ಮುಂಬೈ: ನಿನ್ನೆಯಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಕರ್ನಾಟಕದ ಮುಡಿಗೇರಿಸಿ ಸಂಭ್ರಮಿಸಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಇಂದು ತಮಿಳು ನಟಿ ಆಶ್ರಿತಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬದುಕಿನ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಭಾನುವಾರ ರಾತ್ರಿ ಸೂರತ್ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಯಕ ಮನೀಶ್ ಪಾಂಡೆ ತಮಿಳುನಾಡು ವಿರುದ್ಧ 60 ರನ್ ಗಳಿಸುವ ಮೂಲಕ ಕರ್ನಾಟಕದ ಗೆಲುವಿಗೆ ಕಾರಣವಾಗಿದ್ದರು. ಪಂದ್ಯ ಗೆದ್ದ ಬಳಿಕ ಬಳಿಕ ಮಾತನಾಡಿದ್ದ ಮನೀಷ್, ‘ನಾನು ವಿಂಡೀಸ್ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಆದರೆ, ಅದಕ್ಕೂ ಮೊದಲು ನನಗೆ ತುಂಬಾ ಮುಖ್ಯವಾದ ಇನ್ನೊಂದು ಸರಣಿ ಇದೆ. ನಾನು ನಾಳೆ ಮದುವೆಯಾಗುತ್ತಿದ್ದೇನೆ’ ಎಂದು ಸಂತಸ ಹಂಚಿಕೊಂಡಿದ್ದರು.
ಮನೀಶ್ ಪಾಂಡೆ ಅವರು ಇಂದು ಮುಂಬೈನಲ್ಲಿ ನಟಿ ಆಶ್ರಿತಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭ ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ. ಮದುವೆಯಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ. ಈ ಹಿಂದೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್ಗಳಿಗೆ ತೆರೆ ಎಳೆದಿದ್ದಾರೆ.
2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶ್ರಿತಾ ‘ಇಂದ್ರಜಿತ್’, ‘ಒರು ಕಣ್ಣಿಯುನ್ ಮೂನು ಕಲಾವಾನಿಕಲಂ’, ‘ಉದಯಂ ಎನ್.ಎಚ್4’ ಸೇರಿದಂತೆ ಹಲವು ಚಿತಗಳಲ್ಲಿ ನಟಿಸಿದ್ದಾರೆ. ಬ್ಯೂಟಿ ಕಾಂಪಿಟೇಶನ್ ಭಾಗವಹಿಸಿದ ಆಶ್ರಿತಾ ಜಾಹೀರಾತುಗಳಲ್ಲಿಯೂ ಅಭಿನಯಿಸಿದ್ದಾರೆ.
Advertisement