ಶನಿವಾರ ನಿಧನರಾದ ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಕೇವಲ ರಾಜಕೀಯ ನಾಯಕರಿಗಷ್ಟೇ ಅಲ್ಲದೆ ಕ್ರೀಡಾತಾರೆಯರಿಗೆ ಸಹ ಅಚ್ಚುಮೆಚ್ಚಿನವರಾಗಿದ್ದರು ಎನ್ನಲು ಈ ಘಟನೆ ಒಂದು ನಿದರ್ಶನ!
ಜೇಟ್ಲಿ ಕ್ರಿಕೆಟ್ ಪ್ರೇಮಿಯಾಗಿದ್ದರು. ದೇಶದ ಕ್ರೀಡಾಕ್ಷೇತ್ರದ ಸುಧಾರಣೆಗಾಗಿ ಕಲಸ ಮಾಡಿದ್ದರು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಉಪಾಧ್ಯಕ್ಷ ಮತ್ತು ದೆಹಲಿ ಜಿಲ್ಲಾ ಕ್ರಿಕೆಟ್ ಸಂಘದ (ಡಿಡಿಸಿಎ) ಅಧ್ಯಕ್ಷರಾಗಿದ್ದ ಅರುಣ್ ಜೇಟ್ಲಿಯವರ ನಿಧನದ ನಂತರ ಕ್ರಿಕೆಟ್ ಲೋಕದೊಡನೆ ಅವರ ಸಂಬಂಧ ಕುರಿತು ವಿವಿಧ ಕ್ರಿಕೆಟಿಗರು ಮಾತನಾಡಿದ್ದಾರೆ. ಅದರಲ್ಲಿಯೂ ಭಾರತೀಯರ ಪಾಲಿನ ಪ್ರೀತಿಯ ವೀರೂ ಪಾಲಿಗೆ ಜೇಟ್ಲಿ ಮಹತ್ವದ ನಾಯಕ. ವೀರೇಂದ್ರ ಸೆಹ್ವಾಗ್ ವಿವಾಹ ನಡೆದದ್ದು ಜೇಟ್ಲಿಯವರ ನಿವಾಸದಲ್ಲಿ ಎನ್ನುವುದು ಅಚ್ಚರಿಯಾದರೂ ಸತ್ಯ!
ಭಾರತಕ್ಕಾಗಿ ಆಡಲು ಜೇಟ್ಲಿ ತನಗೆ ಮತ್ತು ದೆಹಲಿಯ ಇತರ ಅನೇಕ ಕ್ರಿಕೆಟಿಗರಿಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ವಿವರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿರುವ ೆಹ್ವಾಗ್ ತಾವು ಆರತಿಯೊಡನೆ ವಿವಾಹವಾಗಲು ಸಿದ್ದವಾದಾಗ ಜೇಟ್ಲಿ ಅವರ ನಿವಾಸದಲ್ಲೇ ಮದುವೆಗೆ ಏರ್ಪಾಡು ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ಅವರ ವಿವಾಹವು 2004 ರಲ್ಲಿ ಅರುಣ್ ಜೇಟ್ಲಿಗೆ ನೀಡಿದ್ದ ಅಧಿಕೃತ ಬಂಗಲೆಯಲ್ಲಿ ನಡೆದಿತ್ತು. ಜೇಟ್ಲಿ ಆ ಸಮಯಕ್ಕೆ ತಾವು ವೈಯುಕ್ತಿಕವಾಗಿ ಬಳಸದ ದೆಹಲಿಯ 9 ಅಶೋಕ್ ರಸ್ತೆಯಲ್ಲಿನ ಬಂಗಲೆಯಲ್ಲಿ ಸೆಹ್ವಾಗ್ ವಿವಾಹ ನಡೆಯಬೇಕೆಂದು ಜೇಟ್ಲಿ ಸೆಹ್ವಾಗ್ ಅವರ ತಂದೆಗೆ ಸೂಚಿಸಿದ್ದರು ಅಲ್ಲದೆ ಜೇಟ್ಲಿ ಸೆಹ್ವಾಗ್ ಅವರ ಮದುವೆಗೆ ತನ್ನ ಬಂಗಲೆ ಅಲಂಕರಿಸಿದ್ದರು.ಅತಿಥಿಗಳಿಗಾಗಿ ವ್ಯವಸ್ಥೆ ಮಾಡಿದರು. ಆದರೆ, ಬೆಂಗಳೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ಕಾರಣ ಅವರೇ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ಸೆಹ್ವಾಗ್ ಮದುವೆಗೆ ಕ್ರೀಡೆ, ಬಾಲಿವುಡ್ ಮತ್ತು ರಾಜಕೀಯ ಕ್ಷೇತ್ರದ ಅನೇಕ ಗಣ್ಯರು, ಸ್ನೇಹಿತರು ಹಾಜರಾಗಿದ್ದರು.
Advertisement