ಗಾಂಧೀಜಿ ಚರಕ, ಕೈಮಗ್ಗ ಹಾಗೂ ಮೌಲ್ಯ ಶೋಧಿಸುವತ್ತ...

ಗಾಂಧೀಜಿಯವರ ಕುರಿತು ಮಹತ್ವದ ಮೂರು ನಾಟಕಗಳನ್ನು ಕೊಟ್ಟ ನನಗೆ ಅವರನ್ನು...
ಗಾಂಧೀಜಿ ಚರಕ, ಕೈಮಗ್ಗ ಹಾಗೂ ಮೌಲ್ಯ ಶೋಧಿಸುವತ್ತ...

ಗಾಂಧೀಜಿಯವರ ಕುರಿತು ಮಹತ್ವದ ಮೂರು ನಾಟಕಗಳನ್ನು ಕೊಟ್ಟ ನನಗೆ ಅವರನ್ನು ಅರ್ಥೈಸಿಕೊಳ್ಳಲು, ಹತ್ತಿರವಾಗಲು ಅನುವಾಗಿದೆ. ಗಾಂಧಿ ವಿರುದ್ಧ ಗಾಂಧಿ, ಗಾಂಧಿ- ಅಂಬೇಡ್ಕರ (ಅನು) ಹಾಗೂ ಕಸ್ತೂರಬಾ ಈ ಮೂರು ನಾಟಕಗಳು ಯಶಸ್ವಿ ಪ್ರಯೋಗ ಕಂಡವು. ಹತ್ತಿ ಮತ್ತು ನೂಲು, ಚರಕದ ಅಸ್ಮಿತೆಗಳು, ಸ್ವಾಸ್ಥ್ಯ ಬದುಕಿನ ಮೌಲ್ಯಗಳು, ರೈತ ಬೆಳೆವ ಹತ್ತಿಗೆ ಒಂದು ಬೆಲೆ, ಅಸ್ತಿತ್ವಗಳು ದಕ್ಕಿದ್ದು ಗಾಂಧೀಜಿಯವರ ನೂಲುವಿಕೆಯ ಸಂಕೇತದಿಂದ. ಅದು ಶ್ರಮದ ಮತ್ತು ಶ್ರಮಜೀವಕ್ಕೆ ನೀಡುವ ಗೌರವವೆಂದೇ ನಾನು ಭಾವಿಸಿದ್ದೇನೆ. ಗ್ರಾಮೀಣ ಪ್ರದೇಶದ ಜನಸಮುದಾಯದ ವೃತ್ತಿ ಉಪವೃತ್ತಿ ಕೌಶಲ್ಯಕ್ಕೆ ಗಾಂಧೀಜಿಯವರ ಆಶ್ರಮ ಪರಿಕಲ್ಪನೆಯ ಬದುಕು ಮತ್ತು ನೈತಿಕತೆಯ ಚಿಂತನೆಗಳು ಪೂರಕವಾದವು. ಅವರು ತಳ ಸಮುದಾಯಗಳ ಕರಕುಶಲತೆಯನ್ನು ಮೆಚ್ಚುತ್ತಿದ್ದರು. ಗುಡಿ ಕೈಗಾರಿಕೆಯ ಎಲ್ಲವೂ ಸಂಸ್ಕೃತಿಯ ಭಾಗವಾಗಿದ್ದಷ್ಟೇ ಅಲ್ಲ ಜೀವನಾಧಾರವೂ ಆದ ಕಲೆಗಳು. ಇವು ಇಂದು ನಾಶದ ಅಂಚನ್ನು ತಲುಪಿವೆ.
ಗಾಂಧೀಜಿ ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಪ್ರಯೋಗವು ಇವತ್ತು ನಮಗೆ ಉತ್ತರವಾಗಿದೆ. ಆದರೆ ಅವರ ಈ ಚಿಂತನೆಗಳು ಪ್ರಸ್ತುತದಲ್ಲಿ ಅವಗಾಹನೆಗೇ ಬಂದಿಲ್ಲ. ಆಶ್ರಮದ ಕೂಡು ಕುಟುಂಬ, ಪರಸ್ಪರ ಸಹಬಾಳ್ವೆಯ ಹೊಣೆ, ಸಹಾಯ, ಸಹಕಾರ, ನೈತಿಕ ಶಿಕ್ಷಣ ಮುಂತಾದವು ಅವರ ಮಹತ್ವದ ಹೆಜ್ಜೆಗಳು. ಹಾಗೆ ತಾವೂ ಬದುಕಿ, ಬದುಕುವ ಪ್ರಯೋಗ ನಡೆಸಿ ಇತರರಿಗೆ ಪ್ರೇರಣೆಯಾದವರು. ಸಾರ್ವಜನಿಕ ಜೀವನ ನಡೆಸುವ ವ್ಯಕ್ತಿ ನಿರಪೇಕ್ಷನಾಗಿರಬೇಕೆಂದು ಸಾರಿ ಅದರಂತೆಯೇ ಬದುಕಿದ ಶ್ರಮಜೀವಿ ಗಾಂಧೀಜಿ. ಆದರೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದು ಹೋದರೂ ಕಾರ್ಮಿಕ, ಸಣ್ಣ ರೈತ, ನೇಕಾರರನ್ನು ಕಡೆಗಣಿಸುವ ಇಲ್ಲವೇ ಆತನನ್ನು ಸಾಲದ ಕೂಪಕ್ಕೆ ತಳ್ಳುವ ಅವೈಜ್ಞಾನಿಕ ನೀತಿ, ಯೋಜನೆಗಳೇ ಜಾರಿಗೆ ಬಂದವು. ಇವರೆಲ್ಲ ಅಸಂಘಟಿತರು, ತಿಳಿವಳಿಕೆಯಿಂದ ವಂಚಿತರು. ಇದರ ದುರ್ಲಾಭವನ್ನು ಆಳುವ ಶಕ್ತಿಗಳು, ರಾಜಕೀಯ ವ್ಯವಸ್ಥೆಗಳು ಪಡೆಯುತ್ತ ಬಂದವು. ಯಾವ ಕೇಂದ್ರ- ರಾಜ್ಯ ಸರ್ಕಾರವು ಇವರನ್ನು ಅಭಿವೃದ್ಧಿಗೆ ಒಯ್ಯುವ ಯೋಜನೆಯನ್ನು ರೂಪಿಸಲಿಲ್ಲ. ಪರಿಣಾಮ ಅನೇಕ ಬವಣೆ, ಶೋಷಣೆಗಳಿಗೆ ಈ ಸಮುದಾಯ ಒಳಗಾದವು. ಅನೇಕ ನೇಕಾರರು ಆತ್ಮಹತ್ಯೆಗೂ ಶರಣರಾದರು.
ನಮ್ಮ ಅನೇಕ ಪಾರಂಪರಿಕ ಕುಲ ಕಸುಬುಗಳಿಗೆ ಈ ಕಾರಣಗಳಿಂದ ಹೊಡೆತ ಬಿದ್ದಿದೆ. ಬೇಸಾಯ ಪದ್ಧತಿ, ಹೈನುಗಾರಿಕೆ, ಕುಶಲಕರ್ಮಿಗಳ ಬಗೆಗೆ ತಪ್ಪು ಕಲ್ಪನೆಗಳಿವೆ. ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ರೈತ ತನ್ನ ಜಮೀನುಗಳಿಗೆ ರಾಸಾಯನಿಕ ವಿಷವುಣಿಸಿ ಅವುಗಳನ್ನು ಬಂಜೆ ಮಾಡಿದ. ಇದರ ಹಿಂದೆ ಯಾಂತ್ರಿಕ ಶಕ್ತಿ ಬಳಕೆಯ ಹುಚ್ಚು ಕಾರಣವಾಗಿದೆ. ಧಿಡೀರ್ ದುಡ್ಡು ಮಾಡುವ ಹವಣಿಕೆ ಅಪಾಯಕಾರಿಯೇ ಸರಿ. ಇದು ಕರ ಕುಶಲಕರ್ಮಿ, ರೈತರನ್ನೂ ಬಾಧಿಸಿದೆ. ಗಾಂಧೀಜಿ ಈ ಬಗ್ಗೆ ಎಚ್ಚರಿಸಿದ್ದರು. ಯಂತ್ರದ ಬಳಕೆಯ ಅಪಾಯದ ಕುರಿತು ಮಾತನಾಡುತ್ತಿದ್ದರು.ಅವರು ಕೈಮಗ್ಗದ ಕುರಿತೂ ಚಿಂತಿಸಿದವರು. ಕೈಮಗ್ಗವೂ ಅವರ ಪಾಲಿಗೆ ಒಂದು ಯಂತ್ರ. ನೂಲು ತೆಗೆಯುವ ಪ್ರಕ್ರಿಯೆಯ ಹಿಂದೆ ಯಾಂತ್ರಿಕತೆಯಿದೆ. ಬಾಪೂ ಸ್ವಯಂಚಾಲಿತ ಯಂತ್ರಗಳ ವಿರೋಧಿಗಳವಿರೋಧಿಯಾಗಿದ್ದರು.
ರಂಗಕರ್ಮಿ ಪ್ರಸನ್ನ್ನ ಹೋರಾಟ: ಕೈಮಗ್ಗ ಉಳಿಯಬೇಕು ಮತ್ತು ಬೆಳೆಯಬೇಕೆಂದು ನಮ್ಮ ನಡುವಿನ ರಂಗಕರ್ಮಿ ಮತ್ತು ಚಿಂತಕ ಪ್ರಸನ್ನ ಹೋರಾಡುತ್ತಿದ್ದಾರೆ. ಅವರ ಹೋರಾಟ, ಸತ್ಯಾಗ್ರಹ ಮತ್ತು ಉಪವಾಸದ ಹಿಂದಿನ ನಿಜ ಮರ್ಮ ಕಾಳಜಿಯನ್ನು ಅರಿಯುವ ಅಗತ್ಯ ಸಮಾಜ ಮತ್ತು ಸರಕಾರಕ್ಕಿದೆ. ಇದರ ಉತ್ಪಾದನೆ ಒಂದು ಕಲೆ- ಕುಶಲೆ. ಅದು ಅಳಿಯುವ ಅಂಚಿಗೆ ತಲುಪಿದೆ. ಅಂಥ ನಾಶಕ್ಕೆ ಇಂದು ಅನೇಕ ಪಾರಂಪರಿಕ ವಿವಿಧ ಘಟಕಗಳು ತಲುಪಿವೆ. ಕೈಮಗ್ಗವನ್ನೇ ಉದಾಹರಿಸುವುದೆಂದರೆ ಕೈಮಗ್ಗದಲ್ಲಿ ಅರಳಿದ ಇಳಕಲ್ಲ ಸೀರೆ ಮತ್ತು ಖಣಗಳ ಆಜಡಝಿಜಡ್ಝ್ಛಿ ಡಜಟಿಡಜ ಅನ್ನು ಪರಿಭಾವಿಸಬೇಕೆಂದರೆ ಅವು ಕೈಮಗ್ಗದಲ್ಲೇ ಸೃಜಿಸುವುದಾಗಿರಬೇಕಾಗುತ್ತದೆ. ಪವರ್‌ಲೂಮ್‌ನಲ್ಲಿಯವು ಒಂದು ಬಗೆಯ ಕಾಗದದ ಹೂ ಇದ್ದಂತೆ. ಪರಿಮಳವಿಲ್ಲದ ಹೂ, ಕೃತ್ರಿಮ! ಇದೇ ಬಗೆಯ ಮೇಲುಕೋಟೆಯ ಪಂಚೆ, ಉಡುಪಿಯ ಅಂಗವಸ್ತ್ರ, ಚಳ್ಳಕೆರೆಯ ಕಂಬಳಿಗಳು ವಿನಾಶಕ್ಕೆ ಬಂದು ತಲುಪಿವೆ. ಇದಕ್ಕೆಲ್ಲ ಕಾರಣ ಸರ್ಕಾರ ಮತ್ತು ಅಧಿಕಾರಶಾಹಿಯ ಅವೈಜ್ಞಾನಿಕ ನೀತಿಯ ಜಾರಿ ಹಾಗೂ ಬಂಡವಾಳಶಾಹಿ, ಕಾರ್ಪೋರೇಟ್ ವ್ಯವಸ್ಥೆಯ ಕರಾರುವಕ್ಕಾದ ಹುನ್ನಾರಗಳು. ನಮ್ಮ ಗ್ರಾಹಕ ಪ್ರಜ್ಞೆಗೆ ಯಾವುದು ಅಪ್ಪಟ ಚಿನ್ನ ಹಾಗೂ ಯಾವುದು ನಕಲು ಎಂಬುದು ತಿಳಿಯದಷ್ಟು ಬಹು ಮಾಧ್ಯಮಗಳು ದಾಳಿ ನಡೆಸಿವೆ. ಅದಕ್ಕೆ ಮನಗೆ ತಲುಪಿಸುವ ಜ-ಟಛ್ಠ್ಞಜಡಿ ಮೂಲಕ ಸಿಂಥೆಟಿಕ್ ಎಂಬ ಕಲಬೆರಕೆಯ ರಗ್ಗು, ಪಂಚೆ ಮತ್ತು ಬಟ್ಟೆಗಳನ್ನು ಬಳಸುತ್ತಿದ್ದಾನೆ. ಇದು ಮೋಸದ ವ್ಯವಹಾರವೆಂದು ಅರಿತೋ ಅರಿಯದೆಯೋ ಬವಳಿಯಾಗುತ್ತಿದ್ದಾನೆ. ಪ್ರಸನ್ನ ಅವರ ಚಳವಳಿಯ ಹಿಂದೆ ಕೈಮಗ್ಗ ಮತ್ತು ಅದರ ಉತ್ಪಾದನೆಯ ಬಳಕೆಯ ಜೊತೆಗೆ ಗ್ರಾಹಕರನ್ನು ಜಾಗೃತಗೊಳಿಸುವುದಾಗಿದೆ. ಖಾದಿ ಮತ್ತು ಕೈಮಗ್ಗದ ಉಡುಪುಗಳು ಪ್ರಜ್ಞಾವಂತ ಗ್ರಾಹಕನಿಗೆ ತಲಪುತ್ತಿವೆ. ಅದರ ಗುಣಮಟ್ಟವನ್ನು ಆತ ಅರ್ಥೈಸಿಕೊಂಡಿದ್ದಾನೆ. ಆದರೆ ದುರಂತವೆಂದರೆ ಒಂದು ಅಂದಾಜಿನಂತೆ ಕೈಮಗ್ಗದ ಹೆಸರಿನಲ್ಲಿ ದೇಶದೊಳಗೆ ಪ್ರತಿಶತ ಎಪ್ಪತ್ತರಷ್ಟು ಕಲಬೆರಕೆ ಬಟ್ಟೆಗಳೂ ನುಸುಳಿ ಮಾರಾಟವಾಗುತ್ತಿವೆ. ಕಾನೂನು ಮಾಡುವವರು ಕಲಬೆರಕೆ ಬಟ್ಟೆಯೇ ಕೈಮಗ್ಗದ ಉತ್ಪಾದನೆ ಎಂದು ನಿಯಮಗಳನ್ನು ತಂದರೆ ಅಚ್ಚರಿ ಪಡಬೇಕಿಲ್ಲ. ಈ ಎಚ್ಚರಕ್ಕಾಗಿಯೇ ಕೈಮಗ್ಗ ಸತ್ಯಾಗ್ರಹ!
ಕರ್ನಾಟಕದ ಗಡಿಯಲ್ಲಿ ನನ್ನ ಹುಟ್ಟೂರು. ಚಿಕ್ಕೋಡಿ ತಾಲೂಕಿನ ಬೇಡಕಿಹಾಳ. ಅಲ್ಲಿಂದ ಉತ್ತರಕ್ಕೆ 20 ಕಿ.ಮಿ ಅಂತರದಲ್ಲಿ ಇಚಲಕರಂಜಿಯಿದೆ. ಅದು ಮಹಾರಾಷ್ಟ್ರದ ಮೆಂಚಸ್ಟರ್ ಎಂದು ಕರೆಯಿಸಿಕೊಳ್ಳುತ್ತದೆ. ಅರವತ್ತರ ದಶಕದಲ್ಲಿ ಅಲ್ಲಿ ಕೈಮಗ್ಗಗಳಿದ್ದವು. ಉತ್ಪಾದನೆಯೂ ಚೆನ್ನಾಗಿತ್ತು. ಆ ನಗರದಲ್ಲಿ ರಬಕವಿ, ಬನಹಟ್ಟಿ, ಗುಳೇದಗುಡ್ಡ, ಇಳಕಲ್‌ನ ನೇಯ್ಗೆ ಸಮುದಾಯ ಮುಖ್ಯ ವೃತ್ತಿಯಲ್ಲಿದ್ದವು. ಅಷ್ಟೇ ಅಲ್ಲ ಗಡಿಭಾಗದ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಬಡಕುಟುಂಬಗಳು ನೇಯ್ಗೆಯ ಕೈಮಗ್ಗ ನಂಬಿದ್ದವು. ಕೇವಲ ನೇಕಾರ ಸಮುದಾಯದವರಷ್ಟೇ ಕೈಮಗ್ಗ ಬಲ್ಲವರಾಗಿರಲಿಲ್ಲ. ಎಲ್ಲ ಜಾತಿಯವರು, ವಿಶೇಷವಾಗಿ ಬಡವರು, ತಳ ಸಮುದಾಯಗಳವರು ಕೈಮಗ್ಗವನ್ನು ಉಪಜೀವನ ಮಾಡಿಕೊಂಡಿದ್ದರು. ಆದರೆ ಬರ ಬರುತ್ತ ಕೈಮಗ್ಗದ ಜಾಗಗಳಲ್ಲಿ ಪವರ್‌ಲೂಮ್‌ಗಳು ಬರತೊಡಗಿದವು. ಅದರ ಹಿಂದೆ ಬಂಡವಾಳ ಶಕ್ತಿಗಳ ಕೈವಾಡ ಕಂಡು ಬಂದಿತು. ಬಡವರ ಕೈನಲ್ಲಿದ್ದ ಮಗ್ಗ ಕಳೆದು ಆತ ಅನಾಥನಾದ. ಹೆಚ್ಚು ಗುಜರಾತಿ, ಮಾರವಾಡಿಗಳ ಕೈಲಿದ್ದ ಈ ಉದ್ಯಮ ಪವರ್‌ಲೂಮಿಗೆ ಸ್ಥಿತ್ಯಂತರಗೊಂಡು ನಿರುದ್ಯೋಗ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಯಿತು. ನೇಕಾರಿಕೆ ಮಾಡೋರು ಬೇಕಾರ (ನಿರುದ್ಯೋಗ) ಆದರು. ನೇಕಾರಿಕೆಯ ಮತ್ತು ಕೈಮಗ್ಗವು ನಡೆಸುವ ಕೌಶಲ್ಯ ಕಳೆದುಹೋಯಿತು.
ಇವತ್ತು ಕರ್ನಾಟಕ ಸರ್ಕಾರವು ಗಡಿಯ ಬೋರಗಾಂವ ಬಳಿ ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡಲು ಮುಂದಾಗಿದೆ. ಜವಳಿ ಪಾರ್ಕ್ ಒತ್ತಾಸೆಯಿತ್ತು. ಈ ಪಾರ್ಕ್‌ನ ಹಿಂದೆ ಏನೇ ಪ್ರಗತಿಯ ಉದ್ದೇಶ ಯೋಜನೆಯಿದ್ದರೂ ಒಂದು ಭಾಗದಲ್ಲಿ ಕೈಮಗ್ಗಕ್ಕೆ ಆದ್ಯತೆ ನೀಡುವಂತಾಗಬೇಕು. ಯಾವ ಇಚಲಕರಂಜಿಯಲ್ಲಿ ಕೈಮಗ್ಗ ನಿರಾಶ್ರಿತಗೊಂಡಿತ್ತೋ ಆ ಉದ್ದಿಮೆಗೆ ಪುನರುಜ್ಜೀವನಗೊಳಿಸಿದಂತಾಗುತ್ತದೆ. ಕರಕುಶಲತೆಗೆ ಮರುಜೀವ ಬಂದಂತಾಗಿ ತಳಸಮುದಾಯಗಳು ಮತ್ತೆ ಚೈತನ್ಯ ಹೊಂದುತ್ತಾರೆ. ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಪರಿಸರ, ಹಳ್ಳಿಗಾಡಿನ ಒಲವು ಮೂಡುತ್ತದೆ. ಸಿರಿವಂತ, ಬಡವನ ಭೇದ ಅಳಿಯುತ್ತದೆ. ಸಮಾಜವಾದ ಚಿಂತನೆಯ ಮುಖ್ಯಮಂತ್ರಿಗಳು ಇದರತ್ತ ಗಮನಹರಿಸಿ ಕ್ರಮ ಜರುಗಿಸಿಯಾರೆಯೇ?

  ಡಾ.ಡಿ.ಎಸ್. ಚೌಗಲೆ
ಕನ್ನಡ ಅಧ್ಯಾಪಕರು, ಭಾವುರಾವ್ ಕಾಕತಕರ ಕಾಲೇಜು ಬೆಳಗಾವಿ
chouranga@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com