ತೆಲಂಗಾಣದ ಗ್ರಾಮವನ್ನು ದತ್ತು ತೆಗೆದುಕೊಂಡ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ಮಾಪಕ ಅಭಿಷೇಕ್ ಅಗರ್ವಾಲ್

'ದಿ ಕಾಶ್ಮೀರ್ ಫೈಲ್ಸ್' ಮತ್ತು 'ಕಾರ್ತಿಕೇಯ 2' ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿರುವ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗ್ರಾಮವೊಂದನ್ನು ದತ್ತು ತೆಗೆದುಕೊಂಡಿದ್ದಾರೆ.
ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ನಿರ್ಮಾಪಕ ಅಭಿಷೇಕ್ ಅಗರ್ವಾಲ್
ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ನಿರ್ಮಾಪಕ ಅಭಿಷೇಕ್ ಅಗರ್ವಾಲ್

ಚೆನ್ನೈ: 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ಕಾರ್ತಿಕೇಯ 2' ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಲು ಹೆಸರುವಾಸಿಯಾಗಿರುವ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗ್ರಾಮವೊಂದನ್ನು ದತ್ತು ತೆಗೆದುಕೊಂಡಿದ್ದಾರೆ.

ರಂಗಾರೆಡ್ಡಿ ಜಿಲ್ಲೆಯ ಕಂದುಕೂರು ಮಂಡಲದ ತಿಮ್ಮಾಪುರ ಎಂಬ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಕುತೂಹಲದ ಸಂಗತಿ ಎಂದರೆ ತಿಮ್ಮಾಪುರ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ಜನ್ಮಸ್ಥಳ.

ಜನಸೇವೆಗಾಗಿ ಚಂದ್ರಕಲಾ ಫೌಂಡೇಶನ್ ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿರುವ ನಿರ್ಮಾಪಕರು, ತಮ್ಮ ತಂದೆ ತೇಜ್ ನಾರಾಯಣ್ ಅಗರ್ವಾಲ್ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಿಮ್ಮಾಪುರ ಗ್ರಾಮವನ್ನು ದತ್ತು ಪಡೆದಿದ್ದಾರೆ.

ಇತ್ತೀಚೆಗೆ, ಚಂದ್ರಕಲಾ ಫೌಂಡೇಶನ್‌ನ ಮೂರನೇ ಸಾರ್ಥಕ್ ದಿವಸ್ ಅನ್ನು ಹೈದರಾಬಾದ್‌ನ ಜೆಆರ್‌ಸಿ ಸಮಾವೇಶದಲ್ಲಿ ಆಚರಿಸಲಾಯಿತು. ತಿಮ್ಮಾಪುರದ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.

ನಟ ಅನುಪಮ್ ಖೇರ್ ಮಾತನಾಡಿ, 'ಅಭಿಷೇಕ್ ಅಗರ್ವಾಲ್ ಅವರು ತಮ್ಮ ತಂದೆಯ ಜನ್ಮದಿನದಂದು ಗ್ರಾಮವನ್ನು ದತ್ತು ತೆಗೆದುಕೊಂಡಿರುವುದು ಅತೀವ ಸಂತಸ ತಂದಿದೆ. ಮಹತ್ಕಾರ್ಯ ಮಾಡುವವರಿಗೆ ಎಲ್ಲರ ಆಶೀರ್ವಾದವಿರುತ್ತದೆ. ಅಭಿಷೇಕ್ ಅಗರ್ವಾಲ್ ಜೊತೆ ನಾವಿದ್ದೇವೆ. ತಿಮ್ಮಾಪುರದಲ್ಲಿ ಮತ್ತೊಮ್ಮೆ ಭೇಟಿಯಾಗುತ್ತೇವೆ. ನನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಆಶೀರ್ವಾದಗಳು' ಎಂದಿದ್ದಾರೆ.

'ಅಲೆಗಳಿಗೆ ಹೆದರಿದರೆ ದೋಣಿ ಮುಂದೆ ಸಾಗುವುದಿಲ್ಲ. ಪ್ರಯತ್ನ ಪಟ್ಟವರಿಗೆ ಸೋಲು ಇಲ್ಲ. ನೀವೆಲ್ಲರೂ ದೊಡ್ಡವರಾಗಿ ಬೆಳೆಯಬೇಕು' ಎಂದು ತಿಳಿಸಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮಾತನಾಡಿ, 'ಗ್ರಾಮವನ್ನು ದತ್ತು ಪಡೆಯುವುದು ಸಣ್ಣ ವಿಷಯವಲ್ಲ ಮತ್ತು ಈ ಗ್ರಾಮದಲ್ಲಿ ಇರುವವರಿಗೆ ಎಲ್ಲರಿಗೆ ಮೂಲ ಸೌಕರ್ಯ ಕಲ್ಪಿಸಲು ಇವರ ಕುಟುಂಬ ನಿರ್ಧರಿಸಿದೆ. ಗ್ರಾಮದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಇತರರಿಗೂ ಪ್ರೇರಣೆಯಾಗಬೇಕು' ಎಂದರು.

ನಿರ್ದೇಶಕ ವಿವೇಕ ಅಗ್ನಿಹೋತ್ರಿ ಮಾತನಾಡಿ, 'ಗ್ರಾಮೀಣ ಪ್ರದೇಶಗಳು ಭಾರತದ ಬೆನ್ನೆಲುಬು. ಹಳ್ಳಿಗಳು ನಾಗರಿಕತೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ. ಅಂತಹ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನಿಜವಾದ ಧರ್ಮ ಮತ್ತು ದೇಶಭಕ್ತಿ. ಅಭಿಷೇಕ್ ಅಗರ್ವಾಲ್ ಅವರು ತಿಮ್ಮಾಪುರವನ್ನು ಸ್ವಾವಲಂಬಿ, ಆದರ್ಶ ಗ್ರಾಮವನ್ನಾಗಿ ಮಾಡಲು ಸಂಕಲ್ಪ ಮಾಡಿರುವುದು ಅದ್ಭುತವಾಗಿದೆ. ಅವರ ಮಕ್ಕಳು ಕೂಡ ಈ ಸೇವೆಗಳನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com