ರಾಷ್ಟ್ರ ಪ್ರಶಸ್ತಿ, ಪದ್ಮಭೂಷಣ ವಿಜೇತೆ, ಹಿರಿಯ ಗಾಯಕಿ ವಾಣಿ ಜೈರಾಮ್ ನಿಧನ

ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ವಾಣಿ ಜೈರಾಮ್ ಅವರು ಇಂದು ನಿಧನರಾಗಿದ್ದಾರೆ.
ವಾಣಿ ಜೈರಾಮ್
ವಾಣಿ ಜೈರಾಮ್

ಚೆನ್ನೈ: ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ವಾಣಿ ಜೈರಾಮ್ ಅವರು ಇಂದು ನಿಧನರಾಗಿದ್ದಾರೆ.

ಚೆನ್ನೈನಲ್ಲಿ ನೆಲೆಸಿದ್ದ 78 ವರ್ಷ ವಾಣಿ ಜೈರಾಮ್ ಅವರು ಐದು ದಶಕಗಳ ವೃತ್ತಿಜೀವನವನ್ನು ಹೊಂದಿದ್ದಾರೆ.

ವಾಣಿ ಅವರ ಮನೆಕೆಲಸದಾಕೆ ಮಲಾರಕೋಡಿ ಅವರು ನಿನ್ನೆ ರಾತ್ರಿ ವಾಣಿ ಅವರನ್ನು ಕೊನೆದಾಯಗಿ ನೋಡಿದ್ದರು. ಇಂದು ಬೆಳಗ್ಗೆ10.30ರ ಸುಮಾರಿಗೆ ಮಲಾರಕೋಡಿ ಕೆಲಸಕ್ಕೆ ಬಂದಿದ್ದಾರೆ. ಎಷ್ಟೇ ಕೂಗಿದರೂ ಮನೆ ಬಾಗಿಲು ತೆರೆಯದಿದ್ದರಿಂದ ಮಲಾರಕೋಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಳ್ವಾರ್‌ಪೇಟೆಯಲ್ಲಿ ವಾಸವಿದ್ದ ಸಹೋದರಿ ಬಳಿಯಿದ್ದ ನಕಲಿ ಕೀ ಬಳಸಿ ಬಾಗಿಲು ತೆರೆದಾಗ ವಾಣಿ ಅವರು ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಾಣಿ ಅವರ ಮೃತದೇಹವನ್ನು ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು 10,000 ಹಾಡುಗಳನ್ನು ಹಾಡಿದ್ದಾರೆ. ವೆಲ್ಲೂರಿನವರಾದ ಅವರು ತಮಿಳು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಹರ್ಯಾನ್ವಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಸಾವಿರಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅಲ್ಲದೆ ಪ್ರಪಂಚದಾದ್ಯಂತ ಹಲವಾರು ಸಂಗೀತ ಕಚೇರಿಗಳನ್ನು ಸಹ ನಡೆಸಿಕೊಟ್ಟಿದ್ದಾರೆ.

ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ 1971ರ ಹಿಂದಿ ಚಿತ್ರ ಗುಡ್ಡಿಯೊಂದಿಗೆ ವಾಣಿ ಜೈರಾಮ್ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com