ಯಾವನೋ ಬಂದು ಎದೆ ಮುಟ್ಟಿದ, ಬ್ಯಾಕ್ ಮುಟ್ಟಿದ ಅಂದ್ರೆ ಹೇಗೆ ಸುಮ್ಮನಿರೋದು? ಕಪಾಳ ಮೋಕ್ಷ ಪ್ರಕರಣಕ್ಕೆ ಸಾನ್ಯಾ ಅಯ್ಯರ್ ಪ್ರತಿಕ್ರಿಯೆ

ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ ಮೇಲೆ ಪುತ್ತೂರಿನಲ್ಲಿ ಹಲ್ಲೆ ಆಗಿದೆ ಎನ್ನುವ ವಿಚಾರ ಕಳೆದ ಎರಡು ದಿನಗಳಿಂದ ಭಾರೀ ಸದ್ದು ಮಾಡಿತ್ತು. ಈ ಕುರಿತು ಸಾನ್ಯಾ ಸ್ಪಷ್ಟನೆ ನೀಡಿದ್ದಾರೆ.
ಸಾನ್ಯಾ ಅಯ್ಯರ್
ಸಾನ್ಯಾ ಅಯ್ಯರ್

ಬೆಂಗಳೂರು: ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ ಮೇಲೆ ಪುತ್ತೂರಿನಲ್ಲಿ ಹಲ್ಲೆ ಆಗಿದೆ ಎನ್ನುವ ವಿಚಾರ ಕಳೆದ ಎರಡು ದಿನಗಳಿಂದ ಭಾರೀ ಸದ್ದು ಮಾಡಿತ್ತು. ಈ ಕುರಿತು ಸಾನ್ಯಾ ಸ್ಪಷ್ಟನೆ ನೀಡಿದ್ದಾರೆ.

ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯಾ ಮಾತನಾಡಿದ್ದಾರೆ.

ಆಯೋಜಕರು ಬಂದು ನಮ್ಮನ್ನು ವೇದಿಕೆ ಮೇಲೆ ಕೂರಿಸಿದರು. ಶಾಪಿಂಗ್ ಹೋದ್ರೆ, ಥಿಯೇಟರ್‌ಗೆ ಹೋದ್ರೆ ಎದೆ ಮುಟ್ಟುತ್ತಾರೆ, ಬ್ಯಾಕ್ ಮುಟ್ಟುತ್ತಾರೆ. ಈ ಅನುಭವ ನನಗೂ ಆಗಿದೆ. ಇದನ್ನೆಲ್ಲ ನಾವು ಯಾರಿಗೆ ಹೇಳೋದು? ಎಲ್ಲ ಗಂಡಸರು ಒಂದೇ ತರ ಅಂತ ಹೇಳೋಕೆ ಆಗಲ್ಲ. ಆದರೆ ಪೂತ್ತೂರಿನಲ್ಲಿ ನಮಗೆ ಸಮಸ್ಯೆ ಆಗಿದ್ದಕ್ಕೆ ನಾವು ಕೂಗಾಡಿದ್ವಿ. ಆಯೋಜಕರು, ಪುತ್ತೂರಿನವರು ನಮಗೆ ತುಂಬ ಪ್ರೀತಿ ಕೊಟ್ಟಿದ್ದಾರೆ. ಅದಂತೂ ನಿಜ ಎಂದಿದ್ದಾರೆ.

ಯಾವನೋ ಬಂದು ನಮ್ಮ ಮೈ ಮುಟ್ಟಿದ, ಎದೆ ಮುಟ್ಟಿದ, ಬ್ಯಾಕ್ ಮುಟ್ಟಿದ ಅಂದ್ರೆ ಹೇಗೆ ಸುಮ್ಮನಿರೋದು? ಎಲ್ಲ ಹುಡುಗಿಯರು ಈ ರೀತಿ ಆಗ್ತಿದೆ ಅಂತ ಧೈರ್ಯವಾಗಿ ಹೇಳೋಕೆ ಹಿಂಜರಿದಿರುವುದಕ್ಕೆ ಇವತ್ತು ಪಿತೃಪ್ರಧಾನ ದೇಶದಲ್ಲಿ ಸ್ವಾತಂತ್ರ್ಯ ಇಲ್ಲದೆ ಬದುಕುತ್ತಿದ್ದೇವೆ ಎಂದಿದ್ದಾರೆ.

ವೇದಿಕೆಯ ಮೇಲೆ ಸಾನ್ಯಾ ಮತ್ತು ಗೆಳೆತಿಯರು ಆಯೋಜಕರ ಜೊತೆ ಗಲಾಟೆ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಕಪಾಳಮೋಕ್ಷ ಮಾಡುವಂಥದ್ದು ಏನೂ ನಡೆದೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಕಪಾಳಕ್ಕೆ ಆ ಹುಡುಗ ಹೊಡೆದಿದ್ದಾನೆ ಎನ್ನುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ ಎನ್ನುವ ಸಾನ್ಯಾ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಈ ಘಟನೆಯ ಕುರಿತು ಬೇರೆಯೇ ಸುದ್ದಿ ಹಬ್ಬಿತ್ತು. ಮದ್ಯ ಸೇವಿಸಿದ್ದ ಯುವಕನೊಬ್ಬ ಸಾನ್ಯಾ ಜೊತೆ ಸೆಲ್ಫಿ ತಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿದ. ಅವನ ಮೇಲೆ ಸಾನ್ಯಾ ಕೈ ಮಾಡಿದರು. ಅವನೂ ಹೊಡೆದ. ನಂತರ ಅಲ್ಲಿದ್ದವರು ಆ ಹುಡುಗನನ್ನು ಥಳಿಸಿದರು ಎನ್ನುವುದು ವರದಿಯಾಗಿತ್ತು. ಇದೀಗ ಅಂಥದ್ದು ಏನೂ ಆಗಿಲ್ಲ ಎಂದಿದ್ದಾರೆ ಸಾನ್ಯಾ.

ಎಣ್ಣೆ ಕುಡಿದು ಪಾರ್ಟಿ ಮಾಡಿದೆ ಅಂತ ಕೆಲವರು ಹೇಳಿದ್ರು. ನಾನು ಶೂಟಿಂಗ್‌ಗೆ ಹೋಗಬೇಕು, ಡಯೆಟ್ ಮಾಡುವ ಸಲುವಾಗಿ ನಾನು ಸಕ್ಕರೆಯೇ ತಿನ್ನಲ್ಲ. ಹೇಗೆ ಕುಡಿಯುತ್ತೇನೆ? ನಾನು ರುದ್ರಾಕ್ಷಿ ಹಾಕಿದ್ಮೇಲೆ ಹೇಗೆ ಕುಡಿಯುತ್ತೇನೆ? ಪುತ್ತೂರಿನಂತಹ ಪವಿತ್ರ ಸ್ಥಳದಲ್ಲಿ ಹೇಗೆ ಈ ತರ ಮಾಡೋಕೆ ಆಗತ್ತೆ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com