ಯಸ್ ಬ್ಯಾಂಕ್ ಕುಸಿತಕ್ಕೆ ಕಾರಣಗಳೇನು? ಎನ್ನುವುದು ಇಂದು ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆ. ಯಸ್ ಬ್ಯಾಂಕ್ ಒಂದೇ ಅಲ್ಲ, ಇಂದು ಭಾರತೀಯ ಬ್ಯಾಂಕುಗಳು ದಯನೀಯ ಸ್ಥಿತಿಯಲ್ಲಿ ಇರಲು ಕಾರಣವೇನು? ಎನ್ನುವುದು ಕೂಡ ಹಲವರನ್ನ ಕಾಡುತ್ತಿರುವ ಪ್ರಶ್ನೆಯಾಗಿದೆ. ಇದಕ್ಕೆಲ್ಲಾ ಕಾರಣ ಬಹಳ ಸ್ಪಷ್ಟ, ’ಕೊಟ್ಟ ಸಾಲವನ್ನ ವಸೂಲಿ ಮಾಡುವಲ್ಲಿ ಬ್ಯಾಂಕುಗಳು ವಿಫಲವಾಗಿದೆ ಎನ್ನುವುದು’. ಹಾಗಾದರೆ ಬಹುತೇಕ ಎಲ್ಲಾ ಬ್ಯಾಂಕುಗಳು ಸಾಲವನ್ನ ಬೇಕಾಬಿಟ್ಟಿ ಕೊಟ್ಟಿವೆಯೇ? ಎಲ್ಲಾ ಬ್ಯಾಂಕ್ ಅಧಿಕಾರಿಗಳು ಭ್ರಷ್ಟರೇ? ಎನ್ನುವ ಪ್ರಶ್ನೆ ಕೂಡ ಉಧ್ಭವವಾಗುತ್ತದೆ. ಗಮನಿಸಿ ಇಂದಿನ ಬ್ಯಾಂಕಿಂಗ್ ಕುಸಿತಕ್ಕೆ ಮುಖ್ಯ ಕಾರಣ ಶಾಡೋ ಬ್ಯಾಂಕಿಂಗ್!
ಏನಿದು ಶಾಡೋ ಬ್ಯಾಂಕಿಂಗ್?
ಮುಖ್ಯವಾಹಿನಿ ಹಣಕಾಸು ವ್ಯವಸ್ಥೆ ಬಿಟ್ಟು ಬೇರೆ ಮೂಲಗಳಿಂದ ಕೊಟ್ಟ ಸಾಲವನ್ನ ಶಾಡೋ ಬ್ಯಾಂಕಿಂಗ್ ಎಂದು ಕರೆಯಲಾಗುತ್ತದೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಬ್ಯಾಂಕ್ ಅಲ್ಲದ ಇತರ ಹಣಕಾಸು ಸಂಸ್ಥೆಗಳ ಒಕ್ಕೊಟ ಸಾಲವನ್ನ, ಹಣದ ಹರಿವನ್ನ ವ್ಯವಸ್ಥೆಯಲ್ಲಿ ಹೆಚ್ಚು ಮಾಡುತ್ತವೆ. ಗಮನಿಸಿ ಈ ರೀತಿಯ ಹಣವನ್ನ, ಸಾಲವನ್ನ ಅವು ನೀಡುವಾಗ ಮುಖ್ಯವಾಹಿನಿ ಬ್ಯಾಂಕುಗಳು ಒಳಪಡುವ ನಿಬಂಧನೆಗಳಿಗೆ ಇವುಗಳು ಒಳಪಡುವುದಿಲ್ಲ.
ಉದಾಹರಣೆ ನೋಡೋಣ. ಶ್ರೀರಾಮ ಫೈನಾನ್ಸಿಂಗ್ ಅಂಡ್ ಲೀಸಿಂಗ್ ಕಂಪನಿ ಎನ್ನುವ ಸಂಸ್ಥೆ ಬ್ಯಾಂಕಿನಿಂದ ಸಾಲವನ್ನ ಪಡೆಯುತ್ತದೆ. ಇದು ಸಾಮನ್ಯವಾಗಿ ಶಾರ್ಟ್ ಟರ್ಮ್ ಲೋನ್. ಅದನ್ನ ಶ್ರೀರಾಮ ಸಂಸ್ಥೆ ರಿಟೇಲ್ ಫೈನಾನ್ಸಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತದೆ. ಅಂದರೆ ಅದು ಮುಖ್ಯವಾಹಿನಿ ಬ್ಯಾಂಕುಗಳಲ್ಲಿ ಯಾರಿಗೆ ಸಾಲ ಸಿಗುವುದಿಲ್ಲ ಅವರಿಗೆ ಲಾಂಗ್ ಟರ್ಮ್ ಸಾಲವನ್ನ ನೀಡುತ್ತದೆ. ಅದು ಗೃಹ ಸಾಲ ಅಥವಾ ವಾಹನ ಸಾಲ ಅಥವಾ ಹೆಚ್ಚಿನ ಬಡ್ಡಿಗೆ ಕೆಲವು ಇಂಡಸ್ಟ್ರಿಗಳಿಗೆ ಕೂಡ ಸಾಲವನ್ನ ನೀಡುತ್ತದೆ. ಗಮನಿಸಿ ಮುಖ್ಯವಾಹಿನಿ ಬ್ಯಾಂಕ್ ನಿಂದ ಶಾರ್ಟ್ ಟರ್ಮ್ ಸಾಲ ಪಡೆದು ತನ್ನ ಗ್ರಾಹಕರಿಗೆ ಲಾಂಗ್ ಟರ್ಮ್ ಸಾಲ ಕೊಡುತ್ತಾರೆ. ಬ್ಯಾಂಕಿಗೆ ಹಣ ಮರಳಿಸಲು ಇನ್ನೊಂದು ಬ್ಯಾಂಕಿನಿಂದ ಸಾಲ ಪಡೆಯುತ್ತಾರೆ ಅಥವಾ ಗ್ರಾಹಕರಿಂದ ಬರುವ ಕಂತಿನ ಹಣವನ್ನ ಬಳಸಿಕೊಳ್ಳುತ್ತಾರೆ. ಅಂದರೆ ಇವೆಲ್ಲ ಸಮಯಾಧಾರಿತ. ಇದೊಂದು ಸರಪಳಿ ಇದ್ದಂತೆ. ಸರಪಳಿಯ ಒಂದು ತುಂಡು ತುಂಡಾದರೆ ಅಲ್ಲಿಗೆ ಪೂರ್ಣ ವ್ಯವಸ್ಥೆ ಕುಸಿತ ಕಾಣುತ್ತದೆ. ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಆಗಿರುವುದು ಇದೆ. ಯಸ್ ಬ್ಯಾಂಕ್ ಗೆ ಆರ್ ಬಿಐ ಎಚ್ಚರಿಕೆಯ ಪತ್ರ ಜನವರಿ 2019 ರಲ್ಲೇ ತಲುಪಿತ್ತು.
ಅಲ್ಲದೆ ಭಾರತೀಯ ಬ್ಯಾಂಕುಗಳು 2018 ರಿಂದ ಕುಸಿತ ಕಾಣಲು ಪ್ರಾರಂಭಿಸಿದ್ದವು. ನೇರ ನೋಟದಲ್ಲಿ ಬ್ಯಾಂಕುಗಳು ಅಪಾಯಕಾರಿ ಸಂಸ್ಥೆ ಅಥವಾ ಜನರಿಗೆ ಸಾಲ ಕೊಟ್ಟಿಲ್ಲ ಎನ್ನಿಸುತ್ತದೆ. ಆದರೆ ಬ್ಯಾಂಕಿಂದ ಸಾಲ ಪಡೆದ ಇತರ ಹಣಕಾಸು ಸಂಸ್ಥೆಗಳು ಅದನ್ನ ಬೇಕಾಬಿಟ್ಟಿ ಕೊಟ್ಟು ವಸೂಲು ಮಾಡಲು ವಿಫಲವಾಗಿವೆ. ಅಲ್ಲದೆ ಇಂತಹ ಹಣ ಬಹುಮುಖ್ಯವಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆಯಾಗಿದೆ. ರಿಯಲ್ ಎಸ್ಟೇಟ್ ಕುಸಿತ ಕೂಡ ಅಪರೋಕ್ಷವಾಗಿ ಬ್ಯಾಂಕಿಂಗ್ ಕುಸಿತಕ್ಕೆ ಕಾರಣವಾಗಿದೆ. ಇರಲಿ
ಯಸ್ ಬ್ಯಾಂಕ್ ಕುಸಿತಕ್ಕೆ ಮುಖ್ಯ ಕಾರಣಗಳು ಹೀಗಿವೆ:
ಯಾವುದೇ ವ್ಯವಸ್ಥೆ ಒಂದೇ ದಿನದಲ್ಲಿ ಕುಸಿತ ಕಾಣುವುದಿಲ್ಲ. ಯಸ್ ಬ್ಯಾಂಕ್ ವಿಷಯದಲ್ಲೂ ಇದು ಸತ್ಯ. ರೋಗವೆಂದು ನಿರ್ಧಾರವಾದಾಗ ಅದಕ್ಕೆ ಬೇಕಾದ ಔಷಧಿ ತೆಗೆದುಕೊಳ್ಳಬೇಕು. ಅದು ಬಿಟ್ಟು ಉಡಾಫೆ, ಭಂಡ ಧೈರ್ಯ, ಹೇಗೋ ಆಗುತ್ತೆ, ಎನ್ನುವುದರ ಜೊತೆಗೆ ರಾಣಾ ಕಪೂರ್ ತರಹ ಎಲ್ಲಾ ಮುಖ್ಯ ನಿರ್ಧಾರಗಳು ವ್ಯಕ್ತಿ ಕೇಂದ್ರೀಕೃತವಾದಾಗ ಇಂತಹ ಮಹಾನ್ ಕುಸಿತಗಳು ಸಂಭವಿಸುತ್ತವೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement