಧ ಅರುಣ ಕುಮಾರಿ ಮತ್ತೆ ಆರೋಪ

ನಮ್ಮ ಮಾನ-ಮರ್ಯಾದೆ ಎಲ್ಲಾ ಹರಾಜಾಗಿದೆ ಎಂದು ತಂದೆ-ತಾಯಿ ಹೊರಗೆ ಹಾಕಿದ್ದಾರೆ, ಇಂದು ನಾನು ಬೀದಿಗೆ ಬಿದ್ದಿದ್ದೇನೆ ಎಂದು ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆಯೆಸಗಲು ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಅರುಣ ಕುಮಾರಿ ಹೇಳಿದ್ದಾರೆ.
ಅರುಣಾ ಕುಮಾರಿ
ಅರುಣಾ ಕುಮಾರಿ

ಬೆಂಗಳೂರು: ನಾನು ಒಂಟಿ ಮಹಿಳೆ ಎಂದು ದುರುಪಯೋಗಪಡಿಸಿಕೊಂಡರು. ಇದರಿಂದ ಇಂದು ನಾನು ಬೀದಿಗೆ ಬಂದಿದ್ದೇನೆ, ನಮ್ಮ ಮಾನ-ಮರ್ಯಾದೆ ಎಲ್ಲಾ ಹರಾಜಾಗಿದೆ ಎಂದು ತಂದೆ-ತಾಯಿ ಹೊರಗೆ ಹಾಕಿದ್ದಾರೆ, ಇಂದು ನಾನು ಬೀದಿಗೆ ಬಿದ್ದಿದ್ದೇನೆ, ನನ್ನನ್ನು ಬೀದಿಗೆ ಹಾಕಿದವರನ್ನು ಸುಮ್ಮನೆ ಬಿಡಲ್ಲ, ಅವರನ್ನು ಕೂಡ ಬೀದಿಗೆ ತರುತ್ತೇನೆ ಎಂದು ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆಯೆಸಗಲು ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಅರುಣ ಕುಮಾರಿ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಅಜ್ಞಾತ ಸ್ಥಳದಿಂದ ದೂರವಾಣಿ ಮೂಲಕ ಮಾತನಾಡಿದ ಅವರು ನಿರ್ಮಾಪಕ ಉಮಾಪತಿಯವರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಾನು ಒಬ್ಬಂಟಿ ಗಂಡನನ್ನು ಬಿಟ್ಟವಳು, ಯಾವ ಬ್ಯಾಕ್ ಗ್ರೌಂಡ್ ಇಲ್ಲವೆಂದು ಈ ರೀತಿ ಮಾಡುತ್ತಿರುವುದು ಸರಿಯಲ್ಲ, ನಾನು ಉಮಾಪತಿಯವರಾಗಲಿ, ದರ್ಶನ್ ಅವರ ಮೇಲಾಗಲಿ ಆರೋಪ ಮಾಡಿರಲಿಲ್ಲ, ಆದರೆ ಇದರಲ್ಲಿ ನನ್ನನ್ನು ಮಧ್ಯೆ ತಂದಿಟ್ಟು ಅವರು ಮಜಾ ತೆಗೆದುಕೊಳ್ಳುತ್ತಿದ್ದಾರೆ. ನಾನು ಒಬ್ಬಂಟಿ ಎಂದು ಬಳಸಿ ಬಿಸಾಡಿಬಿಟ್ಟರು, ಈಗ ನಾನು ಎಲ್ಲಿಗೆ ಹೋಗಬೇಕು, ನನ್ನ ಮಾನ ಹರಾಜಾಗಿದೆ, ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದರು.

ಉಮಾಪತಿಯವರು ಪ್ರತಿ ಸುದ್ದಿಗೋಷ್ಠಿಯಲ್ಲಿ ಸುಳ್ಳನ್ನೇ ಹೇಳಿದ್ದಾರೆ, ಅವರು ನನಗೆ ಮಾರ್ಚ್ ತಿಂಗಳಿನಿಂದಲೇ ಪರಿಚಯ, ನಮ್ಮಿಬ್ಬರ ಮಧ್ಯೆ ಮಾಡಿರುವ ಚಾಟಿಂಗ್ ಗಳು ನನ್ನ ಬಳಿ ಇವೆ, ನಾನು ಅದನ್ನು ಬಹಿರಂಗಪಡಿಸುತ್ತೇನೆ. ಶ್ಯೂರಿಟಿ ಹಾಕುವ ವಿಚಾರದಲ್ಲಿ ನಾನು ಮೋಸ ಮಾಡಿದ್ದೇನೆ ಎನ್ನುತ್ತಾರೆ, ನಾನು ದರ್ಶನ್ ಅವರ ಕೈಯಿಂದಲಾದರೂ, ಉಮಾಪತಿ ಕೈಯಿಂದಲಾದರೂ ಒಂದು ರೂಪಾಯಿಯೂ ತೆಗೆದುಕೊಂಡಿಲ್ಲ, ಪ್ರಭಾವಿ ವ್ಯಕ್ತಿಗಳ ಹೆಸರು ಹೇಳಿಕೊಂಡು ನಾನು ಹೋಗಿಲ್ಲ, ಹಾಗಿರುವಾಗ ಅವರ ಆರೋಪಗಳನ್ನು ಕೇಳಿಕೊಂಡು ನಾನೇಕೆ ಸುಮ್ಮನಿರಬೇಕು, ಲೋನ್ ಪಡೆಯುವ ವಿಚಾರದಲ್ಲಿ ಕೂಡ ನಾನಾಗಿಯೇ ಹೋಗಿ ಅವರನ್ನು ಸಂಪರ್ಕಿಸಿರಲಿಲ್ಲ ಎಂದು ಅರುಣಾ ಹೇಳಿದ್ದಾರೆ.

ಮಾತೆತ್ತಿದರೆ ಹೆಣ್ಣುಮಕ್ಕಳಿಗೆ ಗೌರವ ನೀಡುತ್ತೇವೆ ಎಂದು ದರ್ಶನ್, ಉಮಾಪತಿಯವರು ಹೇಳುತ್ತಾರೆ, ಇದೇನಾ ಅವರು ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿ, ದರ್ಶನ್ ಮತ್ತು ಅವರ ಸ್ನೇಹಿತ ಹರ್ಷ ಮಧ್ಯೆ ಸ್ನೇಹ ಕಡಿಯಲು ಉಮಾಪತಿಯವರು ಪ್ರಯತ್ನಿಸಿ ನನ್ನನ್ನು ಪ್ರಕರಣದಲ್ಲಿ ಎಳೆದುತಂದಿದ್ದಾರೆ, ಇದಕ್ಕೆಲ್ಲಾ ಉಮಾಪತಿಯವರೇ ನೇರ ಹೊಣೆ ಎಂದು ಆರೋಪಗಳ ಸುರಿಮಳೆಯನ್ನು ಅರುಣ ಕುಮಾರಿ ಹೊರಿಸಿದ್ದಾರೆ.

ಸ್ನೇಹ ಕಡಿಯಲು ಪ್ರಯತ್ನ: ನಟ ದರ್ಶನ್ ಅವರು ಮೈಸೂರಿನ ಸೋಷಿಯಲ್ಸ್ ಪಬ್ ಮಾಲೀಕ ಹರ್ಷ ಜೊತೆ ಉತ್ತಮ ಸ್ನೇಹ ಹೊಂದಿದ್ದರು, ಇದು ತನಗೆ ಸಮಸ್ಯೆಯಾಗುತ್ತಿದೆ ಎಂದು ಉಮಾಪತಿಯವರು ಅವರಿಬ್ಬರ ಸ್ನೇಹ ಕಡಿಯಲು ನನ್ನನ್ನು ಬಿಟ್ಟಿದ್ದರು. ತಾವು ಹೇಳಿದ ಕೆಲಸ ಮಾಡಿಕೊಟ್ಟರೆ ಸೈಟ್ ಕೊಡಿಸುವುದಾಗಿ ಕೂಡ ಆಮಿಷವೊಡ್ಡಿದ್ದರು ಎಂದು ಅರುಣ ಕುಮಾರಿ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com