ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ - ನಾಡಾ ವ್ಯಾಪ್ತಿಗೆ ಬಿಸಿಸಿಐ; ಕೇಂದ್ರ ಕ್ರೀಡಾ ಕಾರ್ಯದರ್ಶಿ
ನವದೆಹಲಿ: ದೇಶದಲ್ಲಿ ಕ್ರೀಡಾಪಟುಗಳ ಉದ್ದೀಪನ ಮದ್ದು ಸೇವನೆ ಮೇಲೆ ನಿಗಾ ವಹಿಸಿರುವ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಒಳಪಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಮ್ಮತಿಸಿದೆ ಎಂದು ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಶುಕ್ರವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುವುದಾಗಿ ಬಿಸಿಸಿಐ ಲಿಖಿತ ಒಪ್ಪಿಗೆ ಸೂಚಿಸಿದ್ದು, ಉದ್ದೀಪನ ಮದ್ದು ಸೇವನಾ ಪರೀಕ್ಷೆಯ ಸಲಕರಣೆಗಳ ಗುಣಮಟ್ಟ, ರೋಗಶಾಸ್ತ್ರಜ್ಞರ ಆರ್ಹತೆ ಹಾಗೂ ರಕ್ತದ ಮಾದರಿ ಸಂಗ್ರಹದಂತಹ ಮೂರು ಅಂಶಗಳ ಕುರಿತು ಬಿಸಿಸಿಐ ತಮ್ಮ ಬಳಿ ಪ್ರಸ್ತಾಪಿಸಿದೆ ಎಂದು ವಿವರಿಸಿದ್ದಾರೆ.
ಏನು ಸೌಲಭ್ಯಗಳು ಬೇಕೊ ಅವುಗಳನ್ನು ಒದಗಿಸುವ ಭರವಸೆ ನೀಡಲಾಗಿದ್ದು, ಅವುಗಳಿಗೆ ಸೂಕ್ತ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ. ದೇಶದಲ್ಲಿ ಬಿಸಿಸಿಐನ ಕ್ರಿಕೆಟ್ ಆಟಗಾರರನ್ನು ಇತರ ಕ್ರೀಡಾಪಟುಗಳಂತೆ ಪರಿಗಣಿಸಲಾಗುವುದು. ಅವರನ್ನು ವಿಶೇಷವೆಂದು ಸರ್ಕಾರ ಪರಿಗಣಿಸುವುದಿಲ್ಲ ಎಂದು ಜುಲಾನಿಯಾ ಬಿಸಿಸಿಐ ಸಿಇಓ ರಾಹುಲ್ ಜೋಹ್ರಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಮೊದಲು ತನ್ನದು ಸ್ವಾಯತ್ತ ಸಂಸ್ಥೆ, ಹಣಕಾಸಿಗಾಗಿ ಸರ್ಕಾರವನ್ನು ಅವಲಂಬಿಸಿಲ್ಲ ಎಂದು ಹೇಳಿಕೊಂಡು ಬಿಸಿಸಿಐ ನಾಡಾದೊಂದಿಗೆ ಸಹಿಹಾಕಲು ನಿರಾಕರಿಸಿತ್ತು. ಬಿಸಿಸಿಐನ ಉದ್ದೀಪನ ಮದ್ದುಸೇವನಾ ನಿಗ್ರಹ ಯೋಜನೆಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಟೀಕಿಸಿತ್ತು. ವಾಡಾ ನಿಯಮಾವಳಿ ಸಂಹಿತೆ 5.2ರಂತೆ ಕ್ರೀಡಾಪಟುಗಳ ಉದ್ದೀಪನಾ ಮದ್ದು ಪರೀಕ್ಷೆ ನಡೆಸಲು ದೇಶದಲ್ಲಿ ವಾಡಾ ಅಧಿಕಾರಯುಕ್ತ ಸಂಸ್ಥೆಯಾಗಿದೆ ಎಂದು ಹೇಳಿದೆ.
ಹಲವು ವರ್ಷಗಳಿಂದ ಬಿಸಿಸಿಐ, ವಾಡಾ ಗೆ ಸಹಿಹಾಕದ ಕಾರಣ, ತೀವ್ರ ಅಸಮಧಾನ ವ್ಯಕ್ತಪಡಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ ಉದ್ದೀಪನ ಮದ್ದು ಸೇವನಾ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಕ್ರಿಕೆಟ್ ನಿಯಂತ್ರಣ ಸಂಸ್ಥೆಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಕಳೆದ ಮಾರ್ಚ್ ತಿಂಗಳಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಶಶಾಂಕ್ ಮನೋಹರ್ ಅವರೊಂದಿಗೆ ಬಿಸಿಸಿಐ ಆಡಳಿತ ಸಮಿತಿಯ ಪದಾಧಿಕಾರಿಗಳು ಸಭೆ ನಡೆಸಿದ ನಂತರ ಆರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ನಾಡಾದೊಂದಿಗೆ ಕಾರ್ಯನಿರ್ಹಿಸಲು ಸಮ್ಮತಿಸಿತ್ತು.