ಇದೇ ಗುರುವಾರ (26 ರಿಂದ)ದಿಂದ ಮಾಸ್ಟರ್ ಕಾರ್ಡ್ ಭಾರತದಲ್ಲಿ ತನ್ನ ಹೊಸ ಗ್ರಾಹಕರನ್ನ ತೆಗೆದುಕೊಳ್ಳುವಂತಿಲ್ಲ ಎನ್ನುವ ಸುದ್ದಿ ಅರ್ಥ ಲೋಕದಲ್ಲಿ ಗಿರಕಿ ಹೊಡೆಯುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಮಾಸ್ಟರ್ ಕಾರ್ಡ್ ಗುರುವಾರದಿಂದ ಡೆಬಿಟ್, ಕ್ರೆಡಿಟ್ ಅಥವಾ ಯಾವುದೇ ರೀತಿಯ ಪ್ರಿಪೇಯ್ಡ್ ಕಾರ್ಡ್ ಗಳನ್ನ ವಿತರಿಸುವಂತಿಲ್ಲ. ಈ ರೀತಿಯ ರದ್ದತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ಪ್ರಕಟಣೆ ಹೊರಡಿಸಿ "ಬ್ಯಾನ್ ತೆಗೆದಿದ್ದೇವೆ" ಎಂದು ಹೇಳುವವರೆಗೆ ಮುಂದುವರಿಯಲಿದೆ.
ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ "ಮಾಸ್ಟರ್ ಕಾರ್ಡ್ ಸಂಸ್ಥೆಗೆ 2018 ರಿಂದ ಇಲ್ಲಿಯವರೆಗೆ ಬದಲಾದ ರೀತಿ ನೀತಿಗಳಿಗೆ ಹೊಂದಿಕೊಳ್ಳಲು ಸಮಯ, ಅವಕಾಶವನ್ನ ನೀಡಿದ್ದೆವು, ಹೀಗಿದ್ದೂ ಅವರು ನಮ್ಮ ಹೊಸ ನಿಯಮಾವಳಿಗಳನ್ನ ಅಳವಡಿಸಿಕೊಳ್ಳಲು ತಡ ಮಾಡಿದ್ದರ ಫಲಿತಾಂಶವಿದು" ಎಂದು ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಹೊಸ ನಿಯಮಾವಳಿ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯದವರ ಹೊಸ ನಿಯಮಾವಳಿಗಳ ಪ್ರಕಾರ ಭಾರತೀಯ ಗ್ರಾಹಕರ ಮಾಹಿತಿಯನ್ನ ಭಾರತದಲ್ಲಿ ಇರುವ ಸರ್ವರ್ ನಲ್ಲಿ ಶೇಖರಿಸಿ ಇಡಬೇಕು. ಸದರಿ ಮಾಸ್ಟರ್ ಕಾರ್ಡ್ ಸಂಸ್ಥೆ ತನ್ನ ಎಲ್ಲಾ ಗ್ರಾಹಕರ ಮಾಹಿತಿಯನ್ನ ಭಾರತದ ಸರ್ವರ್ ನಲ್ಲಿ ಇಟ್ಟಿಲ್ಲ. ಎಲ್ಲಾ ಗ್ರಾಹಕರ ಜೊತೆಗೆ ವಿದೇಶಿ ನೆಲದಲ್ಲಿರುವ ಸರ್ವರ್ ನಲ್ಲಿ ಇದನ್ನ ಇಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನ ಆರು ತಿಂಗಳ ಒಳಗೆ ಸರಿ ಪಡಿಸಿಕೊಳ್ಳಬೇಕು ಎನ್ನುವ ನಿಬಂಧನೆಯನ್ನ ಹಾಕಿತ್ತು. ಈ ರೀತಿ ಮಾಸ್ಟರ್ ಕಾರ್ಡ್ ಹೊಸ ವಿತರಣೆಯನ್ನ ನಿಲ್ಲಿಸುವುದರಿಂದ ಸದ್ಯಕ್ಕೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಆದರೆ ಹೊಸ ಗ್ರಾಹಕರಾಗಲು ಇಚ್ಛಿಸುವರಿಗೆ ಇದರಿಂದ ತೊಂದರೆಯಾಗುತ್ತದೆ. "ಭಾರತೀಯ ರಿಸರ್ವ್ ಬ್ಯಾಂಕಿನ ಈ ನಡೆಯಿಂದ ಖಂಡಿತ ನಮಗೆ ಬೇಸರವಾಗಿದೆ, ಆದರೆ ನಾವು ಅವರೊಂದಿಗೆ ಕೆಲಸ ಮಾಡಿ ತಪ್ಪನ್ನ ಸರಿಪಡಿಸಕೊಳ್ಳುತ್ತೇವೆ" ಎನ್ನುವ ಮಾತನ್ನ ಮಾಸ್ಟರ್ ಕಾರ್ಡ್ ಸಂಸ್ಥೆಯ ಸಂಬಂಧಿತ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯ ರದ್ದತಿಯಾಗುತ್ತಿರುವುದು ಭಾರತದಲ್ಲಿ ಇದೆ ಮೊದಲೇನಲ್ಲ ಇದೆ ವರ್ಷ ಅಂದರೆ ಏಪ್ರಿಲ್ 2021 ರಂದು ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಮೇಲೆ ಕೂಡ ಇದೆ ರೀತಿಯ ರದ್ದತಿಯನ್ನ ಹೇರಲಾಗಿತ್ತು. ಗ್ರಾಹಕರ ಮಾಹಿತಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಗ್ರಾಹಕರ ಮಾಹಿತಿಯನ್ನ ಇತರ ದೇಶದವರು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ಸಾಧ್ಯತೆಯನ್ನ ಅಲ್ಲಗಳೆಯಲು ಬರುವುದಿಲ್ಲ. ಹೀಗಾಗಿ ಇದು ಕೆಲವ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಎಚ್ಚರಿಕೆ ವಹಿಸಬೇಕಾದ ವಿಷಯವಾಗಿದೆ.
ನೆರೆಯ ರಾಷ್ಟ್ರ ಚೀನಾದಲ್ಲಿ ಟೆಸ್ಲಾ ಸಂಸ್ಥೆಯ ಮೇಲೆ ಇದೆ ರೀತಿಯ ಆರೋಪವನ್ನ ಹೊರಿಸಲಾಗಿತ್ತು. ಚೀನಾ ದೇಶದ ಗ್ರಾಹಕರ ಮಾಹಿತಿಯನ್ನ ಅಮೇರಿಕಾ ದೇಶವು ಟೆಸ್ಲಾ ಮೂಲಕ ಬೇಹುಗಾರಿಕೆಗೆ ಬಳಸಿಕೊಂಡಿದೆ ಎನ್ನುವ ಗುರುತರವಾದ ಆರೋಪವನ್ನ ಟೆಸ್ಲಾ ಸಂಸ್ಥೆ ಎದುರಿಸಬೇಕಾಯಿತು. ಈ ಕಾರಣವೂ ಸೇರಿ ಇನ್ನೂ ಅನೇಕ ಕಾರಣಗಳಿಂದ ಟೆಸ್ಲಾ ಕಾರು ಮಾರಾಟ ಚೀನಾದಲ್ಲಿ ಬಹಳ ಕುಸಿತ ಕಂಡಿರುವುದು ಇಂದಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದು ಕೇವಲ ಒಂದು ಉದಾಹರಣೆ, ಡಿಜಿಟಲೈಸೇಶನ್ ನ ಅಡ್ಡಪರಿಣಾಮಗಳು ಒಂದೆರಡಲ್ಲ, ಎಲ್ಲವನ್ನೂ ಡಿಜಿಟಲೈಸೇಶನ್ ಅಡಿಯಲ್ಲಿ ತರುವುದು ಭಾರತದಂತಹ ದೇಶಕ್ಕೆ ಅಗತ್ಯವೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ.
ಪೂರ್ಣ ಡಿಜಿಟಲೀಕರಣದ ಅಡ್ಡ ಪರಿಣಾಮಗಳನ್ನ ಹೀಗೆ ಪಟ್ಟಿ ಮಾಡಬಹದು:
ಕೊನೆಮಾತು: ಒಂದಲ್ಲ ಹಲವಾರು ಕಾರಣಗಳಿಂದ ಪೂರ್ಣ ಡಿಜಿಟಲೀಕರಣ ಭಾರತದಂತಹ ದೇಶಕ್ಕೆ ಬೇಕಾಗಿಲ್ಲ. ಡಿಜಿಟಲೀಕರಣದ ಹೆಸರಿನಲ್ಲಿ ಸಾಮಾನ್ಯ ಜನರ ಬದುಕನ್ನ ಮೂರಾಬಟ್ಟೆ ಮಾಡಲಾಗಿದೆ. ಅವನ ಮೂಲಭೂತ ಮಾಹಿತಿಯಿಂದ, ಗೌಪ್ಯ ಎಂದುಕೊಂಡ ಮಾಹಿತಿ ಕೂಡ ಇಂದು ಜಗತ್ತಿನಲ್ಲಿ ಬಿಕರಿಗೆ ಇಡಲಾಗಿದೆ. ಹೀಗೆ ಹಣ ಕೊಟ್ಟು ಪಡೆದ ಮಾಹಿತಿಯನ್ನ ಬಳಸಿಕೊಂಡು ಹೇಗೆ ಗ್ರಾಹಕನ ಹೆಡೆಮುರಿ ಕಟ್ಟಿ ಅವನ ಹಣವನ್ನ, ಅವನ ಅನುಮತಿಯಿಲ್ಲದೆ, ಅವನಿಗೆ ಬೇಕಾದ ಅಥವಾ ಬೇಡವಾದ ವಸ್ತುಗಳನ್ನ ಕೊಳ್ಳಲು ಬಳಸಿಕೊಳ್ಳಬಹದು ಎನ್ನುವುದಕ್ಕೆ ಡಿಜಿಟಲೀಕರಣ ಎಂದು ಹೆಸರು. ಪೂರ್ಣ ಡಿಜಿಟಲೀಕರಣ ಬೇಕೇ ಅಥವಾ ಬೇಡವೇ ? ಎನ್ನುವುದು ನಿಮ್ಮ ಯೋಚನೆಗೆ ಬಿಟ್ಟದ್ದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement