ಚಿತ್ರದುರ್ಗ: ಕೊರೋನಾ ಸೋಂಕಿಗೊಳಗಾಗಿದ್ದ ನಾನು ಸಾವಿನ ಮನೆಯ ಬಾಗಿಲು ತಟ್ಟಿ ಮರಳಿ ಬಂದಿದ್ದೇನೆಂದು ತಮ್ಮ ಅನುಭವವನ್ನು ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಅಶೋಕ ಬಾದರದಿನ್ನಿ ಅವರ ಪುತ್ರ ಪ್ರಕಾಶ್ ಬಾದರದಿನ್ನಿಯವರು ಹೇಳಿದ್ದಾರೆ.
ಪ್ರಕಾಶ್ ಬಾದರದಿನ್ನಿಯವರಿಗೆ ಕೆಲ ದಿನಗಳ ಹಿಂದೆಯೇ ಕೊರೋನಾ ಸೋಂಕುಗೊಳಗಾಗಿದ್ದು, ಗಂಗಾವತಿ ಆಸ್ಪತ್ರೆಯಲ್ಲಿ 14 ದಿನಗಳಿಂದ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಸೋಂಕಿನಿಂದ ಗುಣಮುಖರಾಗಿರುವ ಅವರು ತಮ್ಮ ಅನುಭವ ಹಾಗೂ ನೋವನ್ನು ಹಂಚಿಕೊಂಡಿದ್ದಾರೆ.
ಏನಾಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಲೇ ಇರಲಿಲ್ಲ. ಸೋಂಕು ತಗುಲಿದ ಮೂರನೇ ದಿನ ನನಗೆ ಪ್ರಜ್ಞೆ ಬಂದಿತ್ತು. ಬಹಳ ನಿತ್ರಾಣನಾಗಿದ್ದೆ. ನನಗೆ ಚಿಕಿತ್ಸೆ ನೀಡಿದ್ದ ನರ್ಸ್ ಗಳು ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ನಾನಿದ್ದ ವಾರ್ಡ್ ನಲ್ಲಿಯೇ ಮೃತದೇಹಗಳನ್ನೂ ನೋಡಿದ್ದೆ. ಈ ವೇಳೆ ಕೊರೋನಾ ನಿಯಮಗಳನ್ನು ಪಾಲನೆ ಮಾಡುವುದು ಎಷ್ಟು ಮುಖ್ಯ ಎಂಬುದು ತಿಳಿಯಿತು ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ 32 ವರ್ಷದ ವ್ಯಕ್ತಿಯೊಬ್ಬರು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ನಾನು ಮತ್ತು ಇತರೆ ರೋಗಿಗಳು ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೆವು. ಆದರೆ, ಮೂರನೇ ದಿನ ಆ ವ್ಯಕ್ತಿ ಸಾವನ್ನಪ್ಪಿದ್ದ. ವಾರ್ಡ್ ನಲ್ಲಿ ಹಿರಿಯ ರೋಗಿಗಳೇ ಮನೋಶಾಸ್ತ್ರಜ್ಞರಾಗಿದ್ದರು. ಅವರೇ ನನ್ನ ಧೈರ್ಯ ಹೆಚ್ಚಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಲ್ಪ ಮಟ್ಟದ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಚಿತ್ರದುರ್ಗದಲ್ಲಿ ವೈದ್ಯರೊಬ್ಬ ಬಳಿ ತೆರಳಿದ್ದೆ. ಬಳಿಕ ನಾಲ್ಕನೇ ದಿನ ನಾನೇ ಸ್ವಯಂಪ್ರೇರಿತನಾಗಿ ಕೊರೋನಾ ಪರೀಕ್ಷೆಗೊಳಗಾಗಿದ್ದೇ. ಪರೀಕ್ಷಾ ವರದಿ ಬರುವುದು ತಡವಾಗಿತ್ತು. ಅಷ್ಟರಲ್ಲಾಗಲೇ ನನಗೆ ಉಸಿರಾಟ ಸಮಸ್ಯೆ ಶುರುವಾಗಿತ್ತು. ಸೆಪ್ರೆಂಬರ್ 21 ರಂದು ಸಹೋದರಿ ನೆಲೆಸಿದ್ದ ಕೊಪ್ಪಳಕ್ಕೆ ತೆರಳಿದ್ದೆ. ನಾನು ಬದುಕುಳಿಯುವುದಿಲ್ಲ ಎಂಬುದೇ ಆದರೆ, ಕೊನೆಯ ಕ್ಷಣಗಳನ್ನು ನನ್ನ ಸಹೋದರಿ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೆ. ಕೊಪ್ಪಳದ ಆಸ್ಪತ್ರೆ ರೋಗಿಗಳಿಂದ ಭರ್ತಿಯಾಗಿತ್ತು. ಬಳಿಕ ಗಂಗಾವತಿಗೆ ತೆರಳಿದ್ದೆ. ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದ ಸಂದೇಶ ನನ್ನ ಮೊಬೈಲ್'ಗೆ ಬಂದಿತ್ತು ಎಂದು ತಮ್ಮ ಅನುಭವವನ್ನು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
Advertisement