ಕನ್ನಡ ನಟ, ನಿರ್ದೇಶಕ ಸೈಯದ್ ಅಶ್ರಫ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಅತ್ತಿಗೆ' ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸೈಯದ್ ಆ ನಂತರದಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.
ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಇಂದು ಬೆಳಗ್ಗೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 42ರ ವಯಸ್ಸಿನ ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ಕನ್ನಡ ಕಿರುತೆರೆ ಜಗತ್ತಿಗೆ ಭಕ್ತಿ ಪ್ರಧಾನ ಮತ್ತು ಫ್ಯಾಂಟಿಸಿ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು.
ಬಿಕಾಂ, ಹಿಂದಿ ಬಿ ಎಡ್, ಡಿಪ್ಲೋಮಾ ಇನ್ ಆಟೋಮೊಬೈಲ್ ಓದಿರುವ ಸೈಯದ್ ಚಿತ್ರರಂಗದಲ್ಲಿ ಬ್ಯುಸಿಯಾದರು. ಸುಂದರವಾಗಿ ಕನ್ನಡ ಮಾತನಾಡುವ ಸೈಯದ್ ಅಶ್ರಫ್ ಅವರು 'ಅಮ್ಮ ನಾಗಮ್ಮ' ಎಂಬ ಗ್ರಾಫಿಕಲ್ ಧಾರಾವಾಹಿಯಲ್ಲಿ ಕೆಲಸ ಮಾಡಲು ಚೆನ್ನೈಗೆ ಹೋಗಿ ಗ್ರಾಫಿಕ್ಸ್ ಕಲಿತು ಬಂದಿದ್ದರು. 'ಹೋಗ್ಲಿ ಬಿಡಿ ಸರ್', 'ನಾಕುತಂತಿ', 'ತಕಧಿಮಿತ', 'ಪ್ರೀತಿ ಪ್ರೇಮ', 'ಪಾಂಡುರಂಗ', 'ಚಕ್ರವಾಕ','ನಾಗಮಣಿ', 'ಅಳುಗುಳಿಮನೆ' ಧಾರಾವಾಹಿ ನಿರ್ದೇಶಿಸಿದ್ದರು.
ಸೈಯದ್ ಅಶ್ರಫ್ ಅವರಿಗೆ ಪತ್ನಿ, ಓರ್ವ ಮಗಳು, ಓರ್ವ ಮಗ ಇದ್ದಾರೆ. ಈಗ ಈ ಕುಟುಂಬವನ್ನು ಸೈಯದ್ ಬಿಟ್ಟು ಹೋಗಿದ್ದಾರೆ. ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಸ್ವಗೃಹದಲ್ಲಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ನಂತರ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
Advertisement