ಬಹಳ ವರ್ಷಗಳ ನಂತರ ಬೆಂಗಳೂರು ನಗರದ ಆಟೋದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿತ್ತು. ಪ್ರಯಾಣದ ಸಮಯವನ್ನ ಸದುಪಯೋಗಪಡಿಸಿಕೊಳ್ಳಲು ಆಟೋ ಚಾಲಕನನ್ನ ಮಾತಿಗೆಳೆದೆ. ತುಮಕೂರು ಜಿಲ್ಲೆಯವರಂತೆ ಬೆಂಗಳೂರಿಗೆ ಬಂದು ನಾಲ್ಕು ವರ್ಷವಾಯಿತಂತೆ ಮಾಸಿಕ ಎಲ್ಲಾ ಖರ್ಚು ಕಳೆದು ಸರಾಸರಿ 25 ಸಾವಿರ ರೂಪಾಯಿ ಗಳಿಸುತ್ತಾರಂತೆ. ಅದರಲ್ಲಿ ಅವರ ಮನೆಯ ಗಾಡಿ ಓಡಿಸಬೇಕು. ಒಂದನೇ ತರಗತಿಗೆ ಹೋಗುವ ಒಬ್ಬ ಮಗನಿದ್ದಾನಂತೆ. ಇಷ್ಟು ಕೇಳಿದ ನಂತರ ಸಹಜವಾಗೇ ನನಗೆ ಕುತೊಹಲ ಉಂಟಾಗಿ ಮಗುವಿನ ಶಾಲೆಗೆ ಎಷ್ಟು ಹಣ ಕಟ್ಟುತ್ತೀರಿ? ಎಂದು ಕೇಳಿದೆ. ಆತ ವಾರ್ಷಿಕ 60 ಸಾವಿರ ರೂಪಾಯಿ ಎಂದರು . ಅಂದರೆ ಗಮನಿಸಿ ಇವರ ಆದಾಯದ 20 ಪ್ರತಿಶತ ಮಗುವಿನ ಓದಿನ ಖರ್ಚಿಗಾಗಿ ವ್ಯಯಿಸುತ್ತಾರೆ. ಮನೆ ಬಾಡಿಗೆ ಜೊತೆಗೆ ಇತರ ಖರ್ಚುಗಳು ಬೇರೆ ಇಷ್ಟೆಲ್ಲಾ ಹೇಗೆ ನಿಭಾಯಿಸುತ್ತೀರಿ ಎಂದೆ. ಆತ ನಿರ್ಲಿಪ್ತನಾಗಿ ನಾಕು ವರ್ಷದಲ್ಲಿ ನಾಲ್ಕು ಕಾಸು ಉಳಿಸಲಾಗಿಲ್ಲ ಎಂದರು.
ನನ್ನ ಸ್ನೇಹಿತರೊಬ್ಬರು ಟೆಕ್ಕಿ, ಅವರ ಪತ್ನಿಯೂ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ತೆರಿಗೆ ಕಟ್ಟಿದ ನಂತರ ಹತ್ತಿರಹತ್ತಿರ ವಾರ್ಷಿಕ 16ಲಕ್ಷ ವರಮಾನ ಹೊಂದಿರುವ ಪುಟ್ಟ ಸಂಸಾರ ಇವರದು. ಇವರಿಗೂ ಕೂಡ ಈ ವರ್ಷವಷ್ಟೇ ಒಂದನೇ ತರಗತಿಗೆ ಸೇರಿದ ಒಂದು ಪುಟಾಣಿ ಹೆಣ್ಣು ಮಗುವಿದೆ. ಮೂರು ದಿನದ ಹಿಂದೆ ಮಾತಿಗೆ ಸಿಕ್ಕಿದ್ದರು. ಮಾತು ಕೊನೆಗೆ ಮಗುವಿನ ಶಾಲೆಯ ಬಗ್ಗೆ ಬಂದಿತು. ಯಾವ ಶಾಲೆ? ಎಷ್ಟು ಫೀಸು? ಎನ್ನುವುದು ಸಹಜವಾಗೇ ಮಾತಿನಲ್ಲಿಅಡಕವಾಗಿತ್ತು. ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಪ್ರಸಿದ್ಧ ಇಂಟರ್ನ್ಯಾಷನಲ್ ಶಾಲೆಯದು, ಫೀಸು ವಾರ್ಷಿಕ ಮೂರು ಲಕ್ಷ ಐವತ್ತು ಸಾವಿರವಂತೆ!! ನನ್ನಲ್ಲಿರುವ ಲೆಕ್ಕಿಗ ತಕ್ಷಣ ಕೆಲಸಕ್ಕಿಳಿದಿದ್ದ, ಗಮನಿಸಿ ತಮ್ಮ ಆದಾಯದ 22 ಪ್ರತಿಶತ ಹಣವನ್ನ ಮಗುವಿನ ವಿಧ್ಯಾಭಾಸಕ್ಕೆ ವ್ಯಯಿಸುತ್ತಿದ್ದಾರೆ.
ನನ್ನ ಇನ್ನೊಬ್ಬ ಸ್ನೇಹಿತನ ಮನೆಯದು ಕೂಡಾ ಅದೇ ಕಥೆ. ಪತಿ ಪತ್ನಿ ಇಬ್ಬರೂ ಇಂಜಿನಿಯರ್ ಗಳು ಆದಾಯವೇನೋ ಚೆನ್ನಾಗಿದೆ. ಇಬ್ಬರು ಮಕ್ಕಳು, ಅವರ ಶಾಲೆಯ ವೆಚ್ಚ ಕೂಡ ಆದಾಯದ 20 ಪ್ರತಿಶತಕ್ಕಿಂತ ಹೆಚ್ಚಾಗಿದೆ.
ಮೇಲಿನ ಮೂರು ಪ್ರಕರಣವನ್ನ ಇಲ್ಲಿ ನಮೂದಿಸುವ ಉದ್ದೇಶ ಸ್ಪಷ್ಟವಾಗಿದೆ. ಆದಾಯ ಎಷ್ಟೇ ಇರಲಿ ಮಕ್ಕಳ ವಿದ್ಯಾಭಾಸಕ್ಕೆ ಎಂದು ಮಾಡುವ ಖರ್ಚು ಬಹಳ ಹೆಚ್ಚಾಗಿದೆ ಎನ್ನುವುದನ್ನ ತಿಳಿಸುವುದು. ಇರಲಿ ಇದೇನು ಹೊಸ ವಿಷಯವಲ್ಲ ಇದು ಮನೆ ಮನೆಯ ಕಥೆ. ಈಗ ಇಲ್ಲಿ ಹೇಳ ಹೊರಟ ವಿಷಯ ಬೇರೆಯದೇ ಇದೆ.
ಗಮನಿಸಿ ನೋಡಿ ಇಂದಿಗೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ತಮ್ಮ ಶಿಕ್ಷಣ ಪೂರ್ತಿ ಮುಗಿಸಿ ಕೆಲಸಕ್ಕೆ ಸೇರುವ ಸಂಸ್ಥೆ ನೂರಕ್ಕೆ ನೂರು ಪ್ರತಿಶತ ಟೆಕ್ನಾಲಜಿ ಕಂಪನಿಯಾಗಿರುತ್ತದೆ ಇದರಲ್ಲಿ ಸಂಶಯ ಬೇಡ. ಆದರೆ ಚಕಿತಗೊಳಿಸುವ ವಿಷಯವೇನು ಗೊತ್ತೇ? ನಿಮ್ಮ ಮಗ ಅಥವಾ ಮಗಳು ಕೆಲಸ ಮಾಡಬಹದಾದ ಆ ಸಂಭಾವ್ಯ ಟೆಕ್ನಾಲಜಿ ಸಂಸ್ಥೆ ಇನ್ನು ಹುಟ್ಟೇ ಇಲ್ಲ!! ಅಂದರೆ ಆ ಹೊಸ ಟೆಕ್ನಾಲಜಿ ಇನ್ನು ಅವಿಷ್ಕಾರವಾಗಿಲ್ಲ. ಇನ್ನೂ ಗೊತ್ತಿರದ ಆ ಹೊಸ ಟೆಕ್ನಾಲಜಿ ಕಂಪನಿಯಲ್ಲಿ ಕೆಲಸ ಮಾಡಲು ಬೇಕಾದ ಬುನಾದಿ ನಮ್ಮ ಶಾಲೆಯಲ್ಲಿ ಹಾಕುತ್ತಿದ್ದಾರೆಯೇ? ಇಲ್ಲ...! ನಮ್ಮ ಶಿಕ್ಷಣ ಇಂದು ಮಕ್ಕಳಿಗೆ ಏನು ಹೇಳಿಕೊಡುತ್ತಾ ಇದ್ದಾರೆ ಅದ್ಯಾವುದೂ ಅವರ ನಾಳಿನ ಭವಿಷ್ಯಕ್ಕೆ ಎಳ್ಳುಕಾಳಿನಷ್ಟೂ ಪ್ರಯೋಜನವಿಲ್ಲ!! ಅಂದ ಮೇಲೆ ಪೋಷಕರು ತಮ್ಮ ಆದಾಯದ ಸರಾಸರಿ 20 ಪ್ರತಶತ ಹಣವನ್ನ ಸುಮ್ಮನೆ ಅರ್ಥವಿಲ್ಲದೆ ಖರ್ಚು ಮಾಡುತ್ತಿದ್ದಾರೆ ಎಂದಾಯ್ತು.
ಗೊತ್ತಿರದ ಭವಿಷ್ಯಕ್ಕೆ, ಇನ್ನೂ ಹುಟ್ಟೇ ಇರದ ಸಂಸ್ಥೆಯಲ್ಲಿ ಯಶಸ್ಸು ಗಳಿಸುವ ಮಟ್ಟಕ್ಕೆ ಮಕ್ಕಳ ಬೆಳೆಸುವುದಕ್ಕೆ ಪೋಷಕರು ಭಿನ್ನ ದಾರಿ ಹಿಡಿಯಬೇಕಾದ ಅವಶ್ಯಕತೆಯಿದೆ. ಪೋಷಕರು ಏನೆಲ್ಲಾ ಮಾಡಬಹದು ಎನ್ನುವುದರ ಪಟ್ಟಿ ಹೀಗಿದೆ. ನಿಮ್ಮ ಮಕ್ಕಳಿಗೆ ತಕ್ಕಂತೆ ಇದನ್ನ ಪರಿವರ್ತಿಸಿಕೊಳ್ಳುವುದು ಅವಶ್ಯಕ.
ಹೀಗೆ ಇನ್ನು ಹತ್ತಾರು ಅಂಶಗಳನ್ನ ಸೇರಿಸುತ್ತಾ ಹೋಗಬಹದು ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳೊಂದಿಗೆ ಎಂದೂ ಅಗಲಿಕೆ ಅಂದರೆ ಗ್ಯಾಪ್ ಆಗಲು ಬಿಡಬಾರದು. ಅವರ ನಿತ್ಯ ಜೀವನದಲ್ಲಿ ಆಗುವ ಸಣ್ಣ ಪುಟ್ಟ ಘಟನೆಗಳೂ ಪೋಷಕರಿಗೆ ತಿಳಿಯಬೇಕು. ಹೀಗಾಗಬೇಕಾದರೆ ಅವರು ಮಕ್ಕಳೊಂದಿಗೆ ಹೆಚ್ಚು ಸಮಯ ವ್ಯಯಿಸಬೇಕು. ಮಕ್ಕಳು ಇಂಡಿಪೆಂಡೆಂಟ್ ಆಗುವವರೆಗೆ ಅವರಿಗೆ ಪೋಷಕರ ಹೆಚ್ಚೆಚ್ಚು ಸಮಯದ ಅವಶ್ಯಕತೆ ಇದೆ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ನಮ್ಮ ಮಾತು ಕೇಳುತ್ತಿಲ್ಲ ಎನ್ನುವ ಸಂಖ್ಯೆ ಅತಿ ಹೆಚ್ಚು. ನೀವು ನಿಮ್ಮ ಮಕ್ಕಳ ಪ್ರಾರಂಭಿಕ ದಿನಗಳಲ್ಲಿ ನಿಮ್ಮ ಟೈಮ್ ಅನ್ನು ಅವರ ಮೇಲೆ ಇನ್ವೆಸ್ಟ್ ಮಾಡಿದ್ದರೆ ಅದರ ಕಥೆ ಬೇರೆ ಇರುತ್ತಿತ್ತು. ನೆನಪಿಡಿ ಹೂಡಿಕೆ ಎಂದರೆ ಅದು ಕೇವಲ ಹಣ ಮಾತ್ರವಲ್ಲ. ಅದು ಟೈಮ್ ಕೂಡ!
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement