ಹಲವರ ಹೃದಯ ಗೆಲ್ಲಲು 'ಲವ್ ಮಾಕ್ಟೇಲ್' ಅವಕಾಶ ನೀಡಿತು: ಡಾರ್ಲಿಂಗ್ ಕೃಷ್ಣಾ

ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟರಲ್ಲಿ ಡಾರ್ಲಿಂಗ್ ಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿದೆ. 2020ರ ಆರಂಭದಲ್ಲಿ ತೆರೆಕಂಡ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ. 
ನಟ ಡಾರ್ಲಿಂಗ್ ಕೃಷ್ಣಾ
ನಟ ಡಾರ್ಲಿಂಗ್ ಕೃಷ್ಣಾ

ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟರಲ್ಲಿ ಡಾರ್ಲಿಂಗ್ ಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿದೆ. 2020ರ ಆರಂಭದಲ್ಲಿ ತೆರೆಕಂಡ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ. 

ಆದರೆ, ಕೊರೋನಾ 2ನೇ ಅಲೆ, ಲಾಕ್ಡೌನ್'ನಿಂದಾಗಿ ಡಾರ್ಲಿಂಗ್ ಕೃಷ್ಣಾ ಅವರ ಲವ್ ಮಾಕ್ಟೇಲ್2 ಚಿತ್ರದ ಚಿತ್ರೀಕರಣ ಸಾಧ್ಯವಾಗಿಲ್ಲ. 

ಮದುವೆ ಹಿನ್ನೆಲೆಯಲ್ಲಿ ಕೆಲ ಕಾಲ ಚಿತ್ರೀಕರಣದಿಂದ ದೂರ ಉಳಿದಿದ್ದೆ. ಬಳಿಕ ಮರಳಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮುಂದಾದಗ ಲಾಕ್ಡೌನ್ ಘೋಷಣೆಯಾಗಿ ಬಿಟ್ಟಿತ್ತು ಎಂದು ಕೃಷ್ಣಾ ಹೇಳಿದ್ದಾರೆ. 

ಇಂದು (ಜೂ.12) ಡಾರ್ಲಿಂಗ್​ ಕೃಷ್ಣ ಅವರ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಶುಗರ್ ಫ್ಯಾಕ್ಟರಿ ತಂಡದಿಂದ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಮೂಲಕ ಡಾರ್ಲಿಂಗ್ ಕೃಷ್ಣ ಅವರು ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಹಂಚುತ್ತಿದ್ದಾರೆ.

ಲವ್ ಮಾಕ್ಟೇಲ್2, ಶುಗರ್ ಫ್ಯಾಕ್ಟರಿ ಚಿತ್ರಗಳಷ್ಟೇ ಅಲ್ಲದೆ, ಕೃಷ್ಣಾ ಅವರ ಕೈಯಲ್ಲಿ  Shri Krishna@gmail.com, ಮಿಸ್ಟರ್ ಬ್ಯಾಚುಲರ್, ನಾಗೇಂದ್ರ ಪ್ರಸಾದ್ ಅವರ ಇನ್ನೂ ನಾಮಕರಣ ಮಾಡದ ಚಿತ್ರಗಳಿವೆ. ಇದಶ್ಟೇ ಅಲ್ಲದೆ, ಲವ್ ಮಿ ಆರ್ ಹೇಟ್ ಮಿ ಎಂಬ ಹೊಸ ಚಿತ್ರಕ್ಕೂ ಕೃಷ್ಣಾ ಸಹಿ ಮಾಡಿದ್ದಾರೆ. 

ಮಾಕ್ಟೇಲ್2 ಚಿತ್ರದ ಚಿತ್ರೀಕರಣವನ್ನು ಇನ್ನೂ 12 ದಿನಗಳ ಕಾಲ ಮಾಡಬೇಕಿದೆ. ಲಾಕ್ಡೌನ್ ತೆರವುಗೊಳ್ಳುವುದಕ್ಕಾಗಿ ಕಾಯುತ್ತಿದ್ದೇವೆ. ಈ ನಡುವೆ ರೀ ರೆಕಾರ್ಡಿಂಗ್ ಕೆಲಸಗಳನ್ನು ಮಾಡಲಾಗುತ್ತಿದೆ. ಮೊದಲಾರ್ಧ ಸಿನಿಮಾ ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಕೃಷ್ಣಾ ತಿಳಿಸಿದ್ದಾರೆ. 

ಲವ್ ಮಾಕ್ಟೇಲ್ ಚಿತ್ರ ಹಲವರ ಹೃದಯ ಗೆಲ್ಲಲು ಸಹಾಯ ಮಾಡಿತು. ಚಿತ್ರದ ಬಳಿಕ ನನ್ನ ಪ್ರತಿಭೆಯನ್ನು ಜನರು ಗುರ್ತಿಸುತ್ತಿದ್ದಾರೆ. ನಾನು ಮಾಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ನಂಬುತ್ತಿದ್ದಾರೆ. ಲವ್ ಮಾಕ್ಟೇಲ್'ಗೂ ಮೊದಲು ಈ ಬೆಳವಣಿಗೆಗಳು ಕಂಡು ಬಂದಿರಲಿಲ್ಲ ಎಂದಿದ್ದಾರೆ. 

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದೇನೆ. ಲವ್ ಮಾಕ್ಟೇಲ್ ಬಳಿಕ ನನ್ನ ಜೀವನದಲ್ಲಿ ಎರಡು ಪ್ರಮುಖ ಬದಲಾವಣೆಗಳಾಗಿವೆ. ನಿರ್ದೇಶಕರು ಇದೀಗ ವಿವಿಧ ಪಾತ್ರಗಳನ್ನು ಹೊತ್ತು ನನ್ನ ಬಳಿ ಬರುತ್ತಿದ್ದಾರೆ. ಲವ್ ಮಾಕ್ಟೇಲ್ ಬಳಿಕ ರೋಮ್ಯಾಂಟಿಕ್ ಕಥೆಗಳನ್ನು ಹಿಡಿದು ನಿರ್ದೇಶಕರು ನನ್ನ ಬಳಿ ಬರುತ್ತಿದ್ದಾರೆಂದು ಹೇಳಿದ್ದಾರೆ. 

ಡಾ.ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಂದ ನಾನು ಪ್ರೇರಿತನಾಗಿದ್ದೇನೆ. ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಬೇಕೆಂಬ ಗುರಿ ಹೊಂದಿದ್ದೇನೆ. 20 ಚಿತ್ರಗಳನ್ನು ಮಾಡಿ ಚಿತ್ರರಂಗದಿಂದ ದೂರ ಉಳಿಯುವ ವ್ಯಕ್ತಿ ನಾನಲ್ಲ. 100 ಚಿತ್ರಗಳಲ್ಲಾದರೂ ನಟಿಸಬೇಕೆಂಬ ಗುರಿಯಿದೆ. ಪ್ರತೀ ಚಿತ್ರ ಹಾಗೂ ಪ್ರತೀ ಪಾತ್ರ ನನಗೆ ಒಂದು ರೀತಿಯ ಅನುಭವವಾಗಿರಲಿದೆ. ಈ ಅನುಭವವನ್ನೇ ಯಶಸ್ಸಾಗಿ ಬಳಸಿಕೊಳ್ಳಲು ಇಚ್ಛಿಸುತ್ತೇನೆ. ಒಬ್ಬ ನಿರ್ದೇಶಕನಾಗಿ ಎರಡು ವರ್ಷಕ್ಕೊಮ್ಮೆ ಒಂದು ಚಿತ್ರವನ್ನು ತರಲು ಇಚ್ಛಿಸುತ್ತೇನೆಂದಿದ್ದಾರೆ. 

ಕೃಷ್ಣ ಅವರು ಕ್ರೀಡೆ ಸಂಬಂಧಿಸಿದ ಚಿತ್ರವೊಂದನ್ನು ನಿರ್ದೇಶಿಸಲು ಚಿಂತನೆ ನಡೆಸುತ್ತಿದ್ದು. ಚಿತ್ರದ ಕಥೆಯು ಚಾಂಪಿಯನ್ ಈಜುಪಟು ಕುರಿತಾಗಿ ಆಗಿರಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಮಿಲನಾ ನಾಗರಾಜ್ ಅವರು ರಾಷ್ಟ್ರೀಯ ಮಟ್ಟದ ಈಜುಪಟು ಆಗಿದ್ದು, ಚಿತ್ರದಲ್ಲಿ ಇವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. 

ಚಿತ್ರದ ಕಥೆ ಬರೆಯಲು ಇನ್ನೂ ಪ್ರಾರಂಭಿಸಿಲ್ಲ. ಪ್ರಸ್ತುತ ಇರುವ ಎಲ್ಲಾ ಕೆಲಸಗಳೂ ಪೂರ್ಣಗೊಂಡ ಬಳಿಕ ಈ ಚಿತ್ರದ ಕುರಿತು ಕೆಲಸಗಳನ್ನು ಆರಂಭಿಸಲಾಗುತ್ತದೆ ಎಂದು ಕೃಷ್ಣಾ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com