ನವದೀಪ್ ಸೈನಿ, ದೀಪಕ್ ಚಾಹರ್, ಖಲೀಲ್ ಅಹ್ಮದ್ ಗೂ ಸ್ಥಾನ, ತಂಡಕ್ಕೆ ಪಾಂಡ್ಯಾ ಬ್ರದರ್ಸ್ ಕಮ್ ಬ್ಯಾಕ್
ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಿಂದ ಜಸ್ ಪ್ರೀತ್ ಬುಮ್ರಾ ಅವರನ್ನು ಕೈ ಬಿಟ್ಟು ಹಾರ್ದಿಕ್ ಪಾಂಡ್ಯಾಗೆ ಸ್ಥಾನ ನೀಡಲಾಗಿದೆ. ಅಂತೆಯೇ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿರುವ ವಿಶ್ರಾಂತಿ ಮುಂದುವರೆಸಲಾಗಿದೆ.
ಗುರುವಾರ ಬಿಸಿಸಿಐನ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಉದಯೋನ್ಮುಖ ಆಟಗಾರರಾದ ನವದೀಪ್ ಸೈನಿ, ದೀಪಕ್ ಚಾಹರ್, ಖಲೀಲ್ ಅಹ್ಮದ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ ತುಂಬಾ ದಿನಗಳ ಬಳಿಕ ಪಾಂಡ್ಯಾ ಬ್ರದರ್ಸ್ (ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯಾ) ಕಮ್ ಬ್ಯಾಕ್ ಮಾಡಿದ್ದಾರೆ.
ಇನ್ನು 2 ತಿಂಗಳ ವಿಶ್ರಾಂತಿಯಲ್ಲಿರುವ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಲಾಗಿದ್ದ ವಿಶ್ರಾಂತಿಯನ್ನು ಮುಂದುವರೆಸಲಾಗಿದ್ದು, ಈ ಹಿಂದೆ ಸೈನಿಕರೊಂದಿಗೆ ಸೇವೆ ಸಲ್ಲಿಸಿದ್ದ ಧೋನಿ ಇದೀಗ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಗೆ ತಮ್ಮ ಲಭ್ಯತೆ ಕುರಿತು ಧೋನಿ ಸ್ಪಷ್ಟಪಡಿಸದ ಹಿನ್ನಲೆಯಲ್ಲಿ ಧೋನಿ ಅವರನ್ನು ತಂಡಕ್ಕೆ ಪರಿಗಣಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದೇ ಸೆಪ್ಟೆಂಬರ್ 15ರಿಂದ ಆಫ್ರಿಕಾ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 15ರಂದು ಧರ್ಮಶಾಲಾದಲ್ಲಿ ನಡೆಯಲ್ಲಿದ್ದು, ಸೆಪ್ಟೆಂಬರ್ 18 ಮತ್ತು 22ರಂದು ಉಳಿದ 2 ಪಂದ್ಯಗಳು ನಡೆಯಲಿವೆ.
ತಂಡ ಇಂತಿದೆ.
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕ್ರುಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಖಲೀಲ್ ಅಹ್ಮದ್, ದೀಪಕ್ ಚಹರ್ ಮತ್ತು ನವದೀಪ್ ಸೈನಿ.
Advertisement