ಹಿಂದೊಂದು ಕಾಲವಿತ್ತು ಜನ ಶಾಂತಿಯಿಂದ ಮತ್ತು ಇದ್ದುದ್ದರಲ್ಲೇ ನೆಮ್ಮದಿಯಿಂದ ಬದುಕುತಿದ್ದರು.
ಕೊರೋನ ಎನ್ನುವ ವೈರಸ್ ಬದುಕಿನ ಬುನಾದಿಯನ್ನ ಅಲ್ಲಾಡಿಸುತ್ತಿದೆ. ಇಂದಿನ ಸಮಯದಲ್ಲಿ ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಮಾಸಿಕ ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವವನಿಂದ ಲಕ್ಷಾಂತರ ಸಂಬಳ ಪಡೆಯುವ ವ್ಯಕ್ತಿಯದ್ದು ಅದೇ ಗೋಳು. ಇಂತಹ ಸ್ಥಿತಿ ಏಕೆ ಬಂದಿತು? ಎನ್ನುವ ವಿಶ್ಲೇಷಣೆಗೆ ಹೋದರೆ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ವಿಷಯ, 'ಇತಿಮಿತಿಯಿಲ್ಲದ ಖರ್ಚು 'ಮತ್ತು 'ನಮಗೇನು ಬೇಕು ಅಥವಾ ಬೇಡ' ಎನ್ನುವ ಅರಿವು ಇಲ್ಲದೆ ಇರುವುದು ಸಾಮಾನ್ಯವಾಗಿ ಎಲ್ಲರೂ ಹಣಕಾಸಿನ ಕೊರತೆ ಎದುರಾಗಲು ಇರುವ ಮುಖ್ಯ ಕಾರಣ.
ನನ್ನ ಕಾರಿನ ಸಾರಥಿ ತುಂಬಾ ಒಳ್ಳೆಯ ಹುಡುಗ ಎಲ್ಲವೂ ಸರಿ, ಆದರೆ ಆತನ ಕೈಲಿರುವ ಮೊಬೈಲ್ ಬೆಲೆ 12 ಸಾವಿರ ರೂಪಾಯಿ. ಹೋಗಲಿ ಬಿಡಿ ಆತನಿಗೆ ಹಣಕಾಸಿನ ಅರಿವಿಲ್ಲ ಆರ್ಥಿಕ ಮೌಢ್ಯತೆಯಿಂದ ಬಳಲುತ್ತಿದ್ದಾನೆ ಎಂದು ಬಿಡಬಹುದು. ನನಗೆ ಇನ್ನೊಬ್ಬರು ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮಿತ್ರರೊಬ್ಬರಿದ್ದಾರೆ ಅವರ ತಿಂಗಳ ಸಂಬಳ ಲಕ್ಷ ರೂಪಾಯಿ ಆದರೂ ಸದಾ ಋಣಾತ್ಮಕ ಮಾತು ಮುಖದಲ್ಲಿ ನೀರಸ ಭಾವ. ಕೊನೆಗೂ ನನ್ನ ಬಳಿ ತಮ್ಮ ಆರ್ಥಿಕತೆಯನ್ನು ಹೇಳಿಕೊಂಡರು. ಹೆಸರಿಗೆ ಲಕ್ಷ ಸಂಬಳ ಅದು ಬಂದ ಒಂದೆರಡು ದಿನವೂ ಅವರು ಅದರ ಮಾಲೀಕರಲ್ಲ. ಹತ್ತರಿಂದ ಹದಿನೈದು ಸಾವಿರ ಬಾಡಿಗೆಗೆ ಸಿಗುವ ಅಪಾರ್ಟ್ಮೆಂಟ್ ಅರವತ್ತು ಲಕ್ಷ ವ್ಯಯಿಸಿ ಖರೀದಿಸಿದ್ದಾರೆ. ಅದಕ್ಕೆಂದು ಪ್ರತಿ ತಿಂಗಳ ಕಂತು ಬರೋಬ್ಬರಿ ನಲವತ್ತು ಸಾವಿರ! ಕಾರಿಗೆ ಇನ್ನೊಂದು ಎಂಟು ಸಾವಿರ. ಇಬ್ಬರು ಮಕ್ಕಳ ಶಾಲೆಯ ಶುಲ್ಕ ತಿಂಗಳ ಲೆಕ್ಕದಲ್ಲಿ ಹತ್ತಿರಹತ್ತಿರ ಇಪ್ಪತ್ತು ಸಾವಿರ. ಪೆಟ್ರೋಲ್, ಮನೆ ಖರ್ಚು, ನಾಳಿನ ಅಸ್ಥಿರತೆಗಾಗಿ ಒಂದಷ್ಟು ಉಳಿತಾಯ ಮಾಡಬೇಕಲ್ಲವೇ? ಈ ಮಧ್ಯೆ ಯಾರಿಗಾದರೂ ಹುಷಾರು ತಪ್ಪಿದರೆ ಅದು ಇನ್ನೊಂದು ಕಥೆ.
ಮೇಲಿನ ಇಬ್ಬರು ವಿಭಿನ್ನ ವ್ಯಕ್ತಿಗಳ ಉದಾಹರಣೆ ಹೇಳಿದ್ದರ ಉದ್ದೇಶ ಇಷ್ಟೇ. ವ್ಯಕ್ತಿಯ ವೈಯಕ್ತಿಕ ಹಿನ್ನೆಲೆ ಏನೇ ಇರಲಿ ಹಣಕಾಸಿನ ವಿಷಯದಲ್ಲಿ ಅವರು ಸಮಾನರು. ಸಮಾಜದಲ್ಲಿ ಗಣ್ಯರು ಹೆಸರು ಮಾಡಿದವರು ಕೂಡ ಹಣಕಾಸಿನ ಮೌಢ್ಯತೆಯಿಂದ ಬಳಲುವುದನ್ನು ನಾವು ಕಂಡಿದ್ದೇವೆ. ಚಿಕ್ಕಂದ್ದಿನಿಂದ ನಮ್ಮ ಹೆತ್ತವರು ಮಾಡಿದ್ದು ಸುತ್ತಮುತ್ತಲಿನ ಜನರ ನೋಡಿ ಕಲಿತದ್ದು ಅಷ್ಟು ಸಲುಭವಾಗಿ ಹೋಗುವುದಿಲ್ಲ.
ಆರ್ಥಿಕ ಸಾಕ್ಷರತೆ ಬರದೆ ಹಣಕಾಸಿನ ಕೊರತೆ ನೀಗುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಒಂದು ಸಣ್ಣ ತಪ್ಪು ಜೀವನ ಪೂರ್ತಿ ಅನುಭವಿಸಬೇಕಾದೀತು ಎಚ್ಚರ. ಕಳೆದ ಎರಡು ದಶಕದಲ್ಲಿ ನಮ್ಮ ಬದುಕು ಪೂರ್ಣ ಬದಲಾಗಿ ಹೋಗಿದೆ. ನಾವು ಜಾತಿ, ಧರ್ಮ, ಭಾಷೆ ಇವುಗಳ ಮೀರಿ ಇಂತಹ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ. ಇದೀಗ ನಮ್ಮೆದುರು ಹೊಸ ಸನ್ನಿವೇಶ ಬಂದು ನಿಂತಿದೆ. ಇದೇನಿದು? ಎನ್ನುವುದನ್ನ ಒಂದಷ್ಟು ತಿಳಿದುಕೊಳ್ಳೋಣ.
ಇದೆಲ್ಲಾ ಆಗುತ್ತಿರುವುದು ನಾವು ನಮ್ಮದಲ್ಲದ ಜೀವನಶೈಲಿಯ ಅನುಕರಣೆಯಿಂದ! ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಅವರದೇ ಅದ ಪ್ರಶ್ನೆ ಪತ್ರಿಕೆಯಿದೆ. ಒಬ್ಬರ ಉತ್ತರ ಇನ್ನೊಬ್ಬರಿಗೆ ಸರಿಯಾಗುವುದಿಲ್ಲ. ಅರ್ಥವಿಷ್ಟೆ.., ನಾವು ಪಾಶ್ಚ್ಯಾತರ ಅಂಧಾನುಕರಣೆ ಮಾಡುತ್ತಾ ನಮ್ಮ ಜೀವನಶೈಲಿಯನ್ನ ಕೀಳು ಎನ್ನುವ ಭಾವನೆ ಬೆಳೆಸಿಕೊಂಡಿದ್ದೇವೆ. ನೀವು ನಮ್ಮ ಹಿಂದಿನವರು ಬದುಕುತ್ತಿದ್ದ ರೀತಿಯನೊಮ್ಮೆ ಅವಲೋಕಿಸಿ. ಅಲ್ಲಿ ಕಸ ಎನ್ನುವ ಪದಕ್ಕೆ ಅರ್ಥವಿರಲಿಲ್ಲ. ಸಂಪನ್ಮೂಲಗಳ ಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಅವಶ್ಯಕೆತೆಗೆ ಮೀರಿದ ಯಾವುದನ್ನೂ ಅವರು ಬಳಸುತ್ತಿರಲಿಲ್ಲ. ಅಲ್ಲಿ ಸಾಮಾಜಿಕ ಸಾಮರಸ್ಯವಿತ್ತು. ಇಂದು ಆ ಜಾಗವನ್ನ ಸಾಮಾಜಿಕ ಒತ್ತಡ ಕಸಿದುಕೊಂಡಿದೆ.
ಸಮಾಜ ಇಂತಹ ಸಂಕ್ರಮಣ ಸ್ಥಿತಯಲ್ಲಿರುವಾಗ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಷ್ಟೀಯ ಸ್ಥಿರತೆ ಮತ್ತು ಭದ್ರತೆ ಬಹಳ ಮುಖ್ಯ. ಗಮನಿಸಿ ಒಬ್ಬ ವ್ಯಕ್ತಿ ಆರ್ಥಿಕವಾಗಿ ಭದ್ರವಾಗಿದ್ದರೆ ಅದು ಆತನ ಕುಟುಂಬದ ಆರ್ಥಿಕ ಭದ್ರತೆಗೆ ಬುನಾದಿ. ಹಾಗೆಯೇ ಒಂದು ಕುಟುಂಬ ಆರ್ಥಿಕವಾಗಿ ಭದ್ರವಾದರೆ ಅದು ಆ ಸಮಾಜದ ಆರ್ಥಿಕ ಭದ್ರತೆಗೆ ಸಹಕಾರಿ. ಹಾಗೆಯೇ ಸಮಾಜ ಭದ್ರವಾದರೆ ರಾಜ್ಯ, ದೇಶಗಳೂ ಭದ್ರವಾಗುತ್ತದೆ. ಹೀಗಾಗಿ ನಾನೊಬ್ಬ ಬದಲಾದರೇನು? ಎನ್ನುವ ಭಾವನೆಯಿಂದ ಹೊರಬಂದು ಮೇಲೆ ಉಲ್ಲೇಖಿಸಿದ ಮೂಲಭೂತ ತತ್ವಗಳನ್ನ ಪಾಲಿಸಿದ್ದೆ ಆದರೆ ಎಲ್ಲರಿಗೂ ಒಳ್ಳೆಯದು.
ಕೊನೆ ಮಾತು: ಯಾರು ಎಷ್ಟೇ ಸಲಹೆ ನೀಡಲಿ ಅದನ್ನು ಪಾಲಿಸುವುದು ನಿಮ್ಮ ಕೈಲಿದೆ. ಮುಂದಿನ ದಿನಗಳು ಇನ್ನಷ್ಟು ಅಸ್ಥಿರತೆ ಆಂತಕ ಹೊತ್ತು ತರಲಿವೆ.! ಕೆಲಸವಿಲ್ಲ ಎನ್ನುವುದು ಬಹಳ ಸಾಮಾನ್ಯ ಎನ್ನುವಂತಾಗುತ್ತದೆ. ಹೊಸ ಸನ್ನಿವೇಶಕ್ಕೆ ತಕ್ಕಂತೆ ಒಗ್ಗಿಕೊಂಡು ಬದುಕಲು ಕಲಿಯಬೇಕು. ನೆನಪಿರಲಿ ಇಂದಿನ ಸಮಾಜದಲ್ಲಿ ಬದಲಾದ ಸನ್ನಿವೇಶಕ್ಕೆ ಎಷ್ಟು ಬೇಗ ನಾವು ಹೊಂದಿಕೊಳ್ಳುತ್ತೇವೆ ಅಷ್ಟೂ ಒಳ್ಳೆಯದು. ಪ್ರಕೃತಿ ಬಲಹೀನರನ್ನ ಬಲಿ ತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಯಕ್ಕೆ ತಕ್ಕಂತೆ ಬದಲಾದವರಿಗೆ ಮಾತ್ರ ಉಳಿಗಾಲ!!.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement