ಕೋ-ಆಪರೇಟಿವ್ ಸೊಸೈಟಿ, ಕೋ-ಆಪರೇಟಿವ್ ಬ್ಯಾಂಕ್ ಗಳು ಮುಖ್ಯವಾಹಿನಿಯಲ್ಲಿ ಸಹಾಯ ಸಿಗದ ಬಹಳಷ್ಟು ಜನರಿಗೆ ಆಸರೆಯಾಗಿದ್ದವು. ಅವುಗಳ ಉಗಮದ ಹಿಂದಿನ ಆಶಯವೂ ಕೂಡ ಅದೇ! ಎಲ್ಲರಿಂದ ಎಲ್ಲರಿಗಾಗಿ ಎನ್ನುವ ತತ್ವ ಇವುಗಳದ್ದು. ಅರ್ಥ, ಯಾವುದೇ ಇಂತಹ ಸಂಸ್ಥೆಯಲ್ಲಿ ಸದಸ್ಯರಾದರೆ ಮತ್ತು ಅಲ್ಲಿನ ಉದ್ದೇಶಕ್ಕೆ ಬದ್ಧವಾಗಿದ್ದರೆ ಅಂತಹ ಎಲ್ಲಾ ಸದಸ್ಯರ ಒಳಿತಿಗಾಗಿ ಶ್ರಮಿಸುವುದು ಮತ್ತು ಮೂಲ ಉದ್ದೇಶ 'ಲಾಭ'ಕ್ಕಾಗಿ ಅಲ್ಲದೆ ಸಮುದಾಯದ ಒಳಿತಿಗಾಗಿ ದುಡಿಯುವುದು ಈ ಸಂಸ್ಥೆಗಳ ಪ್ರಮುಖ ಲಕ್ಷಣ.
ಇವತ್ತು ಆರ್ಥಿಕವಾಗಿ ಒಂದಷ್ಟು ಸವಾಲಿನ ದಿನಗಳನ್ನ ಭಾರತೀಯ ವಿತ್ತ ಜಗತ್ತು ಮತ್ತು ಜಗತ್ತಿನ ಇತರ ದೇಶಗಳು ಕೂಡ ಕಾಣುತ್ತಿವೆ. ಎಲ್ಲಕ್ಕೂ ಮುಖ್ಯವಾಗಿ ಹಣದ ಹರಿವು ಕಡಿಮೆಯಾಗಿದೆ. ಭಾರತದಲ್ಲಿ ಬಹುಮುಖ್ಯವಾಗಿ ಮುಖ್ಯವಾಹಿನಿ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ತಮ್ಮ ಸೇವೆಯನ್ನ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಲು ವಿಫಲವಾಗಿದ್ದಾಗ ಇಂತಹ ಸೊಸೈಟಿಗಳು ವರದಾನದಂತೆ ಕಾರ್ಯ ನಿರ್ವಹಿಸಿವೆ. ಅವುಗಳು ಅದರಲ್ಲಿ ಬಹಳಷ್ಟು ಯಶಸ್ವಿ ಕೂಡ ಆಗಿದ್ದವು.
ಇತ್ತೀಚೆಗೆ ಮಹಾರಾಷ್ಟ್ರ ಮೂಲದ ಪಿಎಂಸಿ (ಪಂಜಾಬ್-ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್) ಕುಸಿತ ಮತ್ತು ಕರ್ನಾಟಕದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಕುಸಿತ ಕೋ-ಆಪರೇಟಿವ್ ಬ್ಯಾಂಕ್ ಗಳ ಮೇಲಿನ ನಂಬಿಕೆಯನ್ನ ಕಡಿಮೆ ಮಾಡಿವೆ.
ಪಿಎಂಸಿ ಬ್ಯಾಂಕ್ 36 ವರ್ಷ ಹಳೆಯದು. 137 ಶಾಖೆಗಳನ್ನ ಹೊಂದಿದೆ. ಕರ್ನಾಟಕದಲ್ಲೂ ಈ ಬ್ಯಾಂಕಿನ 15 ಶಾಖೆಗಳಿವೆ. ಹೆಸರಿಗೆ ಇದು ಮಹಾರಾಷ್ಟ್ರ ಮತ್ತು ಪಂಜಾಬ್ ಕೋ-ಆಪರೇಟಿವ್ ಬ್ಯಾಂಕ್, ಆದರೆ ಇದು 6 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಾಗೆಯೇ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಕೂಡ 20 ವರ್ಷ ಹಳೆಯದು. 1,566 ಕೋಟಿ ರೂಪಾಯಿ ಠೇವಣಿ ಹೊಂದಿದೆ. ಇದರ ಅರ್ಥ ಕುಸಿದಿರುವುದು ಅತಿ ಸಣ್ಣ ಅಥವಾ ನಿನ್ನೆ ಮೊನ್ನೆ ಸ್ವಹಿತಾಸಕ್ತಿಗೆ ಹುಟ್ಟುಹಾಕಿದ ಸಂಸ್ಥೆಗಳಲ್ಲ. ಅವು ಸೊಸೈಟಿಗಳ ಆಶಯಕ್ಕೆ ತಕ್ಕಂತೆ ಸೃಷ್ಟಿಯಾದ ಸಂಸ್ಥೆಗಳು.
ಕೋ-ಆಪರೇಟಿವ್ ಸೊಸೈಟಿಗಳು ಸಮಾಜಕ್ಕೆ ಬೇಕು ಅವುಗಳಿಂದ ಆಗಬಹುದಾದ ಮುಖ್ಯ ಲಾಭಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.
ಕೋ-ಆಪರೇಟಿವ್ ಸೊಸೈಟಿ/ಬ್ಯಾಂಕುಗಳು ನಮ್ಮ ಸಮಾಜಕ್ಕೆ ನೀಡುತ್ತಿರುವ ಸಾಮಾಜಿಕ ಕೊಡುಗೆ ಬಹಳಷ್ಟು. ವಸ್ತು ಸ್ಥಿತಿ ಹೀಗಿದ್ದೂ ಒಂದೆರೆಡು ಕೋ-ಆಪರೇಟಿವ್ ಬ್ಯಾಂಕ್ಗಳು ಕುಸಿದರೆ ನಮ್ಮ ಸಮಾಜ ಪ್ಯಾನಿಕ್ ಸ್ಥಿತಿಗೆ ತಲುಪಿ ಬಿಡುತ್ತದೆ. ಜನ ತಾವು ಇಟ್ಟ ಹಣವನ್ನ ತೆಗೆಯಲು ಶುರು ಮಾಡುತ್ತಾರೆ. ಇಲ್ಲಿ ಪ್ರಮುಖವಾಗಿ ಕೆಲಸ ಮಾಡುವುದು ನಂಬಿಕೆ ಅದನ್ನ ಕಳೆದುಕೊಂಡರೆ ಹೇಗೆ? ಇರಲಿ...
ಹತ್ತಾರು ವರ್ಷದಿಂದ ಕೆಲಸ ಮಾಡಿಕೊಂಡು ನೂರಾರು ಶಾಖೆ ಹೊಂದಿರುವ ಇಂತಹ ಸಂಸ್ಥೆಗಳು ಕುಸಿಯಲು ಕಾರಣವೇನು?
ಕೊನೆ ಮಾತು: ಇಂತಹ ಸಂಸ್ಥೆಗಳನ್ನ ಸೋಶಿಯಲ್ ಎಂಟರ್ಪ್ರೈಸಿಂಗ್ ಎಂದು ಕರೆಯುತ್ತಾರೆ. ಲಾಭ ಮುಖ್ಯವಲ್ಲದ ಆದರೆ ಸಮುದಾಯದ/ಸದಸ್ಯರ ಮತ್ತು ಸಂಸ್ಥೆಯ ಉದ್ದೇಶಕ್ಕಾಗಿ ದುಡಿಯುವುದು ಇವುಗಳ ಮುಖ್ಯ ಲಕ್ಷಣ. ಕೋ-ಆಪರೇಟಿವ್ ಬ್ಯಾಂಕ್ಗಳಲ್ಲಿ ಹಣವಿಡುವುದು ತಪ್ಪಲ್ಲ. ಕೋ-ಆಪರೇಟಿವ್ ಬ್ಯಾಂಕುಗಳು ಆರ್ ಬಿ ಐ ಗೈಡ್ಲೈನ್ಸ್ ಪ್ರಕಾರ ಠೇವಣಿ ಮೇಲೆ ಬಡ್ಡಿ ಮತ್ತು ಸಾಲದ ಮೇಲೆ ಬಡ್ಡಿಗಳನ್ನ ನಿಗದಿ ಪಡಿಸಬೇಕು. ಅದನ್ನ ಬಿಟ್ಟು ಬೇಕಾಬಿಟ್ಟಿ ಬಡ್ಡಿಯನ್ನ ಕೊಡುತ್ತೇವೆ ಠೇವಣಿ ನೀಡಿ ಎನ್ನುವ ಬ್ಯಾಂಕ್ಗಳಿಂದ ದೂರವಿರಬೇಕು. ಕೋ ಆಪರೇಟಿವ್ ಬ್ಯಾಂಕ್ಗಳು ಕರೆಯುವ ವಾರ್ಷಿಕ ಸಭೆಗೆ ತಪ್ಪದೆ ಹಾಜರಾಗಬೇಕು. ಅದು ನಿಮ್ಮದೇ ಸಂಸ್ಥೆ, ನಿಮ್ಮದೇ ಹಣ. ಲೆಕ್ಕ ಪತ್ರವನ್ನ ಪರಿಶೀಲಿಸಬೇಕು. ಯಾರಿಗೆ ಸಾಲ ಕೊಟ್ಟಿದ್ದಾರೆ ಅದರ ವಸೂಲಾತಿ ಸ್ಥಿತಿಯೇನು? ಹೀಗೆ ಹಲವಾರು ಪ್ರಶ್ನೆಗಳನ್ನ ಕೇಳಬೇಕು. ಇದ್ಯಾವುದೂ ಮಾಡದೆ ಯಾವುದೋ ಒಂದು ಸಹಕಾರಿ ಬ್ಯಾಂಕು ಕುಸಿಯಿತು ಎನ್ನುವ ಕಾರಣ ಹೇಳಿ ನಿಮ್ಮ ಸಹಕಾರಿ ಬ್ಯಾಂಕಿನಿಂದ ಹಣ ಹೊರತೆಗೆಯುವುದು ತಪ್ಪು.
ಗಮನಿಸಿ ಪಿಎಂಸಿ ಬ್ಯಾಂಕು ಆರ್ ಬಿ ಐ ವಿಧಿಸಿರುವ ಬಹತೇಕ ಬಡ್ಡಿ ದರಗಳನ್ನ ಪಾಲಿಸುತ್ತಿದೆ. ಇಲ್ಲಿನ ಎನ್ ಪಿ ಎ ಕೂಡ 4 ಪ್ರತಿಶತ. ಇದು ಹೆಚ್ಚೇನೂ ಅಲ್ಲ. ಆದರೆ ಅದನ್ನ ತಡೆದುಕೊಳ್ಳುವಷ್ಟು ದೊಡ್ಡ ಬ್ಯಾಂಕ್ ಇದಲ್ಲ. ಸಹಜವಾಗೇ ರಿಯಲ್ ಎಸ್ಟೇಟ್ ಗೆ ನೀಡಿರುವ ಹಣ ವಸೂಲಾಗದೆ ನಿಂತಿದೆ. ಕಾರಣವೇನೇ ಇರಲಿ ಕುಸಿತ ಕುಸಿತವೇ. ಹೆಚ್ಚಿನ ಬಡ್ಡಿಯ ಆಸೆಗೆ ಠೇವಣಿ ಇಡುವುದರ ಫಲವಿದು. ನಿಜವಾಗಿ ಸೊಸೈಟಿಯ ಉದ್ದೇಶಕ್ಕೆ ಬದ್ಧವಾಗಿದ್ದು ಅಲ್ಲಿನ ರೂಪು ರೇಷಗಳ ಅಡಿಯಲ್ಲಿ ಕೆಲಸ ಮಾಡಿದರೆ ಇದು ವರದಾನ. ಇಲ್ಲದಿದ್ದರೆ ಅದು ಶಾಪವಾಗಿ ಪರಿವರ್ತನೆಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಇಲ್ಲಿ ಖಾತೆ ತೆಗೆಯುವುದಕ್ಕೆ ಕೂಡ ಇದು ಅನ್ವಯ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement