UNI
ಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿ ಚಿತ್ರನಟ ಯಶ್ ವಿರುದ್ಧ ರೈತರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರೈತರ ಪ್ರಗತಿಯ ಬಗ್ಗೆ ಮಾತನಾಡುವ ನಟ, ತನ್ನ ಜಮೀನು ಉಳಿಸಿಕೊಳ್ಳುವ ಸಲುವಾಗಿ ಅಕ್ರಮವಾಗಿ ರಸ್ತೆ ನಿರ್ಮಿಸಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದೆ.
ಹಾಸನ ಜಿಲ್ಲೆಯ ದುದ್ದ ಹೋಬಳಿಗೆ ಸೇರಿದ ತಿಮ್ಮಲಾಪುರ ಗ್ರಾಮದ ಬಳಿ ಯಶ್ ಜಮೀನು ಖರೀದಿಸಿದ್ದು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅವರ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿತ್ತು. ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಶನಿವಾರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ ನಟ ಯಶ್ ಕುಟುಂಬ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದರ ಬೆನ್ನಲ್ಲೇ ಯಶ್ ವಿರುದ್ಧ ರೈತ ಸಂಘ ದೂರು ದಾಖಲಿಸಿದೆ.
ರೈತರಿಗಾಗಿ ಏನನ್ನಾದರೂ ಮಾಡುತ್ತೇನೆ, ಜಮೀನು ಬೇಕಾದರೂ ಬಿಟ್ಟುಕೊಡುತ್ತೇನೆ ಎನ್ನುವ ಯಶ್, ಕಾಂಪೌಂಡ್ ನಿರ್ಮಿಸಿ ರೈತರು ಸಂಚರಿಸುವ ದಾರಿಯನ್ನೇ ಮುಚ್ಚಿದ್ದಾರೆ. ದಾರಿ ಬಿಡುವಂತೆ ಮನವಿ ಮಾಡಿದರೂ ಒಪ್ಪಿಲ್ಲ. ಅಲ್ಲದೆ ಬಾಡಿಗೆ ಗೂಂಡಾಗಳನ್ನು ಬಿಟ್ಟು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ ಎಂದು ಅಣ್ಣಾಜಪ್ಪ ಗಂಭೀರ ಆರೋಪ ಮಾಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿದ್ದಾರೆ.