ರಾಜು ದೇವಸಂದ್ರ ನಿರ್ದೇಶಿಸಿರುವ ಸೆಕೆಂಡ್ ಲೈಫ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಹಿಂದೆ ಇವರು ‘ಅಕ್ಷತೆ’ ಕತ್ಲೆ ಕಾಡು ಮತ್ತು ಗೋಸಿ ಗ್ಯಾಂಗ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದು ನಾಲ್ಕನೇ ಚಿತ್ರ.
‘ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಚಿತ್ರ. ಮಂಜುಳಾ ರಮೇಶ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ನಾನು ನಿರ್ದೇಶನ ಮಾಡಿದ್ದೇನೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ’ ಎಂದು ನಿರ್ದೇಶಕ ರಾಜು ದೇವಸಂದ್ರ ತಿಳಿಸಿದರು.
‘ವಿಭಿನ್ನ ಕಥೆಯಿರುವ ಚಿತ್ರ ನಮ್ಮದು. ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರುಳು ಬಳ್ಳಿ(ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ.
ಒಂದು ಬೇಜಾರಿನ ಸಂಗತಿ ಅಂದರೆ, ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ವಿಧಿಬರಹವೇ ಬೇರೆಯಾಗಿತ್ತು. ಈಗ ನಮ್ಮ ಚಿತ್ರದ ಹಾಡು ಪಿ.ಆರ್.ಕೆ ಮೂಲಕವೇ ಬಿಡುಗಡೆಯಾಗಿರುವುದು ಖುಷಿಯ ವಿಚಾರ’ ಎಂದು ನಾಯಕ ಆದರ್ಶ್ ಗುಂಡುರಾಜ್ ತಿಳಿಸಿದರು.
ಜಯಣ್ಣ ಚಿತ್ರಗಳ ಅಡಿಯಲ್ಲಿ ನಿರ್ಮಿಸಲಾದ ಸೆಕೆಂಡ್ ಲೈಫ್ ನಲ್ಲಿ, ಸಿಂಧು ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ದೃಷ್ಟಿಹೀನ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರದೀಪ್ ಮತ್ತು ನವೀನ್ ಶಕ್ತಿ ಪ್ರತಿಸ್ಪರ್ಧಿಗಳಾಗಿ ನಟಿಸುತ್ತಿದ್ದು, ಚಿತ್ರದ ಸಾಹಸವನ್ನು ಸಾಹಸ ನಿರ್ದೇಶಕ ವಿಕ್ರಮ್ ಮೋರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
Advertisement