ನ್ಯೂಯಾರ್ಕ್: ಟಾಲಿವುಡ್ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಗೆ ತಮ್ಮ ಆರ್ಆರ್ಆರ್ ಸಿನಿಮಾಗಾಗಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ (ಎನ್ವೈಎಫ್ಸಿಸಿ) ನಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು 'ವೆರೈಟಿ' ಮ್ಯಾಗಜಿನ್ ವರದಿ ಮಾಡಿದೆ.
ಶುಕ್ರವಾರ ನಡೆದ ಗಾಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜಮೌಳಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಅಕಾಡೆಮಿ ಪ್ರಶಸ್ತಿಗಳ ಅಂತರರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು 'ಆರ್ಆರ್ಆರ್' ಸಿನಿಮಾ ಆಯ್ಕೆಯಾಗದಿದ್ದರೂ, ಅತ್ಯುತ್ತಮ ಚಿತ್ರ ಸೇರಿದಂತೆ ಸಾಮಾನ್ಯ ವಿಭಾಗಗಳಲ್ಲಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತು 'ವೆರೈಟಿ' ಮ್ಯಾಗಜಿನ್ ಹೇಳುವಂತೆ, ಇದೊಂದು ಯಶಸ್ವಿ ಸಿನಿಮಾದಂತೆ ತೋರುತ್ತದೆ. ರಾಜಮೌಳಿ ಅವರ ಗೆಲುವು ಬಲವಾದ ಪ್ರಭಾವವನ್ನುಂಟು ಮಾಡುತ್ತದೆ ಎಂದು ಎಂದು ಬಣ್ಣಿಸಲಾಗಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ತೆಲುಗಿನ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರನ್ನಿಟ್ಟುಕೊಂಡು ಮಾಡಿದ ಕಾಲ್ಪನಿಕ ಕಥೆಯಾಗಿದೆ. ಈ ಸಿನಿಮಾವು ಬಾಕ್ಸ್ ಆಪೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.
‘ಫಾರ್ ಯುವರ್ ಕನ್ಸಿಡರೇಷನ್’ ಅಡಿಯಲ್ಲಿ 14 ವಿಭಾಗಗಳಲ್ಲಿ ‘ಆರ್ಆರ್ಆರ್’ ಚಿತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಅತ್ಯುತ್ತಮ ನಿರ್ಮಾಪಕ (ಡಿವಿವಿ ದಾನಯ್ಯ), ಅತ್ಯುತ್ತಮ ನಿರ್ದೇಶಕ (ಎಸ್ಎಸ್ ರಾಜಮೌಳಿ), ಅತ್ಯುತ್ತಮ ನಟ (ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್), ಅತ್ಯುತ್ತಮ ಪೋಷಕ ನಟ (ಅಜಯ್ ದೇವಗನ್), ಅತ್ಯುತ್ತಮ ಪೋಷಕ ನಟಿ (ಆಲಿಯಾ ಭಟ್) ಅವರನ್ನು ಪರಿಗಣಿಸುವಂತೆ ಹೇಳಲಾಗಿತ್ತು ಎಂದು ನಿರ್ದೇಶಕ ರಾಜಮೌಳಿ ಅವರು ಟ್ವೀಟ್ ಮಾಡಿದ್ದರು.
Advertisement