ಚೆನ್ನೈ: ತಮಿಳು ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ಜೋಡಿ ವಿಚ್ಛೇದನದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಧನುಷ್ ಮತ್ತು ಐಶ್ವರ್ಯಾ ದಂಪತಿ ವಿಚ್ಛೇದನ ಕೈ ಬಿಟ್ಟು ದಾಂಪತ್ಯ ಮುಂದುವರೆಸಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇದು ಅವರ ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ಸಂತಸ ತಂದಿದೆ.
ಧನುಷ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಇಬ್ಬರನ್ನು ಮತ್ತೆ ಒಂದು ಮಾಡಲು ರಜನಿಕಾಂತ್ ಮತ್ತು ಕುಟುಂಬದವರು ತುಂಬ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ಅವರ ಮನೆಯಲ್ಲಿ ಸಂದಾನ ಸಭೆ ಮಾಡಲಾಗಿದ್ದು ಅಲ್ಲಿ ಧನುಷ್ ದಂಪತಿ ತಮ್ಮ ಸಮಸ್ಯೆ ಬಗೆಹರಿಸಿಕೊಂಡು ಒಟ್ಟಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕಳಿಬರುತ್ತಿದೆ. ಆದರೆ ಈ ಬಗ್ಗೆ ಧನುಷ್ ಅಥವಾ ಐಶ್ವರ್ಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಕಾಲಿವುಡ್ನ ಸ್ಟಾರ್ ದಂಪತಿಗಳೆಂದೇ ಖ್ಯಾತರಾಗಿರುವ ನಟ ಧನುಷ್ ಮತ್ತು ಸೂಪರ್ಸ್ಟಾರ್ ರಜಿನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ಜನವರಿ 17ರಂದು ಏಕಾಏಕಿ ಗುಡ್ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್ ನೀಡಿದ್ದರು. ಇಬ್ಬರು ಡಿವೋರ್ಸ್ ಘೋಷಣೆ ಮಾಡಿ 9 ತಿಂಗಳಗಳೇ ಕಳೆದಿವೆ. ಇದೀಗ ಬಂದಿರುವ ಖುಷಿಯ ಸಂಗತಿ ಏನೆಂದರೆ, ಸ್ಟಾರ್ ದಂಪತಿ ಎಲ್ಲವನ್ನು ಮರೆತು ಮತ್ತೆ ಒಂದಾಗಲು ಮುಂದಾಗಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ಎರಡು ಕುಟುಂಬಗಳು ಮನವೊಲಿಸಿದ ಬಳಿಕ ಧನುಷ್ ಮತ್ತು ಐಶ್ವರ್ಯಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಇಬ್ಬರು ಮತ್ತೆ ಒಂದಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಡಿವೋರ್ಸ್ ಘೋಷಣೆ ಮಾಡಿ 9 ತಿಂಗಳೇ ಕಳೆದಿದ್ದರೂ ಈವರೆಗೂ ಯಾರೊಬ್ಬರು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿಲ್ಲ. ಎರಡು ಕುಟುಂಬಗಳು ಸೇರಿ ಕಳೆದ 9 ತಿಂಗಳಿನಿಂದಲೂ ಸಾಕಷ್ಟು ಬಾರಿ ಇಬ್ಬರ ಮನವೊಲಿಸಿದ್ದು, ಕುಟುಂಬದವರ ಮಾತಿಗೆ ತಮ್ಮ ಡಿವೋರ್ಸ್ ನಿರ್ಧಾರವನ್ನು ಪಕ್ಕಕ್ಕೆ ಇಡಲು ಮುಂದಾಗಿದ್ದಾರೆ ಎನ್ನಲಾಗಿದೆ.
Advertisement