ನವದೆಹಲಿ: ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುವಲ್ಲಿ ವಿಫಲರಾದ ಶಿಖರ್ ಧವನ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ.
ಭಾರತ ತಂಡ ಮೂರು ಏಕದಿನ ಪಂದ್ಯಗಳಲ್ಲಿ ಪ್ರವಾಸಿ ವಿಂಡೀಸ್ ವಿರುದ್ಧ ಸೆಣಸಲಿದೆ. ಮೊದಲನೇ ಪಂದ್ಯ ಡಿಸೆಂಬರ್ 15 ರಂದು ಚೆನ್ನೈ, ಎರಡನೇ ಪಂದ್ಯ ಡಿ.18 ರಂದು ವಿಶಾಖಪಟ್ಟಣಂ ಹಾಗೂ ಕೊನೆಯ ಪಂದ್ಯ ಡಿ.22 ರಂದು ಕಟಕ್ನಲ್ಲಿ ಜರುಗಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದ ವೇಳೆ ಎಡಗೈ ಆರಂಭಿಕ ಶಿಖರ್ ಧವನ್ ಅವರ ಮೊಣಕಾಲಿಗೆ ಗಾಯವಾಗಿತ್ತು. ಹಾಗಾಗಿ, ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ಅವರ ಸ್ಥಾನಕ್ಕೆ ಸಂಜು ಸ್ಯಾಮ್ಸನ್ಗೆ ಅವಕಾಶ ಕಲ್ಪಿಸಲಾಗಿತ್ತು. ಏಕದಿನ ಸರಣಿ ಹೊತ್ತಿಗೂ ಧವನ್ ಚೇತರಿಸಿಕೊಳ್ಳುವುದು ಅನುಮಾನವಾಗಿದೆ. ಹಾಗಾಗಿ, ಅವರ ಸ್ಥಾನಕ್ಕೆ ಟೆಸ್ಟ್ ಆರಂಭಿಕ ಅಗರ್ವಾಲ್ಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
Advertisement