ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆ
ಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. 'ಬಹುಕೃತ ವೇಷಂ' ಈ ಸಾಲಿಗೆ ಹೊಸ ಸೇರ್ಪಡೆ. ಸಿನಿಮಾದಲ್ಲಿ ಶಶಿಕಾಂತ್ ಮತ್ತು ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್.
Published: 18th February 2022 04:02 PM | Last Updated: 18th February 2022 04:57 PM | A+A A-

ಸಿನಿಮಾ ಪೋಸ್ಟರ್
ವಿಮರ್ಶೆ: ಹರ್ಷವರ್ಧನ್ ಸುಳ್ಯ
ಮೊದಲ ದೃಶ್ಯದಿಂದಲೇ ಪ್ರೇಕ್ಷಕನ ಗಮನ ಬೇರೆಡೆ ಹರಿಯದಂತೆ ಪರದೆಯೊಳಗೆ ಹಿಡಿದಿಡುವುದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದ ಜರೂರತ್ತು. ಅದರಲ್ಲಿ ಶಶಿಕಾಂತ್ ಬಿ- ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಬಹುಕೃತ ವೇಷಂ' ಯಶಸ್ವಿ. ಈ ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಂದು ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಪ್ರಕಾರದ ಸಿನಿಮಾ ದೊರೆತಿದೆ.
ಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. ಸ್ಯಾಂಡಲ್ ವುಡ್ ನಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಪ್ರಕಾರದ ಸಿನಿಮಾಗಳಿಗೆ ಪವನ್ ಕುಮಾರ್ 'ಲೂಸಿಯಾ' ಹೊಸ ಭಾಷ್ಯ ಬರೆದಿತ್ತು. ನಂತರ ಅರವಿಂದ್ ಶಾಸ್ತ್ರಿ ನಿರ್ದೇಶನದ 'ಅಳಿದು ಉಳಿದವರು' ಸಿನಿಮಾದಲ್ಲಿಯೂ ಅದೇ ಥರದ non linear ನರೇಟಿವ್ ಬಳಸಿಕೊಳ್ಳಲಾಗಿತ್ತು. ಪ್ರೇಕ್ಷಕನ ತಲೆಗೆ ಕಸರತ್ತು ನೀಡುವ ಈ ತಂತ್ರ ಹಾಲಿವುಡ್ ಮತ್ತು ವರ್ಲ್ಡ್ ಸಿನಿಮಾಗಳಲ್ಲಿ ಜನಪ್ರಿಯ.
ಇದನ್ನೂ ಓದಿ: ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ
ಸಿನಿಮಾದಲ್ಲಿ ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್. ವೈಷ್ಣವಿ ಗೌಡ, ಗುಡ್ ಲುಕ್ ಮಾತ್ರವಲ್ಲದೆ ನಟನೆಯಲ್ಲೂ ಕಂಗೊಳಿಸುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇತ್ತೀಚಿನ ಕನ್ನಡ ಸಿನಿಮಾಗಳ ಪಾತ್ರವರ್ಗವನ್ನು ಗಮನಿಸಿದರೆ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗ ನಾಯಕಿಯರ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಅನುಮಾನ ಬರುತ್ತದೆ. ಇತ್ತೀಚಿಗಷ್ಟೆ, ನಟ ಶಿವರಾಜ್ ಕುಮಾರ್ ಅವರು ವೇದಿಕೆ ಮೇಲೆ ಕನ್ನಡಿಗ ನಾಯಕಿಯರಿಗೆ ಅವಕಾಶ ನೀಡಬೇಕು ಎನ್ನುವ ಕುರಿತಾಗಿ ಮಾತನಾಡಿದ್ದರು.
ಕಥಾನಾಯಕ ಅತಿಶಯ್ ಪಕ್ಕಾ ಲೋಕಲ್ ಬಾಯ್ ಆಗಿದ್ದರೂ ತುಂಬಾನೇ ಬ್ರಿಲಿಯೆಂಟ್. ತುರ್ತು ಸನ್ನಿವೇಶವೊಂದರಲ್ಲಿ ಆಫೀಸಿಗೆ ಲೇಟಾದಾಗ, ಟ್ರಾಫಿಕ್ ಅವಾಯ್ಡ್ ಮಾಡಲು ಬೇಕಂತಲೇ ತನ್ನ ಬೈಕ್ ಆಕ್ಸಿಡೆಂಟ್ ಮಾಡಿಸಿಕೊಂಡು ಆಂಬ್ಯುಲೆನ್ಸ್ ನಲ್ಲಿ ಡ್ರಾಪ್ ಪಡೆದುಕೊಳ್ಳುವಷ್ಟು ಚಾಣಾಕ್ಷ ಮತ್ತು ವಿಕ್ಷಿಪ್ತ. ಕತ್ತಲಲ್ಲಿ ಅವನ ಹಿಂದೆ 20 ಅಡಿಯ ವ್ಯಕ್ತಿ ಹಿಂದಿನಿಂದ ದಾಳಿ ಮಾಡುತ್ತಾನೆ ಎನ್ನುವುದು ಅವನ ನಂಬಿಕೆ. ಅದು ಭ್ರಮೆ ಎನ್ನುವುದು ಹಲವರ ಅನಿಸಿಕೆ. ಅವನ ಹೆಸರಿಗೆ ತಕ್ಕಂತೆ ಎಲ್ಲವೂ ಅತಿಶಯ!
ಇದನ್ನೂ ಓದಿ: ಅಂಜದ ಗಂಡು ಕಥಾನಾಯಕ ಮೀಟ್ಸ್ ಬಿಗ್ ಬಾಸ್ ರೌಡಿ: 'ರೌಡಿ ಬೇಬಿ' ಚಿತ್ರವಿಮರ್ಶೆ
ಹೀಗಿರುವಾಗ ಕಥಾನಾಯಕನ ಬಾಳಲ್ಲಿ ಕಥಾನಾಯಕಿ ನಕ್ಷತ್ರಾಳ ಎಂಟ್ರಿಯಾಗುತ್ತದೆ. ಅವಳಿಗೆ ಅವನು ಮೆಂಟರ್, ಕೇರ್ ಟೇಕರ್ ಕಡೆಗೆ ಲವರ್ ಕೂಡಾ ಆಗುತ್ತಾನೆ. ನಕ್ಷತ್ರಾಳ ಹಿಂದೆ ಬೀಳುವ ಖಳನಟನಿಂದಾಗಿಯೇ ನಾಯಕ ನಾಯಕಿ ಹತ್ತಿರವಾಗಿ ಪ್ರೇಮಿಗಳಾಗುತ್ತಾರೆ. ನಾಯಕನಿಂದ ಒದೆ ತಿಂದು ಪೆಟ್ಟು ತಿಂದ ಹುಲಿಯಂತಾಗುವ ವಿಲನ್ ಕಡೆಗೂ ಮಾಸ್ಟರ್ ಸ್ಟ್ರೋಕ್ ಇಡುತ್ತಾನೆ. ಅದರಿಂದಾಗಿ ನಾಯಕ ತನ್ನ ಹುಡುಗಿ ಮತ್ತು ಗೆಳೆಯನಿಗೋಸ್ಕರ ಪ್ರಪಾತದಿಂದ ಹಾರಿ ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ. ಅದರಂತೆ ಹಾರಿಯೂ ಬಿಡುತ್ತಾನೆ. ಮುಂದೇನಾಯಿತು? ಯಾವುದು ನಿಜ? ಯಾವುದು ಸುಳ್ಳು ಎನ್ನುವ ಕುತೂಹಲ ನಿಮಗಾಗಿದ್ದರೆ ಅದು ಚಿತ್ರಕಥೆಗೆ ಸಿಕ್ಕ ಯಶಸ್ಸಿಗೆ ಸಾಕ್ಷ್ಯ.
ಇದನ್ನೂ ಓದಿ: ಮನುರಂಜನ್ ರೂಪದಲ್ಲಿ ರವಿಚಂದ್ರನ್ ಈಸ್ ಬ್ಯಾಕ್: ಮುಗಿಲ್ ಪೇಟೆ ಸಿನಿಮಾದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ: ಚಿತ್ರ ವಿಮರ್ಶೆ
ಇಂಗ್ಲಿಷ್ ಭಾಷೆಯನ್ನು ಕರತಲಾಮಲಕ ಮಾಡಿಕೊಂಡಿದ್ದರೂ ಕನ್ನಡವನ್ನು ಕನ್ನಡಿಗರಂತೆಯೇ ಮಾತನಾಡುವ ಸಾಫ್ಟ್ ವೇರ್ ಎಂಜಿನಿಯರ್ ಪಾತ್ರದಲ್ಲಿ ಶಶಿಕಾಂತ್ ಉತ್ತಮ ಅಭಿನಯ ನೀಡಿದ್ದಾರೆ. ರವಿಚಂದ್ರನ್ ಅವರನ್ನು ಹೋಲುವ ಶಶಿಕಾಂತ್ ಡಯಲಾಗ್ ಡೆಲಿವರಿ ಪರಿ, ಸಿನಿಮಾದ ಸಂಭಾಷಣೆಯನ್ನು ಇನ್ನಷ್ಟು ಪಂಚಿಂಗ್ ಆಗಿಸಿದೆ. ವಸಿಷ್ಠ ಸಿಂಹ ನಂತರ ಬೇಸ್ ವಾಯ್ಸ್ ವಿಲನ್ ಗಳ ಸಾಲಿಗೆ 'ಬಹುಕೃತ ವೇಷಂ' ಸಿನಿಮಾ ವಿಲನ್ ಕರಣ್ ಆರ್ಯನ್ ಸೇರ್ಪಡೆಯಾಗಿದೆ.
ಕಲಾವಿದರ ಸಮರ್ಥ ನಟನೆಯಿದ್ದರೂ 'ಬಹುಕೃತ ವೇಷಂ' ಸಿನಿಮಾದ ನಿಜವಾದ ಹೀರೋ ಅಧ್ಯಯ್ ತೇಜ್ ಅವರ ಚಿತ್ರಕಥೆ. ಅದನ್ನು ತೆರೆಮೇಲೆ ಅಷ್ಟೆ ಪರಿಣಾಮಕಾರಿಯಾಗಿ ಮೂಡಿಸುವ ಮೂಲಕ ನಿರ್ದೇಶಕ ಪ್ರಶಾಂತ್ ಯೆಳ್ಳಂಪಳ್ಳಿ ಭರವಸೆ ಮೂಡಿಸಿದ್ದಾರೆ. ಸಿನಿಮಾದ ತೀವ್ರತೆ ಮತ್ತು ಓಘಕ್ಕೆ ವೈಶಾಖ್ ಭಾರ್ಗವ್ ಅವರ ಹಿನ್ನೆಲೆ ಸಂಗೀತವೂ ಸಹಕರಿಸಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ