ಸಾಮಾನ್ಯವಾಗಿ ಜನ ಒಂದಷ್ಟು ಗಳಿಸಲು ಶುರು ಮಾಡಿದ ಮೇಲೆ ಎಲ್ಲಾದರೂ ಉಳಿಸಬೇಕು ಮತ್ತು ಅದನ್ನ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತಾರೆ. ಆದರೆ ಅದನ್ನ ಎಲ್ಲಿ ಮತ್ತು ಹೇಗೆ ಉಳಿಸಬೇಕು ಅಥವಾ ಹೂಡಿಕೆ ಮಾಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ತಿಳುವಳಿಕೆ ಅವರಿಗಿರುವುದಿಲ್ಲ. ಸ್ನೇಹಿತನೋ ಅಥವಾ ಇತರರು ಇಂತಿಪ್ಪ ಕಡೆ ಹೂಡಿಕೆ ಮಾಡಿದೆ, ಈ ಷೇರು ಚೆನ್ನಾಗಿದೆ, ಆ ಐಪಿಒ ಖರೀದಿಸಿ ಕೇವಲ ನಾಲ್ಕು ತಿಂಗಳಲ್ಲಿ ನನ್ನ ಹಣ ದುಪ್ಪಟ್ಟು ಮಾಡಿಕೊಂಡೆ ಎನ್ನುವ ಮಾತುಗಳನ್ನ ಕೇಳಿ ಹೂಡಿಕೆ ಮಾಡುವವರ ಸಂಖ್ಯೆ ನಮ್ಮ ದೇಶದಲ್ಲಿ ಅಸಂಖ್ಯ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತಪ್ಪಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಮೂಲಭೂತ ಹೂಡಿಕೆಗಳನ್ನ ನೀವು ಮಾಡಿರಬೇಕು. ಅದಿಲ್ಲದೆ ಏಕಾಏಕಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ತಳಪಾಯ ಇಲ್ಲದೆ ಮನೆಯನ್ನ ಕಟ್ಟಿದಂತೆ!. ಇವತ್ತಿನ ಬಹುತೇಕ ಯುವ ಜನತೆ ಈ ಮೂಲಭೂತ ಹೂಡಿಕೆಗಳನ್ನ ಮಾಡಿಲ್ಲ, ಬದಲಿಗೆ ನೇರವಾಗಿ ಷೇರು ಮಾರುಕಟ್ಟೆಯನ್ನ ಪ್ರವೇಶಿಸಿದ್ದಾರೆ. ಮೂಲಭೂತ ಹೂಡಿಕೆಗಳು ಮಾಡಿದ ನಂತರ ಉಳಿದ ಹಣವನ್ನ ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದು ಜಾಣತನ.
ಸಾಮಾನ್ಯವಾಗಿ ಷೇರು ಮಾರುಕಟ್ಟೆ ಬ್ರೋಕರ್ಗಳು ಅಥವಾ ಸಂಸ್ಥೆಗಳು ಹೂಡಿಕೆ ಮೇಲಿನ ಲಾಭಂಶ ಅಥವಾ ವೃದ್ಧಿಯ ಪ್ರತಿಶತವನ್ನ ಹೆಚ್ಚಿಸಿ ಹೇಳುತ್ತವೆ. ಹಾಗೆಲ್ಲ ಹೂಡಿಕೆ ಮಾಡುವ ಮುನ್ನ ಮಾಡಬೇಕಾದ ಮೊದಲ ಕೆಲಸ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಎನ್ನುವ ಲಾಭಂಶದ ಪ್ರತಿಶತ ಎಷ್ಟು ಎನ್ನುವುದನ್ನ ತಿಳಿದುಕೊಳ್ಳುವುದು. ಬ್ರೋಕರ್ ಹೇಳುವ ಲಾಭಂಶ ಅದಕ್ಕಿಂತ ಹೆಚ್ಚಿದ್ದರೆ ಅದು ಎಚ್ಚರಿಕೆಯ ಕರೆಗಂಟೆ..! ವಿಕ್ರಂ ಇನ್ವೆಸ್ಟ್ಮೆಂಟ್ ಎನ್ನುವ ಸಂಸ್ಥೆ ಲೋಹದ ಮೇಲಿನ ಹೂಡಿಕೆಯಲ್ಲಿ ಹತ್ತಿರ ಹತ್ತಿರ 60 ಪ್ರತಿಶತ ಲಾಭಂಶ ಸಿಗುತ್ತದೆ ಎಂದು ಹೇಳಿ ಕೋಟ್ಯಂತರ ರೂಪಾಯಿ ಹೂಡಿಕೆದಾರರ ಹಣವನ್ನ ತಿಂದು ತೇಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಗಮನಿಸಿ ಅಷ್ಟೊಂದು ಹೆಚ್ಚಿನ ಮಟ್ಟದ ಲಾಭ ನಿಜವಾಗಿ ಬರುವುದಾದರೆ ಆ ಸಂಸ್ಥೆಯವರೇ ಅದರ ಲಾಭ ಪಡೆಯಬಹದುದಲ್ಲ? ಅವರೇಕೆ ಅದನ್ನ ನಿಮಗೆ ಕೊಡಲು ಬಯಸುತ್ತಾರೆ?.
ಇನ್ನು ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಅನ್ನುವುದು ಕೂಡ ಅಷ್ಟೇ ನಿಖರತೆಯಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದ ಹಾಗೆ. ಹೂಡಿಕೆದಾರನಿಗೆ ಹೂಡಿಕೆಯ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ ಹೋದರೆ ಏನಾಗಬಹುದು ಎನ್ನುವುದಕ್ಕೆ ಮಾರುಕಟ್ಟೆಯಲ್ಲಿ ನಾಯಿಕೊಡೆಯಂತೆ ಹೆಚ್ಚಿಕೊಂಡಿರುವ ಮ್ಯೂಚುಯಲ್ ಫಂಡ್ಗಳು ಮತ್ತು ಸಂಸ್ಥೆಗಳು ಸಾಕ್ಷಿ. ಮ್ಯೂಚುಯಲ್ ಫಂಡ್ ನಲ್ಲಿ ಹಲವು ಸಾವಿರ ವಿಧಗಳಿವೆ. ನಿಮ್ಮ ಹಣ ಎಲ್ಲಿ ಹೂಡಿಕೆಯಾಗುತ್ತಿದೆ? ಎನ್ನುವ ಅರಿವು ನಿಮಗಿದೆಯೇ?
ಷೇರು ಮಾರುಕಟ್ಟೆಯಲ್ಲಿ ಅಲ್ಪ ಸಮಯದ ಹೂಡಿಕೆ ಅಥವಾ ಅದೇ ದಿನ ಲಾಭ ತೆಗೆದುಕೊಂಡು ಹೊರಬರುವ ಕ್ರಿಯೆಗಳು ಹೂಡಿಕೆ ಎನ್ನಿಸಿಕೊಳ್ಳುವುದಿಲ್ಲ. ಅದು ಜೂಜಾಟ. ಧೀರ್ಘ ಕಾಲದ ಹೂಡಿಕೆಗಳು ಕೂಡ ಲಾಭ ತಂದುಕೊಡುತ್ತವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಒಂದು ಸಂಸ್ಥೆ ಅತ್ಯಂತ ಯಶಸ್ವಿ ಎನ್ನಿಸಿಕೊಳ್ಳಲು ಹಲವಾರು ಕಾರಣಗಳಿರುತ್ತವೆ. ಯಾವುದೇ ಒಂದು ಕಾರಣ ಅಂದುಕೊಂಡಂತೆ ಕಾರ್ಯ ನಿರ್ವಹಿಸದೆ ಹೋದರೂ ಹೂಡಿಕೆ ಹಣ ಕರಗಿಹೋಗಬಹುದು.
ವಸ್ತುಸ್ಥಿತಿ ಹೀಗಿರುವಾಗ ಮೂಲಭೂತ ಹೂಡಿಕೆಗಳಾದ ಮನೆ, ನಿಶ್ಚಿತ ಠೇವಣಿ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಚಿನ್ನ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸ್ಕೀಮ್ ಇತ್ಯಾದಿಗಳ ಮೇಲೆ ಹಣ ಹೂಡಿಕೆ ಮಾಡಿ ಇನ್ನೂ ಹೆಚ್ಚಿನ ಹಣವಿದ್ದರೆ ಅದು ಐದಾರು ವರ್ಷ ಅವಶ್ಯಕತೆಯಿಲ್ಲ ಎನ್ನುವ ಹಾಗಿದ್ದರೆ ಮತ್ತು ಆಕಸ್ಮಿಕವಾಗಿ ಆ ಹಣ ಕರಗಿಹೋದರೂ ಪರವಾಗಿಲ್ಲ ಎನ್ನುವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಿಕೆ ಮಾಡಬೇಕು. ಇಂದಿನ ಐಟಿ ನೌಕರರು ಮತ್ತಿತರ ಯುವಜನತೆ ಮನೆ ಸಾಲದಲ್ಲಿ ಇರುವುದು ಅಲ್ಲದೆ ಮ್ಯೂಚುಯಲ್ ಫಂಡ್, ಸಿಪ್ ಇತ್ಯಾದಿಗಳ ಕುಣಿಕೆಯಲ್ಲಿ ಯೋಚಿಸದೆ ಬೀಳುತ್ತಿದ್ದಾರೆ. ಇದರ ಜೊತೆಗೆ ಐಪಿಒ ಇವರನ್ನ ಬಹಳವಾಗಿ ಆಕರ್ಷಿಸುತ್ತಿದೆ. ಈ ವರ್ಷ ಅಂದರೆ 2021ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐಪಿಒಗಳ ಸಂಖ್ಯೆಯೂ ಬಹಳವಿದೆ.
ಐಪಿಒ ಎಂದರೇನು?
ಐಪಿಒ ಎಂದರೆ ಇನಿಷಿಯಲ್ ಪಬ್ಲಿಕ್ ಆಫರ್ ಎಂದರ್ಥ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಷೇರುಗಳನ್ನ ಕೊಂಡುಕೊಳ್ಳಲು ನೀಡುವ ಆಹ್ವಾನ ಪ್ರಕ್ರಿಯೆಗೆ ಐಪಿಒ ಎನ್ನುತ್ತಾರೆ.
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷಮ್ ಒಡ್ಡುವ ಹಲವಾರು ನಿಂಬಂಧನೆಗಳನ್ನ ಪಾಲಿಸಿದ ನಂತರ ಹೀಗೆ ಸಾಮಾನ್ಯ ಜನರಿಂದ ಮುಂದಿನ ವ್ಯಾಪಾರಕ್ಕೆ ಬೇಕಾಗುವ ಹಣವನ್ನ ಷೇರು ನೀಡುವ ಮೂಲಕ ಬಂಡವಾಳ ರೂಪದಲ್ಲಿ ಎತ್ತಬಹುದಾಗಿದೆ.
ಒಂದು ಖಾಸಗಿ ಸಂಸ್ಥೆಯನ್ನ ಸ್ಥಾಪಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಯನ್ನ ಒಂದು ಮಟ್ಟಕ್ಕೆ ತರಲು ಪ್ರಾರಂಭದಲ್ಲಿ ಹಣ ಹೂಡಿದ ವ್ಯಕ್ತಿಗಳು ತಮ್ಮ ಹಣವನ್ನ ವಾಪಸ್ಸು ಪಡೆದುಕೊಂಡು ಮುಂದಿನ ಹಂತದ ವ್ಯಾಪಾರಕ್ಕೆ ಬೇಕಾದ ಹಣವನ್ನ ಜನರಿಂದ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಇಲ್ಲಿನ ಷೇರುಗಳ ಮೌಲ್ಯವನ್ನ ಪ್ರಿಮಿಯಂ ನಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಂದರೆ ಷೇರಿನ ಮುಖಬೆಲೆಗಿಂತ ಹೆಚ್ಚಿನ ಬೆಲೆಯನ್ನ ಇಟ್ಟಿರುತ್ತಾರೆ. ಐಪಿಒ ಮೂಲಕ ಬಂಡವಾಳ ಸಂಗ್ರಹಣೆ ಮಾಡಿ ನಂತರ ಫೌಂಡರ್ ಮೆಂಬರ್ ಗಳು ತಮ್ಮ ಹಣವನ್ನ ತೆಗೆದು ಕೊಂಡು ಹೊರ ನಡೆದರೆ ಅದು ಉತ್ತಮ ಲಕ್ಷಣವಲ್ಲ.
ಇಂದಿನ ಸಮಯದಲ್ಲಿ ಐಪಿಒ ಮೇಲಿನ ಹೂಡಿಕೆ ಎಷ್ಟು ಸರಿ?
ಇವತ್ತಿನ ದಿನದಲ್ಲಿ ಬಹಳಷ್ಟು ಜನರಲ್ಲಿ ಪ್ರೈಮರಿ ಮಾರ್ಕೆಟ್ನಲ್ಲಿ ಕಡಿಮೆ ಅಪಾಯ ಎನ್ನುವ ಭಾವನೆಯಿದೆ ಅದು ತಪ್ಪು. ಸೆಕೆಂಡರಿ ಮಾರ್ಕೆಟ್ನಲ್ಲಿ ಇರುವಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಅಪಾಯ ಪ್ರೈಮರಿ ಮಾರುಕಟ್ಟೆಯಲ್ಲಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ನಿಮ್ಮ ಗಮನವಿರಲಿ.
ಕೊನೆ ಮಾತು: ಮೂಲಭೂತ ಹೂಡಿಕೆಗಳ ಜೊತೆಗೆ ಮೂಲಭೂತ ಖರ್ಚುಗಳದ್ದಾದ ಜೀವವಿಮೆ ಅಂದರೆ ಟರ್ಮ್ ಇನ್ಶೂರೆನ್ಸ್, ಆರೋಗ್ಯವಿಮೆ, ಎಮೆರ್ಜೆನ್ಸಿ ಫಂಡ್ ಇವುಗಳನ್ನ ಕೂಡ ಮಾಡಿರಬೇಕಾಗುತ್ತದೆ. ಇದೆಲ್ಲವನ್ನೂ ಮೀರಿದ ಹಣವನ್ನ ಮಾತ್ರ ಪ್ರೈಮರಿ ಅಥವಾ ಸೆಕೆಂಡರಿ ಯಾವುದಾದರೂ ಮಾರುಕಟ್ಟೆಯಲ್ಲಿ ತಜ್ಞರ ಸಹಾಯ ಮತ್ತು ಸ್ವ ಪರಿಶೀಲನೆ ನಡೆಸಿ ಹೂಡಿಕೆ ಮಾಡುವುದು ಸೂಕ್ತ. ಇಲ್ಲದಿದ್ದಲ್ಲಿ ಅದು ಜೂಜಾಟ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement