'ದುಡ್ಡೇ ದೊಡಪ್ಪ', 'ಹಣವಿದ್ದವನಿಗೆ ಜಗತ್ತು' 'ಮನಿ ಮೇಕ್ಸ್ ದಿ ವರ್ಲ್ಡ್ ಗೋ ಅರೌಂಡ್' ಎಂದು ಹಿರಿಯರೋ, ಸ್ನೇಹಿತರೋ ಹೇಳುವುದು ನೀವು ಬಹಳಷ್ಟು ಬಾರಿ ಕೇಳಿರುತ್ತೀರಿ. ಹೌದು ಅವರು ಹೇಳುವುದು ನಿಜ. ಇವತ್ತು 'ಹಣ'ವಿಲ್ಲದೆ ಯಾವುದೇ ಕೆಲಸ-ಕಾರ್ಯ ನಡೆಯುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜಗತ್ತನ್ನೇ ಆಕ್ರಮಿಸಿರುವ ಇಂತಹ ಹಣದ ಸೃಷ್ಟಿಗೆ ಮುಂಚೆ ನಮ್ಮ ಹಿರಿಯರು ಹೇಗೆ ಬದುಕಿದ್ದರು? ವಿನಿಮಯ ಮಾಧ್ಯಮವಾಗಿ ಹಣವಲ್ಲದಿದ್ದರೆ ಇನ್ನೇನೋ ಇರಲೇಬೇಕಲ್ಲವೇ? ಅದೇನು? ಜಗತ್ ಪ್ರಸಿದ್ಧ 'ಇಂಕನ್' ನಾಗರಿಕತೆ ಹಣ ಬಿಡಿ, ಇತರ ಯಾವುದೇ ಸರುಕು ಇಲ್ಲದೆ ಮಹಾನ್ ಸಾಮ್ರಾಜ್ಯ ಹೇಗೆ ಕಟ್ಟಿತು? ಇವುಗಳನ್ನು ತಿಳಿಯುವ ಪುಟ್ಟ ಪ್ರಯತ್ನ ಮಾಡೋಣ ಬನ್ನಿ.
ನಮಗೆಲ್ಲಾ ತಿಳಿದಿರುವಂತೆ ಹಣ ಅಲ್ಲದಿದ್ದರೆ ಮತ್ತೇನೋ ಕೂಡು-ಕೊಳ್ಳುವಿಕೆಗೆ ಮಾಧ್ಯಮವಾಗಿ ವರ್ತಿಸಲು ಬೇಕೇ ಬೇಕು. ಇಂದಿನ ಪೇಪರ್ ಹಣ/ಕರೆನ್ಸಿಗೆ ಮುಂಚೆ ಯಾವೆಲ್ಲಾ ವಸ್ತುಗಳು ವಿನಿಮಯ ಮಾಧ್ಯಮವಾಗಿ ಬಳಸಪಟ್ಟಿದ್ದವು ಗೊತ್ತೇ?
ಉಪ್ಪು,ಬಾರ್ಲಿ,ಮೀನು,ತಾಮ್ರ, ಅಕ್ಕಿ, ಬಟ್ಟೆ (ಟೆಕ್ಸ್ಟ್ ಟೈಲ್) ಜಾನುವಾರುಗಳು ಕೂಡ ವಿನಿಮಯ ಮಾಧ್ಯಮವಾಗಿ ಬಳಸಿದ್ದಕ್ಕೆ ಸಾಕ್ಷಿ ಹೇರಳವಾಗಿ ಸಿಗುತ್ತದೆ. ಇವಿಷ್ಟೇ ಅಲ್ಲದೆ ಸಮುದ್ರದಲ್ಲಿ ಸಿಗುವ ಮುತ್ತು, ಹವಳ, ಶಂಖದ ಚಿಪ್ಪು ಕೂಡ ವಿನಿಮಯ ಮಾಧ್ಯಮವಾಗಿ ಚಾಲ್ತಿಯಲ್ಲಿದ್ದದ್ದಕ್ಕೆ ಇತಿಹಾಸದಲ್ಲಿ ಸಾಕ್ಷಿ ಸಿಗುತ್ತದೆ. ನಾಗರೀಕತೆ ನಾಚುವಂತೆ ಮಾಡುವ 'ಜೀತ ಪದ್ಧತಿ' ಕೂಡ ಒಂದು ರೀತಿಯ ವಿನಿಮಯ ಮಾಧ್ಯಮವೇ! ಮನುಷ್ಯರನ್ನ ಇನ್ನೇನೋ ಬೇಕಾದ ವಸ್ತು ಪಡೆಯಲು ಗುಲಾಮರಂತೆ ಮಾರುವುದು ಕೂಡ ಒಂದು ರೀತಿಯ ವಿನಿಮಯದ ಅಡಿಯಲ್ಲಿಯೇ ಬರುತ್ತದೆ. ಮದ್ದು-ಗುಂಡುಗಳ, ಶಸ್ತ್ರಾಸ್ತ್ರಗಳನ್ನು ಬಹಳ ಹಿಂದಿಯೇ ರಾಜ-ಮಹಾರಾಜರು ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು.
ಹಣದ ಬದಲು ಸೇವೆಯನ್ನೇ ಮುಖ್ಯವಾಗಿಸಿ ಮಹಾನ್ ಸಾಮ್ರಾಜ್ಯ ಕಟ್ಟಿದ್ದು ಇಂಕಾ ನಾಗರಿಕತೆಯ ವಿಶಿಷ್ಟತೆ.
ಇಂಕಾ ನಾಗರಿಕತೆ ಬಗ್ಗೆ ಕೇಳದವರು ಯಾರು? ಇಂಕಾ ಎಂದ ತಕ್ಷಣ ನೆನಪಿಗೆ ಬರುವುದು ದಕ್ಷಿಣ ಅಮೆರಿಕಾದ 'ಪೆರು' ದೇಶ. ಆದರೆ ಇದು ಪೆರು ವಷ್ಟೇ ಅಲ್ಲ, ಬೊಲಿವಿಯಾ, ಈಕ್ವಾಡೋರ್, ಮಧ್ಯ ಚಿಲಿ, ಉತ್ತರ ಅರ್ಜೆಂಟೀನಾ, ದಕ್ಷಿಣ ಕೊಲಂಬಿಯಾಗಳನ್ನ ಒಳಗೊಂಡ ಒಂದು ಮಹಾನ್ ಸಾಮ್ರಾಜ್ಯವಾಗಿತ್ತು. ಇಂತಹ ಇಂಕಾ ಜನರು ವಿನಿಮಯವನ್ನಾಗಿ ಯಾವುದೇ ವಸ್ತು ಬಳಸದೆ ಅಂದಿನ ಸಂಪದ್ಭರಿತ ಮತ್ತು ದೊಡ್ಡ ನಾಗರಿಕತೆ ಕಟ್ಟುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದು ಇಂದಿಗೆ ನಂಬಲು ಅಸಾಧ್ಯ! ಆದರೆ ಆ ಜನಾಂಗ ಹಣ ಅಥವಾ ಇನ್ನ್ಯಾವುದೇ ಶೇಖರಿಸಲ್ಪಡುವ ವಸ್ತುಗಳನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸದೆ ಸಾರ್ಥಕ ಬದುಕ ಬದುಕಿದ ನಿದರ್ಶನ ನಮ್ಮ ಮುಂದಿದೆ. ಇಂಕಾ ಸಾಮ್ರಾಜ್ಯದ ನೆರೆ ಹೊರೆಯಲ್ಲಿ ಇದ್ದ ಅಸ್ಟಕ್ ಮತ್ತು ಮಾಯನ್ನರು ಹುರಳಿ ಬೀಜವನ್ನ ಮತ್ತು ಬಟ್ಟೆಯನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸುತ್ತಿದ್ದರು ಆದರೆ ಇಂಕನ್ನರು ಮಾತ್ರ ಇಂತಹ ವಿಷಯಗಳಿಗೆ ತಲೆ ಕೆಡೆಸಿಕೊಳ್ಳದೆ ತಮ್ಮದೇ ಆದ 'ಮಿತ' ಎನ್ನುವ ಪದ್ಧತಿಯನ್ನ ಚಾಲ್ತಿಗೆ ತಂದಿದ್ದರು. ಅದರ ಪ್ರಕಾರ 15 ವರ್ಷ ತುಂಬಿದ ಪ್ರತಿ ಇಂಕಾ ಪುರುಷ ದೇಶಕ್ಕಾಗಿ ಕೆಲಸ ಮಾಡಬೇಕಿತ್ತು. ಎಷ್ಟು ಕೆಲಸವಿದೆ ಎನ್ನುವುದರ ಮೇಲೆ ವರ್ಷದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎನ್ನುವುದರ ನಿರ್ಧಾರವಾಗುತ್ತಿತ್ತು. ಹೆಚ್ಚೆಂದರೆ ವರ್ಷದ 7೦ ಭಾಗ ಕೆಲಸ ಉಳಿದ 3೦ ಭಾಗ ವಿಶ್ರಾಂತಿ. ಇದಕ್ಕೆ ಬದಲಾಗಿ ವಾಸಿಸಲು ಕಟ್ಟಡ, ಉಡಲು ಬಟ್ಟೆ, ಸೇವಿಸಲು ಆಹಾರ, ವಿಹಾರಕ್ಕೆ ಉತ್ತಮ ರಸ್ತೆ ಹೀಗೆ ಬದುಕಲು ಏನು ಬೇಕೋ ಅವೆಲ್ಲವೂ ಪುಕ್ಕಟೆ ಸಿಗುತಿತ್ತು. ಮನೋದೈಹಿಕ ಸ್ಥಿತಿಗೆ ಅನುಗುಣವಾಗಿ ಕೆಲಸ ಹಂಚಲಾಗುತ್ತಿತ್ತು. ಅದೊಂತರಹ 'ಎಲ್ಲವೂ ಎಲ್ಲರಿಗೆ ಸೇರಿದ್ದು' ಎನ್ನುವ ಭಾವನೆ ಮೇಲೆ ಕಟ್ಟಲ್ಪಟ್ಟ ನಾಗರಿಕತೆ.
ಸೂಕ್ಷ್ಮವಾಗಿ ನೋಡಿದರೆ ಇಲ್ಲಿಯೂ ವಿನಿಮಯ ಉಂಟು ಅದರೆ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಇಲ್ಲ ಅಷ್ಟೇ. ಇಲ್ಲಿ 'ಸೇವೆ' (ಸರ್ವಿಸ್) ಯೇ ವಿನಿಮಯ. ಸೇವೆ ಸಂಗ್ರಹಿಸಿಡಲು ಆಗದ ಇರುವ ವಿನಿಮಯ ಹೀಗಾಗಿ ಆ ನಾಗರಿಕತೆ ಹೆಚ್ಚು ಸಂತೋಷದಿಂದ ಬದುಕಲು ಸಾಧ್ಯವಾಯಿತು. ಸಂಗ್ರಹಿಸಿ ಇಡಬಹುದಾದ ಯಾವುದೇ ವಿನಿಮಯ ಬದುಕಲ್ಲಿ ಬೇಕಿಲ್ಲದ ಪೈಪೋಟಿ ಅಲ್ಲದೆ ಮತ್ತೇನೂ ನೀಡದು. ಆದರೂ ನಮಗೆ ಹಣದ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಇಂಕನ್ ನಾಗರಿಕತೆಯಿಂದ ನಾವು ಕಲಿಯುವುದು ಬೇಕಾದಷ್ಟಿದೆ. ಆದರೆ ಅದರ ಅನುಷ್ಠಾನ ನಮ್ಮ ಮುಂದಿರುವ ಬಹುದೊಡ್ಡ ಸವಾಲು.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement