ಜಾಗತಿಕ ಹಣದುಬ್ಬರದಲ್ಲಿ ಏರುಪೇರಾಗಿದೆ. ಜಾಗತಿಕ ಹಣಕಾಸು ವ್ಯವಸ್ಥೆ ಕೂಡ ಸಾಕಷ್ಟು ಬದಲಾವಣೆಗಳಿಗೆ ತುತ್ತಾಗಿದೆ. ಜಗತ್ತು ಮಾದರಿ ಹಣದುಬ್ಬರ ವ್ಯವಸ್ಥೆಯನ್ನ ಹೆಣೆದುಕೊಂಡಿತ್ತು. ಪಾಂಡೆಮಿಕ್ ನಾವು ಕಟ್ಟಿಕೊಂಡಿದ್ದ ವ್ಯವಸ್ಥೆಯನ್ನ ಛಿದ್ರಗೊಳಿಸಿದೆ.
ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಏಪ್ರಿಲ್ 2020 ರಿಂದ ಇಲ್ಲಿಯವರೆಗೆ 80 ಪ್ರತಿಶತ ಏರಿಕೆಯನ್ನ ಕಂಡಿವೆ. ಜಾಗತಿಕ ಮಟ್ಟದಲ್ಲಿ ವಿತ್ತ ಪಂಡಿತರ ನಡುವೆ ಕೆಲವರು ಹೀಗೆ ಏರಿಕೆಯಾದ ಸರಕುಗಳ ಬೆಲೆ ತಾತ್ಕಾಲಿಕ, ಬಹುಬೇಗ ಅಂದರೆ ಲಸಿಕೆ ಅಭಿಯಾನ ಮುಗಿಯುತ್ತ ಬಂದಂತೆ ಬೆಲೆಗಳು ಕೂಡ ಇಳಿಯುತ್ತವೆ ಎನ್ನುತ್ತಾರೆ. ಇನ್ನು ಕೆಲವರು "ಇಲ್ಲ, ಈ ಬೆಲೆಗಳು ಒಮ್ಮೆ ಏರಿಕೆಯಾದವು, ಇಳಿಯುವ ಮಾತೇ ಇಲ್ಲ. ಈ ಬೆಲೆ ಏರಿಕೆಗಳು ಶಾಶ್ವತವಾಗಿ ಉಳಿದುಕೊಳ್ಳುವಂತಹವು ಎನ್ನುತ್ತಾರೆ . ಹೀಗಾಗಿ ವಿತ್ತ ಜಗತ್ತಿನಲ್ಲಿ ಹೊಸ ಚರ್ಚೆ ಶುರುವಾಗಿದೆ.
ಹೀಗೆ ಬೆಲೆ ಒಂದೇ ಸಮನೆ ಏರಲು ಕಾರಣಗಳೇನಿರಬಹುದು?
ಕ್ವಾನ್ಟಿಟೆಟಿವ್ ಈಸಿಂಗ್ ಎಂದರೇನು?
ಸರಕಾರ ಸಂಕಷ್ಟಕ್ಕೆ ಈಡಾದಾಗ, ಅಂದರೆ, ಗಮನಿಸಿ ಪಾಂಡೆಮಿಕ್ ಕಾರಣ ಜಾಗತಿಕ ಮಟ್ಟದಲ್ಲಿ ಸರಕಾರಗಳು ಜನರಿಗೆ ಪ್ಯಾಕೇಜ್ ಘೋಷಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಸರಕಾರಕ್ಕೆ ಬರಬೇಕಾದ ಆದಾಯ ಕೂಡ ಬರುತ್ತಿಲ್ಲ, ಆದರೆ ಹಿಂದಿಗಿಂತ ಹೆಚ್ಚಿನ ಖರ್ಚು ಬಂದು ಕೂತಿದೆ. ಇಂತಹ ಸಂದರ್ಭದಲ್ಲಿ ಸರಕಾರ ದೀರ್ಘಕಾಲೀನ ಬಾಂಡ್ ಗಳನ್ನ ಹೊರಡಿಸುತ್ತದೆ. ಬಾಂಡ್ ಎಂದರೆ ಸಾಲ ಪತ್ರ. ಇಂತಹ ಬಾಂಡ್ಗಳನ್ನ ದೇಶದ ಸೆಂಟ್ರಲ್ ಬ್ಯಾಂಕ್ ಕೊಂಡುಕೊಳ್ಳುತ್ತದೆ. ಹೀಗಾಗಿ ಸರಕಾರದ ಬಳಿ ಹಣ ಬರುತ್ತದೆ, ಮತ್ತು ಸರಕಾರ ಇದನ್ನ ವಿವಿಧ ವಲಯಗಳಿಗೆ ಸಹಾಯಧನದ ರೀತಿಯಲ್ಲಿ ಪ್ಯಾಕೇಜ್ ಘೋಷಿಸುತ್ತದೆ. ಹೀಗೆ ಸಮಾಜದಲ್ಲಿ ಉಂಟಾಗಿರುವ ಹಣಕಾಸು ತೊಂದರೆಯನ್ನ ಕ್ಷಿಪ್ರ ಗತಿಯಲ್ಲಿ ಹೋಗಲಾಡಿಸಲು ಸರಕಾರ ತುಳಿಯುವ ಈ ದಾರಿಗೆ ಕ್ವಾನ್ಟಿಟೆಟಿವ್ ಈಸಿಂಗ್ ಎಂದು ಹೆಸರು. ಕೆಲವೊಮ್ಮೆ ಸೆಂಟ್ರಲ್ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕಿನ ಬಳಿ ಸರಕಾರ ಹೊರಡಿಸುವ ಇಂತಹ ಬಾಂಡ್ ಗಳನ್ನ ಕೊಳ್ಳಲು ಹಣವಿಲ್ಲದಿದ್ದರೆ ಅವರು ಇಂತಹ ಖರೀದಿಗೆ ಬೇಕಾದಷ್ಟು ಹಣವನ್ನ ಮುದ್ರಿಸುತ್ತಾರೆ.
ಹೀಗೆ ನಾವು ಹೊಸ ಹಣವನ್ನ ಮುದ್ರಿಸುವ ಮೂಲಕ ಸೃಷ್ಟಿಸಬಹುದು ಆದರೆ ಸರಕನ್ನ ಅಥವಾ ಸೇವೆಯನ್ನ ಹೇಗೆ ಸೃಷ್ಟಿಸುವುದು? ಹೀಗಾಗಿ ನಿಗದಿತ ಸೇವೆ ಮತ್ತು ಸರಕುಗಳ ಮೇಲಿನ ಬೆಲೆ ಹೆಚ್ಚಾಗುತ್ತದೆ. ಹೆಸರಿಗೆ ಹಣದ ಹರಿವು ಹೆಚ್ಚಾಗುತ್ತದೆ ಆದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹೆಚ್ಚಿದ ಹಣವನ್ನ ಮೊದಲು ರುಪಾಯಿಗೆ ಸಿಗುತ್ತಿದ್ದ ವಸ್ತುವಿಗೆ ಇಂದು ಒಂದೂಕಾಲು ರೂಪಾಯಿ ನೀಡಿ ಪಡೆಯುತ್ತೇವೆ. ಸರಕಾರ ಪ್ಯಾಕೇಜ್ ಘೋಷಿಸಿದ ಕೀರ್ತಿ ಪಡೆದುಕೊಳ್ಳುತ್ತದೆ. ದೀರ್ಘಾವಧಿಯಲ್ಲಿ ಹೆಚ್ಚಿದ ಬೆಲೆಗೆಳು ಕುಸಿಯದೆ ಇದು ಗ್ರಾಹಕನಿಗೆ ಅಥವಾ ಜನ ಸಾಮಾನ್ಯನಿಗೆ ಹೆಚ್ಚಿನ ಹೊರೆಯಾಗುತ್ತದೆ.
ಭಾರತದಲ್ಲಿ ಹಣದುಬ್ಬರ ಎಷ್ಟಿದೆ? ಇದರ ಪರಿಣಾಮಗಳೇನು?
ಹಣದುಬ್ಬರ ನಮ್ಮ ದೇಶದಲ್ಲಿ ಎಷ್ಟಿದೆ ಎನ್ನುವುದು ನಮ್ಮ ದೇಶದ ನಿಖರ ಜನಸಂಖ್ಯೆ ಎಷ್ಟು? ಎಂದು ಕೇಳಿದಂತೆ! ಒಂದೊಂದು ಪತ್ರಿಕೆಯವರು ಒಂದೊಂದು ರೀತಿ ಬರೆಯುತ್ತಾರೆ. ಕೆಲವರು 130ಕೋಟಿ ಎಂದರೆ ಇನ್ನು ಕೆಲವರು 135, 140... ಹೀಗೆ ಕೋಟಿಗಳಿಗೆ ನಮ್ಮಲ್ಲಿ ಬೆಲೆಯೇ ಇಲ್ಲ. ಹಾಗೆ ಹಣದುಬ್ಬರ ಕೂಡ!! ಆರ್ಬಿಐ ಒಂದು ಸಂಖ್ಯೆಯನ್ನ ನೀಡುತ್ತದೆ. ಕನ್ಸೂಮರ್ ಪ್ರೈಸ್ ಇಂಡೆಕ್ಸ್ ಒಂದು ಹೇಳುತ್ತದೆ, ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಒಂದು ಹೇಳುತ್ತದೆ, ಇವೆಲ್ಲವ ಬಿಟ್ಟು ನಿಜವಾಗಿ ಮಾರುಕಟ್ಟೆಯಲ್ಲಿ ಇರುವ ಹಣದುಬ್ಬರದ ಸಂಖ್ಯೆ ಏನು ಎನ್ನುವುದು ಯಾರೂ ನಿಖರವಾಗಿ ಹೇಳುವುದಿಲ್ಲ. ಕೆಲವೊಂದು ಮಾಹಿತಿಯನ್ನ ಸರಕಾರ, ಆರ್ಬಿಐ ಕೂಡ ನಿಖರವಾಗಿ ನೀಡದೆ ಜಾಣ ಮೌನಕ್ಕೆ ಶರಣಾಗುತ್ತವೆ. ಇವತ್ತಿನ ದಿನದ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮೂಲಗಳನ್ನ ಪರಿಶೀಲಿಸಿದರೆ ಹಣದುಬ್ಬರ ಸದ್ಯದ ಸಮಯದಲ್ಲಿ 11-12 ಪ್ರತಿಶತದ ಆಜುಬಾಜಿನಲ್ಲಿದೆ. ಇದರ ಪರಿಣಾಮದಿಂದ ಸಮಾಜ ನೆಗಟಿವ್ ಇಂಟರೆಸ್ಟ್ ರೇಟ್ ನಲ್ಲಿದೆ. ಅಂದರೆ ನಾವು ಹಣವನ್ನ ಬ್ಯಾಂಕಿನಲ್ಲಿಟ್ಟರೆ 5.5 ಪ್ರತಿಶತ ಬಡ್ಡಿಯನ್ನ ನೀಡುತ್ತಾರೆ. ಆದರೆ ಹಣದುಬ್ಬರ 11 ಪ್ರತಿಶತವಿದೆ. ಅರ್ಥ ಭಾರತೀಯ ಸಮಾಜ- 5.5 ಪ್ರತಿಶತ ಮೌಲ್ಯವೃದ್ಧಿವನ್ನ ಕಾಣಲಿದೆ.
ಕೊನೆಮಾತು: ಹಣದುಬ್ಬರ ಬೇಕೇಬೇಕು. ಹಣದುಬ್ಬರ ನಿಯಂತ್ರಣದಲ್ಲಿದ್ದರೆ ಅದು ಸಮಾಜಕ್ಕೆ ಪೂರಕ. ಇದರಲ್ಲಿ ಏರುಪೇರಾದರೆ ಅದು ಸಮಾಜಕ್ಕೆ ಮಾರಕ. ಅದರಲ್ಲೂ ಬೆಳವಣಿಗೆ ಕಾಣುತ್ತಿರುವ ನಮ್ಮಂತಹ ಸಮಾಜಕ್ಕೆ ಹಣದುಬ್ಬರ ಅತ್ಯವಶ್ಯಕವಾಗಿ ಬೇಕು. ಆದರೆ ಅದು ನಾವು ಬ್ಯಾಂಕಿನಲ್ಲಿ ಇಟ್ಟ ಹಣಕ್ಕೆ ಸಿಗುವ ಬಡ್ಡಿಗಿಂತ ಕಡಿಮೆಯಿರಬೇಕು. ಆದರೆ ಸದ್ಯದ ಸಮಯದಲ್ಲಿ ಭಾರತದಲ್ಲಿ ಹಣದುಬ್ಬರ ಬ್ಯಾಂಕಿನಲ್ಲಿಟ್ಟ ಹಣದ ಮೇಲಿನ ಬಡ್ಡಿಗಿಂತ ದುಪ್ಪಟ್ಟಾಗಿದೆ. ಇದು ಕಾಲ ಕ್ರಮೇಣ ಜನರಲ್ಲಿ ಸರಕಾರದ ಬಗ್ಗೆ ಇರುವ ನಂಬಿಕೆಯನ್ನ ಕಡಿಮೆಮಾಡುತ್ತದೆ. ಸದ್ಯದ ಸಮಯದಲ್ಲಿ ಆಹಾರ ಪದಾರ್ಥಗಳಿಂದ, ಅತ್ಯವಶ್ಯಕ ದಿನ ಬಳಕೆ ವಸ್ತುಗಳ ಮೇಲಿನ ಬೆಲೆಯಲ್ಲಿ ಕೂಡ ವ್ಯತ್ಯಯ ಉಂಟಾಗುತ್ತಿದೆ. ಇದನ್ನ ಸರಿಯಾದ ಸಮಯದಲ್ಲಿ ನಿಯಂತ್ರಿಸುವ ಅವಶ್ಯಕತೆ ಬಹಳ ಹೆಚ್ಚಾಗಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement