ಬೆಂಗಳೂರು: ಅವಳೇ ನನ್ನ ಹೆಂಡತಿ, ತುಂಬಿದ ಮನೆ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳ ನಿರ್ದೇಶಕ ಎಸ್ ಉಮೇಶ್. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ಉಮೇಶ್ ಅವರ ಇಂದಿನ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ.
ಈ ಸುದ್ದಿ ತಿಳಿದುಕೊಂಡ ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಅವರು ಉಮೇಶ್ ಅವರಿಗೆ ಒಂದು ಲಕ್ಷ ರೂಪಾಯಿ ನೀಡಲು ತಮ್ಮ ಸಹೋದರ ವೇಲು ಅವರಿಗೆ ತಿಳಿಸಿದ್ದಾರಂತೆ. ಅವಳೇ ನನ್ನ ಹೆಂಡತಿ ಚಿತ್ರ ಇನ್ನೂ ಡಬ್ಬಿಂಗ್ ಸಹ ಆಗಿರಲಿಲ್ಲ. ಆಗಲೇ ನಿರ್ಮಾಪಕ ಪ್ರಭಾಕರ್ ಹಾಗೂ ನಿರ್ದೇಶಕ ಎಸ್ ಉಮೇಶ್ ಅವರು ಮನೋಹರ್ ನಾಯ್ಡು ಅವರಿಗೆ ಆ ಚಿತ್ರ ತೋರಿಸಿ, ಕಥೆ ಹೇಳಿದರಂತೆ. ಆ ಚಿತ್ರದ ಕಥೆ ಕೇಳಿದ ಮನೋಹರ್ ನಾಯ್ಡು ಅವರು ಇದೊಂದು ಸೂಪರ್ ಹಿಟ್ ಚಿತ್ರ ಆಗುತ್ತದೆ ಅಂದಿದ್ದರಂತೆ.
ಆಗಿನಿಂದಲೂ ಎಸ್ ಉಮೇಶ್ ನಮ್ಮ ಲಹರಿ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದಾರೆ. ಅವರ ಕಷ್ಟಕ್ಕೆ ನೆರವಾಗುವುದು ನಮ್ಮ ಕರ್ತವ್ಯ ಎಂದಿದ್ದಾರೆ ಮನೋಹರ್ ನಾಯ್ಡು. ಇತ್ತೀಚೆಗೆ ಸಂಕಷ್ಟದಲ್ಲಿರುವ ಸಂಗೀತಗಾರರ ಸಂಕಷ್ಟಕ್ಕೆ ಮಿಡಿದ ಲಹರಿ ಸಂಸ್ಥೆ ಹತ್ತು ಲಕ್ಷ ರೂಪಾಯಿ ನೀಡಿತ್ತು. ಕನ್ನಡ ಚಿತ್ರರಂಗ ಒಂದು ಅವಿಭಕ್ತ ಕುಟುಂಬವಿದಂತೆ ನಾವೆಲ್ಲ ಒಂದೇ ಮನೆಯ ಸದಸ್ಯರು. ಒಬ್ಬರ ಕಷ್ಟಕ್ಕೆ ಒಬ್ಬರು ಸ್ಪಂದಿಸುವ ಗುಣವಿರಬೇಕು ಎಂದಿದ್ದಾರೆ ಲಹರಿ ವೇಲು.
Advertisement