ಶಾಲೆ, ಕಾಲೇಜು ದಿನಗಳಲ್ಲಿ ಪೋಷಕರು ಖರ್ಚಿಗೆಂದು ಕೊಡುವ ಸಣ್ಣ ಹಣದಲ್ಲಿ, ಆಗೊಮ್ಮೆ-ಈಗೊಮ್ಮೆ ಕಾಲೇಜು ತಪ್ಪಿಸಿ ಸಿನೆಮಾ ನೋಡುವುದು, ಇಷ್ಟವಾದ ಹೋಟೆಲ್ನಲ್ಲಿ ಬೇಕೆನಿಸಿದ ತಿಂಡಿ ತಿನ್ನುವುದು ಬಿಟ್ಟು ಬೇರೇನೂ ಮಾಡಲಾಗದು. ಸ್ವಲ್ಪ ಹೆಚ್ಚು ಹಣವನ್ನ ತರುವ ಹುಡುಗನಿಗೆ ಹೆಚ್ಚು ಸ್ನೇಹಿತರು. ಆ ದಿನಗಳೇ ಹಾಗೆ, ಮುಂದಿನ ಬದುಕಿನಲ್ಲಿ ಅದನ್ನ ನೆನೆಸಿಕೊಂಡಾಗೆಲ್ಲಾ ಮನಸ್ಸಿಗೆ ಮುದ ನೀಡುವ ಇಂತಹ ಘಟನೆಗಳನ್ನ ಕಟ್ಟಿಕೊಳ್ಳಬೇಕು. ಕೊನೆತನಕ ನಮ್ಮ ಮಸ್ತಕದಲ್ಲಿ ಉಳಿಯುವುದು ಹೆಚ್ಚು ದುಡ್ಡಿಲ್ಲದೆ ಸಣ್ಣ ವಿಷಯದಲ್ಲಿ ಖುಷಿಕಂಡ ವಿಷಯಗಳು ಮಾತ್ರ. ಇಲ್ಲಿಯ ತನಕ ಎಲ್ಲವೂ ಸರಿಯೇ, ಆದರೆ ಕಾಲೇಜು ದಾಟಿ, ಕ್ಯಾಂಪಸ್ ನಲ್ಲಿ ನೌಕರಿ ಗಿಟ್ಟಿಸಿಕೊಳ್ಳುವ ಬಹಳಷ್ಟು ಮಕ್ಕಳು ನಂತರದ ದಿನಗಳ ಮೇಲೆ ಹಿಡಿತ ಹೊಂದದೆ ಇರುವುದು ಮುಂದಿನ ಆರ್ಥಿಕ ಭವಿಷ್ಯವನ್ನ ಮಂಕಾಗಿಸುತ್ತವೆ.
ಶಾಲೆ, ಕಾಲೇಜು ದಿನಗಳಲ್ಲಿ ಅನುಭವಿಸಲಾಗದ ಎಷ್ಟೋ ಕನಸುಗಳನ್ನ ಜೀವಿಸಲು ಶುರು ಮಾಡುತ್ತಾರೆ. ಕೈಗೆ ಸಂಬಳ ಬರುತ್ತಿರುತ್ತದೆ, ಇದರ ಜೊತೆಗೆ ಅಪ್ಪ ಅಮ್ಮ ಆರ್ಥಿಕವಾಗಿ ಒಂದಷ್ಟು ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿದ್ದು, ಮಕ್ಕಳ ಹಣವನ್ನ ಕೇಳದಿದ್ದರೆ ಮುಗಿಯಿತು. ಆ ವಯಸ್ಸೇ ಅಂತಹದು, ಅದಕ್ಕೆ ನಾಳಿನ ಚಿಂತೆ ಇರುವುದಿಲ್ಲ. ಇವುಗಳ ಜೊತೆಗೆ ಇತ್ತೀಚಿಗೆ ಹೆಚ್ಚಾಗುತ್ತಿರುವ ಫಿಲಾಸಫಿ 'ಇರುವುದೊಂದು ಬದುಕು, ಅದನ್ನ ಇಚ್ಛೆ ಬಂದಂತೆ ಬದುಕ ಬೇಕು' ಎನ್ನುವುದು. ಬದುಕಿನಲ್ಲಿ ಒಂದು ಹಂತದ ನಂತರ ಈ ಫಿಲಾಸಫಿ ಓಕೆ ಆದರೆ ಬೆಳೆಯುವ ಹಂತದಲ್ಲಿ ಇವುಗಳು ಅಷ್ಟು ಸರಿಯಲ್ಲ ಎಂದೇ ನನ್ನ ಭಾವನೆ, ಇರಲಿ.
ಒಟ್ಟಿನಲ್ಲಿ ಜೀವನವನ್ನ ಆದಷ್ಟೂ ಬದುಕಿಬಿಡಬೇಕು ಎನ್ನುವ ಧಾವಂತಕ್ಕೆ ಇಂದಿನ 'ಹೊಸ ತಲೆಮಾರಿನ' ಮಕ್ಕಳು ಬಿದ್ದಿವೆ. ತಿನ್ನು, ಕುಣಿ, ಸುತ್ತಾಡು... ಇಂದಷ್ಟೇ ನಮ್ಮದು, ನಾಳೆಯ ಕಂಡವರಾರು? ಎನ್ನುವ ಸಿದ್ಧಾಂತದ ಕೂಸುಗಳಿಗೆ ಸತ್ಯದ ದರ್ಶನ ಆಗುವುದು ಮದುವೆಯ ನಂತರ, ಒಂದರ ಹಿಂದೆ ಒಂದು ಜವಾಬ್ದಾರಿಗಳು ಬಂದು ಹೆಗಲನ್ನ ಏರತೊಡಗುತ್ತವೆ. ಒತ್ತಡ ಸಂಗ್ರಹವಾಗುತ್ತಾ ಹೋದಂತೆಲ್ಲಾ ಖಾಯಿಲೆಗಳು ಕೂಡ ಜೊತೆಯಾಗುತ್ತವೆ, ಅನುವಂಶೀಯತೆ ಕೂಡ ಒಂದಷ್ಟು ದೇಣಿಗೆಯನ್ನ ನೀಡುತ್ತದೆ. ನಲವತ್ತು, ಐವತ್ತರ ವೇಳೆಗೆ ಮುಂದಿನ ಸಾವಾಲುಗಳನ್ನ ನೆನೆದು ಬದುಕೇ ಬೇಡ ಎನ್ನುವ ಸ್ಥಿತಿಗೆ ಮನುಷ್ಯ ತಲುಪುತ್ತಾನೆ. ಎಲ್ಲವನ್ನ ಅಲ್ಲದಿದ್ದರೂ ಒಂದಷ್ಟು ಸಮಸ್ಯೆಗಳನ್ನ ಇಪ್ಪತ್ತರ ಹರೆಯದಲ್ಲೇ ಗಳಿಕೆಯ ಜೊತೆಗೆ ಉಳಿಕೆ ಮತ್ತು ಹೂಡಿಕೆಯ ಬಗ್ಗೆ ಕೂಡ ಗಮನ ನೀಡುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದಿತ್ತು. ನೆನಪಿರಲಿ ಇಪ್ಪತ್ತರಲ್ಲಿ ಹೂಡಿಕೆ ಶುರು ಮಾಡಿದರೆ ಹೆಚ್ಚು ಸಂಪತ್ತು ಸೃಷ್ಟಿಸಿಕೊಳ್ಳಬಹುದು.
ಹೀಗೆ ಗಳಿಕೆಯ ಜೀವನದ ಪ್ರಾಥಮಿಕ ಹಂತದಲ್ಲಿ ಉಳಿಸುವುದು, ಹೂಡಿಕೆ ಮಾಡುವುದರ ಬಹು ಮುಖ್ಯ ಪ್ರಯೋಜನಗಳನ್ನ ಪಟ್ಟಿ ಮಾಡೋಣ.
ಕೊನೆಮಾತು: ಜೀವನ ಇರುವುದು ಮೂರು ದಿನ, ಇದರ ಜೊತೆಗೆ ಇಂದಿನ ದಿನದಲ್ಲಿ ಎಷ್ಟೊಂದು ಅನಿಶ್ಚಿತತೆ ತುಂಬಿದೆ. ಇವುಗಳ ಮಧ್ಯೆ ನಮಗೇನೂ ಆಗದೆ ಬದುಕಿದ್ದರೂ ನಲವತ್ತರ ಆಜುಬಾಜಿನಲ್ಲಿ ಬಿಪಿ, ಶುಗರ್ ತಪ್ಪಿಸಲಾದೀತೆ? ನೀವು ಹೇಳಿದಂತೆ ಚಿಕ್ಕ ವಯಸ್ಸಿನಲ್ಲಿ ಕೂಡ ಮೋಜು, ಮಜಾ ಮಾಡದೆ, ಕಾಣದ ನಾಳೆಗೆ ಅಷ್ಟೊಂದು ಕೂಡಿಡುವ ಅವಶ್ಯಕತೆಯೇನು? ಎನ್ನುವ ಪ್ರಶ್ನೆ ಬಹಳ ಜನ ಓದುಗರ ಮನಸ್ಸಿನಲ್ಲಿ ಮೂಡಿರಲಿಕ್ಕೆ ಸಾಕು. ಹೌದು ನಿಮ್ಮ ಮಾತನ್ನ ಪೂರ್ಣವಾಗಿ ಅಲ್ಲಗಳೆಯುವುದಿಲ್ಲ. ಪೂರ್ಣವಾಗಿ ದುಡಿದ ಹಣವನ್ನ ಪೋಲು ಮಾಡುವುದು ಎಷ್ಟು ತಪ್ಪೋ, ಎಲ್ಲವನ್ನೂ ನಾಳೆಯ ಹೆಸರಿನಲ್ಲಿ ಕೂಡಿಡುವುದು ಕೂಡ ಅಷ್ಟೇ ತಪ್ಪು. ಮನುಷ್ಯ ಮೊದಲು ತಾನು ಖುಷಿಯನ್ನ ಕಂಡುಕೊಳ್ಳಬೇಕು. ಆತ ಖುಷಿಯಾಗಿರದೆ ತನ್ನ ಸುತ್ತಮುತ್ತಲಿನ ಇತರರನ್ನ ಹೇಗೆ ತಾನೇ ಖುಷಿಯಾಗಿಡಲು ಸಾಧ್ಯ?. ಸಂಬಳದ ಎಷ್ಟು ಪ್ರತಿಶತ ಉಳಿಸಬೇಕು ಎಂದು ನಾನು ಹೇಳುವುದಿಲ್ಲ, ಆದರೆ ನನ್ನದಲ್ಲ ಎಂದು ಒಂದಷ್ಟು ಹಣವನ್ನ ತೆಗೆದಿರಿಸಿ ಮಿಕ್ಕದ್ದು ಖರ್ಚು ಮಾಡುವುದು ಒಳಿತು. ಖರ್ಚು ಮಾಡಿ ಉಳಿದದ್ದು ಉಳಿಸುತ್ತೇನೆ ಎನ್ನುವುದು ಒಳ್ಳೆಯದಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement