ಕೊರೋನ ವೈರಸ್ ಬಯೋಲಾಜಿಕಲ್ ವೆಪನ್, 2015 ರ ಸಮಯದಲ್ಲಿ ಚೀನಾದ ಪೀಪಲ್ಸ್ ಲಿಬೇರೇಷನ್ ಆರ್ಮಿ ಬಹಳ ದೊಡ್ಡ ಮೊತ್ತವನ್ನ ಹೂಡಿಕೆ ಮಾಡಿತ್ತು.
ಹೂಡಿಕೆಯ ಉದ್ದೇಶ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಮನುಷ್ಯರಿಗೆ ಮಾತ್ರ ಸೋಂಕು ತಗುಲಿಸಿ ಘಾತಕವಾಗಬಲ್ಲ ಕೊರೋನ ವೈರಸ್ ಕಂಡು ಹಿಡಿಯುವುದಾಗಿತ್ತು. 2015ರ ವೇಳೆಗೆ ಇಂತಹ ಕೊರೋನ ವೈರಸ್ ಚೀನಾದ ಬಳಿಯಿತ್ತು. ಆದರೆ ನಾಲ್ಕು ವರ್ಷಗಳ ಕಾಲ ಅದು ಹೇಗೆಲ್ಲಾ ಪರಿಣಾಮ ಬೀರಬಹುದು ಎನ್ನುವುದನ್ನ ಅವರು ಅಧ್ಯಯನ ಮಾಡಲು ಸಮಯವನ್ನ ತೆಗೆದುಕೊಂಡರು. ಇದು ಆರ್ಮಿ ಲ್ಯಾಬ್ ನಲ್ಲಿ ತಯಾರಿಸಿ, ಯೋಜನೆ ಮಾಡಿ ಜಗತ್ತಿಗೆ ಬಿಟ್ಟ ವೈರಸ್. ಇದು ಪ್ರಕೃತ್ತಿಯಿಂದ ಉಂಟಾದುದ್ದಲ್ಲ. ಈ ಮಾತುಗಳನ್ನ ಹೇಳಿದವರು ಡಾ. ಲೀ ಮೆಂಗ್ ಯಾನ್. ಈಕೆ ಹಾಂಗ್ ಕಾಂಗ್ ಯೂನಿವೆರ್ಸಿಟಿಯಲ್ಲಿ ಪೋಸ್ಟ್ ಡಾಕ್ಟೋರಲ್ ವೈರೊಲೊಜಿಸ್ಟ್ ಮಾಡುತ್ತಿದ್ದವರು. ಏಪ್ರಿಲ್ 2020 ರ ವೇಳೆಗೆ ಇವರು ಅಮೇರಿಕಾದಲ್ಲಿ ಆಶ್ರಯವನ್ನ ಪಡೆದಿದ್ದಾರೆ. ಈ ಮಾತುಗಳು ನಿಜವೋ ಅಥವಾ ಸುಳ್ಳೋ? ಎನ್ನುವುದನ್ನ ವಿಶ್ಲೇಷಣೆ ಮಾಡುವುದು ಈ ಲೇಖನದ ಉದ್ದೇಶವಲ್ಲ. ಬದಲಿಗೆ ಮನುಷ್ಯನ ಅಭಿವೃದ್ಧಿ ಮಂತ್ರ ಇಂತಹ ಕಾರ್ಯಗಳಿಗೆ ಅಸ್ಥಿಭಾರವನ್ನ ಹಾಕುತ್ತದೆ ಎನ್ನುವುದನ್ನ ವಿವರಿಸುವುದು. ಮತ್ತು ನಮ್ಮ ಇಂದಿನ ಗ್ರೋಥ್ ಅಥವಾ ಅಭಿವೃದ್ಧಿ ಮಂತ್ರ ಸರಿಯಿದೆಯೇ? ಎಂದು ಪ್ರಶ್ನಿಸಿಕೊಳ್ಳುವುದು.
ಕಳೆದ ನಲವತ್ತು ವರ್ಷಗಳಲ್ಲಿ ಚೀನಾ ಜಗತ್ತನ್ನ ಅಚ್ಚರಿಗೊಳಿಸುವ ರೀತಿಯಲ್ಲಿ ಬೆಳೆಯುತ್ತಾ ಬಂದದ್ದು ಇಂದಿಗೆ ನಮಗೆಲ್ಲಾ ತಿಳಿದಿರುವ ವಿಷಯ. ರಷ್ಯಾ ದೇಶವನ್ನ ಶೀತಲ ಸಮರದಲ್ಲಿ ಮಣಿಸಿದ್ದ ಅಮೇರಿಕಾ ಇನ್ನೊಂದು ಶತಮಾನ ತನ್ನ ಪಾರುಪತ್ಯ ಜಗತ್ತಿನ ಮೇಲೆ ಖಾಯಂ ಎಂದುಕೊಂಡಿತ್ತು. ಎಲ್ಲಿಯೂ ಇಲ್ಲದ ಚೀನಾ ದಿಢೀರ್ ಎಂದು ತನ್ನ ಬೃಹದಾಕಾರವನ್ನ ವಿಶ್ವಕ್ಕೆ ತೋರಿಸಿತು. ಇವತ್ತಿಗೆ ಜಗತ್ತಿನಲ್ಲಿ ಈ ಮಟ್ಟದ ಅಸ್ಥಿರತೆ ಇರಲು ಕಾರಣ ವಿಶ್ವದ ಹುಕುಂಮತ್ತಿಗೆ ಬಲಾಢ್ಯ ರಾಷ್ಟ್ರಗಳ ನಡುವಿನ ಕಾದಾಟ.
ಜಗತ್ತಿಗೆ ಜಗತ್ತು ಇನ್ನೂ ಕೊರೋನ ವೈರಸ್ ನ ಹಾವಳಿಯಿಂದ ಬಳಲುತ್ತಿದ್ದರೆ, ಚೀನಾ ಮಾತ್ರ ಸೌತ್ ಚೀನಾ ಸಮುದ್ರದಲ್ಲಿ ತನ್ನ ನೌಕಾ ಬಲವನ್ನ ತೋರಿಸುತ್ತಿದೆ. ಈ ಹಿಂದೆ ಅಮೇರಿಕಾ ಮತ್ತು ಯೂರೋಪಿನ ಹಲವು ರಾಷ್ಟ್ರಗಳು ಸೌತ್ ಚೀನಾ ಸಮುದ್ರದಲ್ಲಿ ತಮ್ಮ ನೌಕಾ ಪಡೆಗಳನ್ನ ಕೂಡ ಸುತ್ತು ಹೊಡೆಸಿದ್ದವು. ವಾರದಿಂದ ಇಲ್ಲಿ ಠಿಕಾಣಿ ಹೂಡಿ ತಮ್ಮ ಪ್ರಾಬಲ್ಯವನ್ನ ವಿಶ್ವಕ್ಕೆ ಸಾರುವ ಕೆಲಸವನ್ನ ಚೀನಾ ಮಾಡುತ್ತಿದ್ದೆ. ಈ ದಾರಿಯಲ್ಲಿ ಸಾವಿರಾರು ಕೋಟಿಯ ವ್ಯವಹಾರ ಸಾಗುತ್ತದೆ. ಇದರ ಮೇಲಿನ ಹಿಡಿತಕ್ಕೆ ಆಗುತ್ತಿರುವ ಜಟಾಪಟಿಯಿದು. ಹೆಚ್ಚು ಹಣ ಸಂಗ್ರಹವಾದಂತೆಲ್ಲ ಜಗತ್ತು ನನ್ನ ಮಾತು ಕೇಳಲಿ ಎನ್ನುವ ಭಾವನೆ ಬಲವಾಗುತ್ತಾ ಹೋಗುತ್ತದೆ. ಅಮೇರಿಕಾ ದಶಕಗಳ ಕಾಲ ಜಗತ್ತಿನ ಮೇಲೆ ಹಿಡಿತ ಹೊಂದಿದ್ದನ್ನ ನಾವು ಕಾಣಬಹುದು. ಆ ದೇಶ ಎಂದಿನಿಂದಲೂ ಡಬಲ್ ಸ್ಟ್ಯಾಂಡರ್ಡ್ ಬಳಸಿಕೊಂಡು ಬಂದಿತು. ತನ್ನ ವಿರುದ್ಧ ಧ್ವನಿಯೆತ್ತಿದ ದೇಶಗಳ ವಿರುದ್ಧ ಸ್ಯಾಂಕ್ಷನ್ ಹೆಸರಿನಲ್ಲಿ ಬಹಿಷ್ಕಾರ ಹಾಕುತ್ತಿತ್ತು. ಇವತ್ತಿಗೆ ಅಮೇರಿಕಾ ಕೈಲಿದ್ದ ಆ ಅಧಿಕಾರವನ್ನ ಚೀನಾ ಕಸಿಯುವ ಹುನ್ನಾರದಲ್ಲಿದೆ. ಅಧಿಕಾರ ಹಸ್ತಾಂತರ ಸುಲಭವಾಗಿ ಆಗುತ್ತಿಲ್ಲ. ಹೀಗಾಗಿ ಇಷ್ಟು ದೊಡ್ಡ ಮಟ್ಟದ ಹೊಡೆದಾಟವಾಗುತ್ತಿದೆ. ಹಿಂದೆ ಮದ್ದುಗುಂಡುಗಳನ್ನ ಸಿಡಿಸಿ ಮಾಡುವ ಯುದ್ದದಲ್ಲಿ ಸೈನಿಕರ ಸಾವಾಗುತ್ತಿತ್ತು. ಇಂದು ಜಗತ್ತು ಬೇರೆಯ ರೀತಿಯ ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಇಲ್ಲಿ ಸಾವಿಗೆ ಯಾರೂ ಬೇಕಾದರೂ ಈಡಾಗಬಹುದು.
ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಹೊರಟಿರುವ ದಾರಿ ಎಷ್ಟರ ಮಟ್ಟಿಗೆ ಸರಿಯಿದೆ? ಗಮನಿಸಿ ನೋಡಿ 1950ರ ನಂತರ ಅಮೇರಿಕಾ ಸೃಷ್ಟಿಸಿದ ಸಂಪತ್ತು, ಜಗತ್ತಿನ ಇತರೆ ದೇಶಗಳು ಆ ದೇಶದ ಅಭಿವೃದ್ಧಿ ಮಾಡೆಲ್ನನ್ನ ನಕಲು ಮಾಡಲು ಪ್ರೇರೇಪಿಸಿತು. ಇತರ ದೇಶಗಳು ಕೂಡ ಇದರಿಂದ ಸಂಪತ್ತು ಸೃಷ್ಟಿ ಮಾಡಿದವು. ಗಗನಚುಂಬಿ ಕಟ್ಟಡಗಳು, ಜನರ ಬಳಿ ಓಡಾಡಲು ಕಾರು, ಐಷಾರಾಮಿ ವಸ್ತುಗಳು ಎಲ್ಲವೂ ಬಂದವು. ಆದರೆ ಈ ಅಭಿವೃದ್ಧಿಯ ಓಟ ಎಲ್ಲಿಯವರೆಗೆ ತಾನೇ ಸಾಗೀತು? ಎಲ್ಲಕ್ಕೂ ಒಂದು ಅಂತ್ಯ ಎನ್ನುವುದು ಇದ್ದೇ ಇರಬೇಕಲ್ಲವೇ? ಇವುಗಳ ಬಗ್ಗೆ ಒಂದಷ್ಟು ಅಂಶಗಳನ್ನ ಗಮನಿಸೋಣ.
ಕೊನೆ ಮಾತು: ಪೂರ್ಣ ಜಗತ್ತು ಅಮೆರಿಕಾ ಅಭಿವೃದ್ಧಿ ಮಾದರಿಯನ್ನ ಪ್ರಶ್ನೆ ಮಾಡದೆ ನಕಲು ಮಾಡಿದುದರ ಕಾರಣ ಮತ್ತು ಜಾಗತೀಕರಣ ಇವೆರೆಡೂ ಇಂದು ಸಮಾಜ ತಿರುಗಿ ತಮ್ಮ ಹಳೆಯ ನೆಮ್ಮದಿಯ ದಿನಗಳಿಗೆ ಮರಳದಂತೆ ಮಾಡಿದೆ. ಒಂದು ದೇಶ ತಾನು ತಯಾರಿಸಿದ ಪದಾರ್ಥಗಳನ್ನ ತನ್ನ ದೇಶದ ಜನತೆಗೆ ಎಷ್ಟು ಮಾರಲಾದೀತು? ಹೂಡಿಕೆದಾರ ಹೆಚ್ಚು ಲಾಭದ ಆಸೆ ಜಾಗತೀಕರಣಕ್ಕೆ ನಾಂದಿಯಾಯ್ತು. ಇವತ್ತಿಗೆ ವಿಶ್ವ ವಿತ್ತ ಜಗತ್ತು ಕುಸಿದಾಗ ಜಾಗತೀಕರಣ ತಪ್ಪು ಎನ್ನುವುದರ ಅರಿವು ಅವರಿಗಾಗಿದೆ. ಈ ವಿಷಯವನ್ನ ಭಾರತ ಬಹಳ ಬೇಗ ಮನಗಾಣಬೇಕಾಗಿದೆ. ಆತ್ಮನಿರ್ಭರ ಎನ್ನುವ ಮಾತುಗಳು ಬರಿ ಗಾಳಿ ಮಾತಾಗದೇ ನಿಜಕ್ಕೂ ಕಾರ್ಯರೂಪಕ್ಕೆ ಬಂದರೆ ನಾಳೆಯ ಬಗ್ಗೆ ಒಂದಷ್ಟು ಭರವಸೆಯನ್ನ ಇಟ್ಟುಕೊಳ್ಳಬಹುದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement