ಬೆಂಗಳೂರು: ಕೋವಿಡ್ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ಕೊಚ್ಚಿ ಹೋಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿಯೂ ಅನೇಕ ನಟ, ನಿರ್ಮಾಪಕ, ನಿರ್ದೇಶಕರು ಮೃತಪಟ್ಟಿದ್ದಾರೆ. ಈಗ ಮತ್ತೋರ್ವ ನಿರ್ದೇಶಕ ಅಭಿರಾಮ್ ಕೂಡ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಚಿತ್ರರಂಗಕ್ಕೆ ಸಂಬಂಧಿಸಿ ಕೋವಿಡ್ ಎರಡನೇ ಅಲೆ ಆರಂಭದಲ್ಲಿ ಜೀವಬಿಟ್ಟ ಮೊದಲ ವ್ಯಕ್ತಿ ಡಿ.ಎಸ್. ಮಂಜುನಾಥ್. ಸಂಯುಕ್ತ-2 ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಮಂಜುನಾಥ್ ಚಿತ್ರರಂಗಕ್ಕೆ ಬಂದಿದ್ದವರು.
ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದರು. ಸದ್ಯ ೦% ಲವ್ ಚಿತ್ರದಲ್ಲಿ ಹೀರೋ ಆಗಿ ಕೂಡಾ ನಟಿಸುತ್ತಿದ್ದರು. ಸಂಯುಕ್ತ-2 ಮತ್ತು ೦% ಲವ್ ಎರಡೂ ಚಿತ್ರದ ನಿರ್ದೇಶಕ ಅಭಿರಾಮ್. ಈಗ ಅಭಿರಾಮ್ ಕೂಡಾ ಮಂಜುನಾಥ್ ಅವರನ್ನು ಹಿಂಬಾಲಿಸಿದ್ದು, ಗುರುವಾರ ಮೇ 28ರಂದು ಕೊನೆಯುಸಿರೆಳೆದಿದ್ದಾರೆ.
ಕಳೆದೊಂದು ವಾರದಿಂದ ಜ್ವರ, ಕೆಮ್ಮು ಇತ್ಯಾದಿ ಅನಾರೋಗ್ಯದ ಲಕ್ಷಣಗಳಿದ್ದರೂ ಈತ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ. ಕನಿಷ್ಟ ಕೋವಿಡ್ ಪರೀಕ್ಷೆಯನ್ನಾದರೂ ಮಾಡಿಸಿಕೊಳ್ಳದೆ ಉಸಿರಾಟದ ತೊಂದರೆ ಶುರುವಾಗುವ ತನಕ ಮನೆಯಲ್ಲೇ ಇದ್ದ ಕಾರಣವೋ ಏನೋ ಇಂದು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಕನಸಿಟ್ಟು ರೂಪಿಸಿದ ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಇಬ್ಬರನ್ನೂ ಕೊರೋನಾ ನುಂಗಿಹಾಕಿದೆ.
Advertisement