ನವದೆಹಲಿ: ಡಿಡಿಸಿಎ ಆಯ್ಕೆ ಸಮಿತಿ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಅಮಿತ್ ಭಂಡಾರಿ ಅವರ ಅಪರಿಚಿತ ವ್ಯಕ್ತಿಗಳ ಗುಂಪು ಸೋಮವಾರ ಹಲ್ಲೆ ನಡೆಸಿದೆ.
ಇಂದು ದೆಹಲಿ ಸೇಂಟ್ ಸ್ಟೀಫನ್ಸ್ ಕ್ರೀಡಾಂಗಣದಲ್ಲಿ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಗಾಗಿ 23 ವರ್ಷದೊಳಗಿನ ಕಿರಿಯರ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.
ಆಯ್ಕೆ ಪ್ರಕ್ರಿಯೆ ನಂತರ ತಂಡಕ್ಕೆ ಆಯ್ಕೆಯಾಗದ ಕೆಲ ಕ್ರಿಕೆಟಿಗರ ಗುಂಪು ಭಂಡಾರಿ ಮೇಲೆ ಹಲ್ಲೆ ನಡೆಸಿದ್ದು, ಅವರ ತಲೆ ಹಾಗೂ ಕೀವಿಗೆ ಗಾಯವಾಗಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿರಸ್ಕೃತ ಕ್ರಿಕೆಟಿಗನೊಬ್ಬ ಭಂಡಾರಿ ಅವರ ಬಳಿ ಬಂದು ತಾನು ಏಕ ಆಯ್ಕೆಯಾಗಲಿಲ್ಲ ಎಂದು ಪ್ರಶ್ನಿಸಿದನಂತೆ. ನಂತರ ಆತನು ಮೊದಲು ತನ್ನ ಕೈಗಳಿಂದ ಭಂಡಾರಿ ಅವರನ್ನು ಹೊಡೆಯಲಾರಂಭಿಸಿದ, ನಂತರ ಕೋಲಿನಿಂದ ಹೊಡೆದ ಎಂದು ಪೊಲೀಸ್ ಉಪ ಆಯುಕ್ತ ನೂಪುರ್ ಪ್ರಸಾದ್ ಅವರು ತಿಳಿಸಿದ್ದಾರೆ.
ಭಂಡಾರಿ ಅವರಿಂದ ಹೇಳಿಕೆ ಪಡೆಯುವ ಮೊದಲು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಏನು ಹೇಳುತ್ತಾರೋ ನೋಡಬೇಕಿದೆ. ಭಂಡಾರಿ ಅವರಿಂದ ಹೇಳಿಕೆ ಪಡೆದ ನಂತರ ನಾವು ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ನೂಪುರ್ ಪ್ರಸಾದ್ ಹೇಳಿದ್ದಾರೆ.