ಮೋದಿಗೆ ಗೊತ್ತು ಜನರ ನಾಡಿ ಮಿಡಿತ, ಎರಡು ದಶಕದ ನಂತರ ಇ ಎಸ್ ಐ ಗೆ ಕಟ್ಟುವ ಹಣದಲ್ಲಿ ಕಡಿತ!

ESI ಎನ್ನುವುದು ಒಂದು ದೊಡ್ಡ ಮೋಸದ ಜಾಲ . ಕೋಟ್ಯಂತರ ಜನ ಕಾರ್ಮಿಕರು ಕಡ್ಡಾಯವಾಗಿ ಕಟ್ಟಲೇಬೇಕಾದ ಹಣವಿದು . ಯಾವುದೇ ಉದ್ದಿಮೆಯ ಮಾಲೀಕನಿರಲಿ ಸಾವಿರ ರೂಪಾಯಿವರೆಗೆ ಖರ್ಚು ಖಂಡಿತಾ ಬರುತ್ತಿತ್ತು .
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಧ್ಯಮವರ್ಗಕ್ಕೆ ಮೋದಿ ಮೊದಲ ನೂರು ದಿನದಲ್ಲಿ ಒಂದಷ್ಟು ಉಳಿತಾಯ ಮಾಡಿಕೊಡುತ್ತಾರೆ ಎಂದುಕೊಂಡದ್ದು ನಿಜವಾಗುತ್ತಿದೆ . ಕಳೆದ 22 ವರ್ಷದಿಂದ ಮಾಲೀಕ ಮತ್ತು ಕಾರ್ಮಿಕ ಇಬ್ಬರು ಒಟ್ಟು ಕಟ್ಟುತ್ತಿದ್ದ ಹಣ ವೇತನದ 6.5 ಪ್ರತಿಶತ ಇತ್ತು. ಮಾಲೀಕರು 4. 75 ಮತ್ತು ಕಾರ್ಮಿಕರು 1.75 ಇದೀಗ ಈ ಪ್ರತಿಶತವನ್ನ 4 ಕ್ಕೆ ಇಳಿಸಲಾಗಿದೆ. 

ಬದಲಾದ ಸಂಖ್ಯೆ ಜುಲೈ ಒಂದರಿಂದ ಚಾಲನೆಗೆ ಬರಲಿದೆ. ಹೊಸ ದರದಲ್ಲಿ ಮಾಲೀಕ 3.25 ಪ್ರತಶತ ಹಾಗೂ ಕಾರ್ಮಿಕ 0.75 ಪ್ರತಿಶತ ನೀಡಲಿದ್ದಾರೆ. ತಿಂಗಳಿಗೆ 15 ಸಾವಿರ ವೇತನ ತೆಗೆದುಕೊಳ್ಳುವ ನೌಕರನಿಗೆ ಇದರಿಂದ ಮಾಸಿಕ 100 ರೂಪಾಯಿ ಉಳಿತಾಯವಾಗುತ್ತದೆ. ಹಾಗೆಯೇ ಮಾಲೀಕರಿಗೆ 275 ರೂಪಾಯಿ ತನಕ ಉಳಿತಾಯವಾಗುತ್ತದೆ. ಈ ರೀತಿಯ ಕಡಿತ ಮಾಡಿರುವುದರಿಂದ ಹೆಚ್ಚು ಹೆಚ್ಚಿನ ಕಾರ್ಮಿಕರನ್ನ ESI ಪರಿಧಿಗೆ ತರುವುದು ಕೇಂದ್ರ ಸರಕಾರದ ಉದ್ದೇಶ.
ಸಿಕ್ಕ ಲಾಭವನ್ನ ಬಳಸಿಕೊಂಡು ಅದನ್ನ ಕೇಂದ್ರ ಸರಕಾರದ ಉದ್ದೇಶದಂತೆ ನಮ್ಮ ಮಾಲೀಕರು ಬಳಸಿಕೊಳ್ಳುವರೇ? ಎನ್ನುವುದು ಸದ್ಯದ ಪ್ರಶ್ನೆ. ESI ಎನ್ನುವುದು ಒಂದು ದೊಡ್ಡ ಮೋಸದ ಜಾಲ. ಕೋಟ್ಯಂತರ ಜನ ಕಾರ್ಮಿಕರು ಕಡ್ಡಾಯವಾಗಿ ಕಟ್ಟಲೇಬೇಕಾದ ಹಣವಿದು. ಯಾವುದೇ ಉದ್ದಿಮೆಯ ಮಾಲೀಕನಿರಲಿ ಸಾವಿರ ರೂಪಾಯಿವರೆಗೆ ಖರ್ಚು ಖಂಡಿತಾ ಬರುತ್ತಿತ್ತು. ಹಾಗೆಯೇ ಕೆಲಸಗಾರನಿಗೆ ಕೂಡ 6೦೦/700 ರೂಪಾಯಿ ಖರ್ಚು ಬರುತ್ತಿತ್ತು. ಆದರೆ ಇಲ್ಲಿನ ಸೌಕರ್ಯ ಮಾತ್ರ ಇಲ್ಲಿಗೆ ಹಣ ಕಟ್ಟುವ ಐವತ್ತು ಪ್ರತಿಶತ ಜನ ಕೂಡ ಉಪಯೋಗಿಸುತ್ತಿಲ್ಲ ಕಾರಣ ಇಲ್ಲಿನ ವ್ಯವಸ್ಥೆ!!
ಸಾವಿರಾರು ಕೋಟಿ ರೂಪಾಯಿ ಹಣ ಸದ್ದು ಗದ್ದಲ, ಸ್ಕ್ಯಾಮ್ ಎನ್ನುವ ಯಾವ ಹೆಸರು ಪಡೆದುಕೊಳ್ಳದೇ ಯಾರ್ಯಾರ ಜೇಬು ಸೇರುತ್ತಿತ್ತು?? ಭಗವಂತನೇ ಬಲ್ಲ. ಗಮನಿಸಿ ESI ನೀಡುವ ಸೇವೆ ಇಂದು ಬಹಳಷ್ಟು ಸುಧಾರಿಸಿದೆ. ಆದರೂ ಇದರ ಸೇವೆಯನ್ನ ಪಡೆಯುತ್ತಿರುವರ ಸಂಖ್ಯೆ ಮಾತ್ರ ಹೇಳಿಕೊಳ್ಳುವಂತ ಮಟ್ಟದಲ್ಲಿ ಇಲ್ಲ. ಇಲ್ಲಿ ನಾನು 'ಮೋಸ' ಎಂದು ಹೇಳ ಹೊರಟದ್ದು ಸೇವೆಯ ಬಗ್ಗೆಯಲ್ಲ. ಸೇವೆಗೆ ನೀಡುತ್ತಿರುವ ಶುಲ್ಕದ ಬಗ್ಗೆ.
ಉದಾಹರಣೆ ನೋಡೋಣ .250/300 ಗ್ರಾಂ ಅನ್ನ, ಸಾಂಬಾರು, ಒಂದು ಪಲ್ಯ, ಉಪ್ಪಿನಕಾಯಿ, ಒಂದು ಹಪ್ಪಳ, ಸಣ್ಣ ಬಟ್ಟಲಲ್ಲಿ ನೀರು ಮಜ್ಜಿಗೆ ಇಷ್ಟಕ್ಕೆ ಬೆಂಗಳೂರಿನಲ್ಲಿ ಎಷ್ಟು ರೂಪಾಯಿ ಇರಬಹದು? ಮೂವತ್ತು, ನಲವತ್ತು ಅಥವಾ ಐವತ್ತು ರೂಪಾಯಿ ಅಲ್ಲವೇ? ಉಳಿದ ಎಲ್ಲಾ ಎಲಿಮೆಂಟ್ ಸೇಮ್ ಇದ್ದು ಇದಕ್ಕೆ ನೂರು ರೂಪಾಯಿ ವಿಧಿಸಿದರೆ? ಈ ಉದಾಹರಣೆಯನ್ನ ESI ಗೆಅಪ್ಲೈ ಮಾಡಿ. ಇವತ್ತಿಗೂ ಉತ್ತಮ ಸೌಲಭ್ಯ ಕೊಟ್ಟು ಕೂಡ ಕಾರ್ಮಿಕರು ಕಟ್ಟುತ್ತಿರುವ ಹಣ ಬಹಳ ಹೆಚ್ಚು. ನಾನು ಹೇಳ ಹೊರಟದ್ದು ಇದನ್ನೇ ಅವರು ಇವತ್ತು ಕೊಡುತ್ತಿರುವ ಸೌಲಭ್ಯ ಕ್ಕೆ ಹೋಲಿಸಿದರೂ ಕಟ್ಟುತ್ತಿರುವ ಹಣ ಹೆಚ್ಚು ಎನ್ನುವುದು.
ಇವತ್ತಿನ ಸ್ಥಿತಿಯಲ್ಲಿ ಕಟ್ಟುವ ಹಣಕ್ಕೆ ತಕ್ಕ ಮೌಲ್ಯವಿಲ್ಲ ಎಂದಾದರೆ 22 ವರ್ಷಗಳ ಕೆಳಗೂ ಇದೆ ದರವಿತ್ತು ಆದರೆ ಖರ್ಚು ಇಷ್ಟಿರಲಿಲ್ಲ, ಸೌಲಭ್ಯ ಕೂಡ ಇಂದಿನಷ್ಟು ಇರಲಿಲ್ಲ ಅಂದಮೇಲೆ ಅಷ್ಟೊಂದು ಹಣ ಎಲ್ಲಿ ಹೋಯಿತು? ಸದ್ದು ಗದ್ದಲ ವಿಲ್ಲದೆ ಸ್ಕ್ಯಾಮ್ ಹೆಸರು ಪಡೆಯದೇ ಎಷ್ಟೊಂದು ಜನ ನುಂಗಿ ನೀರು ಕುಡಿದಿರಬಹದು? ಯೋಚಿಸಿ ನೋಡಿ ಎಂದು ಹೇಳುವುದಷ್ಟೇ ನನ್ನ ಉದ್ದೇಶ .ಈಗ ನೀವು ಕೇಳಬಹದು ಅಂದಿನ ದಿನದ ವೇತನವೇಷ್ಟಿತ್ತು? ಇಂದಿನ ವೇತನ ಎಷ್ಟಾಗಿದೆ ಅಲ್ಲವೇ? ಜೊತೆಗೆ ಹಣದುಬ್ಬರ ಕೂಡ ಬಹಳಷ್ಟಾಗಿದೆ. ಅಂದ ಮೇಲೆ ಇಂದು ಈ ಸೌಲಭ್ಯಕ್ಕೆ ಕಟ್ಟುತ್ತಿರುವ ಹಣ ಹೆಚ್ಚು ಹೇಗಾಯಿತು?  ಎಂದು. ಅದಕ್ಕೆ ಉತ್ತರ ಬಹಳ ಸರಳ . ಉದಾಹರಣೆ ನೋಡೋಣ . 130 ಕೋಟಿ ಜನಸಂಖ್ಯೆ ನಮ್ಮ ದೇಶದ್ದು, 96 ಕೋಟಿ ಮೊಬೈಲ್ ಬಳಕೆದಾರರು ಇದ್ದಾರೆ ಅನ್ನುತೆ ಮಾಹಿತಿ , ತಿಂಗಳಿಗೆ 250 ರುಪಾಯಿ ಆರಾಮಾಗಿ ಮಾತಾಡಿ ವ್ಯಯಿಸುವ ಜನ ನಾವು! ಈಗ 96 ಕೋಟಿ ಯನ್ನು 250 ರಿಂದ ಗುಣಿಸಿ! ಎಷ್ಟು ಹಣವಾಯಿತು ನೀವೇ ಲೆಕ್ಕ ಹಾಕಿ. ಇದೆ ಹಣವನ್ನ ಕಡ್ಡಾಯವಾಗಿ ಹೆಲ್ತ್ ಇನ್ಶೂರೆನ್ಸ್ ಆಗಿ ಕಟ್ಟಿಸಿದರೆ? ಭಾರತದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಸೇವೆ ನೀಡಬಹದು. ESI ಅಡಿಯಲ್ಲಿ ಕಟ್ಟುವ 1/6ಭಾಗದಲ್ಲಿ ಇಷ್ಟೆಲ್ಲಾ ಮಾಡಬಹದು!  ನಾಲ್ಕು ಕೋಟಿ ಜನ ESI ಅಡಿಯಲ್ಲಿ ನೊಂದಾಯಿತರಾಗಿದ್ದರೆ. 1,500 ರೂಪಾಯಿ ಮಾಸಿಕ ಅನುದಾನವೆಂದುಕೊಂಡರು ಆರು ಸಾವಿರ ಕೋಟಿ ಇಲ್ಲಿಂದ ಸಂಗ್ರಹವಾಗುತ್ತದೆ. ಇದನ್ನ ಬಳಸುವರ ಸಂಖ್ಯೆ ಮಾತ್ರ ನಗಣ್ಯ. ಇಂದಿಗೆ ಸೇವೆ ಚನ್ನಾಗಿದೆ ಎನ್ನುವ ಬಹಳಷ್ಟು ಮಾತುಗಳ ನಡುವೆಯೂ ಇದನ್ನ ಬಳಸುವರ ಸಂಖ್ಯೆ ಮಾತ್ರ ಋಣಾತ್ಮಕ . ನೌಕರರು ಮತ್ತು ಮಾಲೀಕರು ಒಟ್ಟಾಗಿ ನೌಕರನ ಆರೋಗ್ಯಕ್ಕಾಗಿ ಕಟ್ಟುವ ಹಣವನ್ನ ESIC ನಿರ್ವಹಿಸುತ್ತಿದೆ . ಇದೊಂದು ಸರಕಾರದ ಸಹಾಯವಿಲ್ಲದೆ ನೌಕರರು ತಮಗಾಗಿ ತಾವೇ ಮಾಡಿಕೊಂಡಿರುವ ಸೋಶಿಯಲ್ ಸೆಕ್ಯೂರಿಟಿ ಸಿಸ್ಟಮ್ . ಇದನ್ನ ಮಿನಿಸ್ಟ್ರಿ ಆಫ್ ಲೇಬರ್ ಸೃಷ್ಟಿಸಿದೆ . ಆದರೆ ಇದಕ್ಕೆ ಹಣದ ಅನುದಾನ ಮಾತ್ರ ಬರುವುದು ಕಾರ್ಮಿಕರಿಂದ ಮತ್ತು ಮಾಲೀಕರಿಂದ . ಹಾಗಾಗಿ ಇದೊಂದು ಸೆಲ್ಫ್ ಫೈನ್ನಾಸ್ಡ್ ಸೋಶಿಯಲ್ ಸೆಕ್ಯೂರಿಟಿ ಎನ್ನಲು ಅಡ್ಡಿಯಿಲ್ಲ . 
ESI ಒಂದೇ ಅಂತ ಅಲ್ಲ . ಎಲ್ಲಾ ಇನ್ಶೂರೆನ್ಸ್ ಗಳದ್ದು ಇದೆ ಗೋಳು . ನಾವು ಕಟ್ಟುವ ಹಣಕ್ಕೆ ತಕ್ಕ ಮೌಲ್ಯ ಮಾತ್ರ ಸಿಗುವುದಿಲ್ಲ . ಉದಾಹರಣೆ ನೋಡಿ . ಎಲ್ಲಾ ವ್ಯಾಪಾರದ ಉದ್ದೇಶ ಲಾಭ ಮಾಡುವುದು. ಅದು ತನ್ನ ನೌಕರರಿಗೆ ಭತ್ಯೆ ನೀಡಬೇಕು , ಆಡಳಿತ ಸಂಬಂದ ಪಟ್ಟ ಹಲವು ಹತ್ತು ಖರ್ಚು ನೀಗಿಸಬೇಕು ,ತನ್ನ ಏಜೆಂಟರಿಗೆ ಕಮಿಷನ್ ಕೊಡಬೇಕು , ಎಲ್ಲಾ ಖರ್ಚು ಕಳೆದು ಲಾಭ ಮಾಡಬೇಕು. ಆದರೆ ಆ ಲಾಭ ಎಷ್ಟಿರಬೇಕು ? ಎನ್ನುವುದು ನಿರ್ಧರಿಸುವರು ಯಾರು ? ಇನ್ಶೂರೆನ್ಸ್ ಹೆಸರಲ್ಲಿ ಹಗಲು ದರೋಡೆ ನೆಡೆಯುತ್ತಿದೆ . ವಾಹನಕ್ಕೆ ವಿಮೆ ಕಡ್ಡಾಯ , ವಾಹನ ಚಲಾಯಿಸುವರಿಗೆ ಅಷ್ಟು ಮೌಲ್ಯ ಇಲ್ಲವೆ ? ವಿಮೆ ಬೇಡವೆ ? ಒಪ್ಪತಕ್ಕ ಮಾತು , ನಾನು ಅವರಿಗೆ ಸುರಕ್ಷತೆ ಬೇಡ ಎಂದು ಹೇಳಲಿಲ್ಲ , ಸುರಕ್ಷತೆ ಮಾಡಿಸುವ ವಿಧಾನ ಬೇರೆ ಇದ್ದರೆ ಹೆಚ್ಚು ಲಾಭದಾಯಕ ಎಂದೆ ಅಷ್ಟೆ . ಬೆಂಗಳೂರಿನಲ್ಲಿ ೫೦ ಲಕ್ಷ ಫೋರ್ ವೀಲರ್ ಗಳಿವೆ ೨೦ ಸಾವಿರ ಶುಲ್ಕ , ಗುಣಿಸಿ ನೋಡಿ.  ವರ್ಷದಲ್ಲಿ ಅದ ಕ್ಲೈಮ್ ಎಷ್ಟು ? ಉಳಿದ ಹಣ ಎಲ್ಲಿ ?  ಇನ್ನು ಜೀವ ವಿಮೆ , ಮತ್ತು ಸಂಬಂದಪಟ್ಟ ಪಾಲಿಸಿ ಗಳಲ್ಲಿ ತೊಡಗಿಸುವ ಹಣ ಜನ ಸಾಮಾನ್ಯರ ಊಹೆಗೂ ನಿಲುಕದ್ದು .ನಾರಾಯಣ ಹೃದಯಾಲಯದ ಶ್ರೀ ಶೆಟ್ಟಿಯವರು ಹೇಳುತ್ತಾರೆ . ಪೂರ್ತಿ ಭಾರತದ ಜನಸಂಖ್ಯೆಯನ್ನ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ತರಬಹದು ಅದಕ್ಕೆ ಎಂದು ಜನರಿಂದ ಹೆಚ್ಚಿನ ಹಣವನ್ನ ಪೀಕುವ ಅವಶ್ಯಕತೆಯಿಲ್ಲ . ನಮ್ಮ ದೇಶದ ಜನಸಂಖ್ಯೆ ನಮ್ಮ ಬಲವಾಗಿಸಿಕೊಳ್ಳಬೇಕು . ಪ್ರತಿ ನಾಗರಿಕನಿಂದ ನಿತ್ಯ ೧ ರೂಪಾಯಿ ಸಂಗ್ರಹಿಸಿದರೂ ಸಾಕು ನಾವು ಇಡೀ ಭಾರತವನ್ನ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ತರಬಹದು ಎನ್ನುತ್ತಾರೆ . ಅಂದರೆ ಗಮನಿಸಿ ನೋಡಿ ಇಷ್ಟು ದಿನ ಇನ್ಶೂರೆನ್ಸ್ ಹೆಸರಲ್ಲಿ ನಮ್ಮಿಂದ ಲೂಟಿಯಾದ ಹಣವೆಷ್ಟು ಎನ್ನುವ ಚೂರು ವಾಸನೆಯಾದರೂ ನಿಮಗೆ ತಟ್ಟೀತು . ಯಾವುದೆ ವಿಮಾ ಸಂಸ್ಥೆ ಹೇಗೆ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತೆ ಎನ್ನುದಕ್ಕೆ ಇದೊಂದು ತಾಜಾ ಉದಾಹರಣೆ . ವಿಮೆಯಲ್ಲಿರುವ ಹಣದ ವಾಸನೆ ಹಿಡಿದು ಹತ್ತಾರು ವಿದೇಶಿ ವಿಮಾ ಸಂಸ್ಥೆಗಳು ಕೂಡ ಭಾರತಕ್ಕೆ ದಾಂಗುಡಿ ಇಟ್ಟಿವೆ . ಇವೆಲ್ಲವುಗಳ ನಡುವೆ ಬರೋಬ್ಬರಿ ೨೨ ವರ್ಷದ ನಂತರ ಕೇಂದ್ರ ಸರಕಾರ esi ಗೆ ಕಟ್ಟುತ್ತಿದ್ದ ಕಂತಿನ ಹಣವನ್ನ ಕಡಿತಗೊಳಿಸಿದೆ ಎನ್ನುವುದು ಖಂಡಿತ ಖುಷಿಯ ವಿಷಯ . ಈಗ esi ನಲ್ಲಿ ಸಿಗುತ್ತಿರುವ ಸೇವೆ ಮತ್ತು ಸೌಲಭ್ಯ ಗಮಸಿದರೆ ಸದ್ಯದ ಕುಸಿದ ಪರ್ಸಂಟೇಜ್ ಕೂಡ ಜಾಸ್ತಿ . ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಬೇಕು . ಮುಂಬರುವ ವರ್ಷಗಳಲ್ಲಿ ಅದೂ ಆಗುತ್ತದೆ ಎನ್ನುವ ನಂಬಿಕೆ .ಕೊನೆಮಾತು : ನಮ್ಮ ದೇಶದಲ್ಲಿ ಹಲವು ವಿಷಯ ಕಡ್ಡಾಯ ಮಾಡಿದರೆ ಮಾತ್ರ ಕೆಲಸಗಳು ನೆಡೆಯುತ್ತವೆ . ಕೆಲವು ವಿಷಯ ಕಡ್ಡಾಯವಾಗಿರಬೇಕು ಕೂಡ . ಹೆಲ್ತ್ ಇನ್ಶೂರೆನ್ಸ್ ದರಲ್ಲಿ ಒಂದು . ಅಂದಹಾಗೆ ಮೋದಿ ಸರಕಾರ esi ಅನ್ನು ಐಚ್ಚಿಕವನ್ನಾಗಿಸಿದರೆ ಅದು ನಿಜವಾಗಿಯೂ ಬಡ ಕಾರ್ಮಿಕರ ಜೀವನಕ್ಕೆ ಕೊಳ್ಳಿ ಇಟ್ಟಂತೆ . ಇನ್ನೊಂದು ವರ್ಷದಲ್ಲಿ ಹೀಗಾಗುವ ಸಾಧ್ಯತೆಯಿದೆ .ಎನ್ನುವ ಮಾತುಗಳು ಕೇಳಿ ಬರುತ್ತಿವೆ .  esi ಬೇಕು , ಅದು ಇರಲಿ ಅದನ್ನ ಐಚಿಕ್ಕವನ್ನಾಗಿಸಬಾರದು ಮತ್ತು ಈಗ ಕಟ್ಟುವ ಹಣಕ್ಕಿಂತ ಇನ್ನೂ ಕಡಿಮೆ ಹಣ ಪಾವತಿಸುವಂತಾಗಬೇಕು. ಹೀಗೆ ಹಣ ಕಡಿಮೆ ಪಾವತಿಸಿಯೂ ಸೌಲಭ್ಯಗಳು ಇನ್ನಷ್ಟು ಉತ್ತಮವಾಗಲು ಸಾಧ್ಯ . ನೀವು ಹೇಗೆ ಗುಣಿಸಿ , ಭಾಗಿಸಿ , ಕೊಡಿ , ಕಳಿಯಿರಿ ,ಮತ್ತೆ ಅದನ್ನೇ ಹೇಳುತ್ತೇನೆ ಸದ್ಯಕ್ಕೆ ನಾವು ಆರೋಗ್ಯಕ್ಕೆ ಅಂತ ಕಟ್ಟುತ್ತಿರುವ ಹಣ ಬಹಳ ಹೆಚ್ಚು 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com