ನವದೆಹಲಿ: 2017ರಲ್ಲಿ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾಗೆ ಕೋಚ್ ಆಗಿ ಆಯ್ಕೆಯಾಗಿದ್ದ ರವಿಶಾಸ್ತ್ರಿ ಮುಂದಾಳತ್ವದಲ್ಲಿ ಟೀಂ ಇಂಡಿಯಾ 2019ರ ವಿಶ್ವಕಪ್ ನಲ್ಲಿ ಸೆಣೆಸಿದ್ದು ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿತ್ತು. ಇದೀಗ ಬಿಸಿಸಿಐ ತಂಡದ ಎಲ್ಲಾ ಸಿಬ್ಬಂದಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಮುಂದಿನ ತಿಂಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸರಣಿ ಆಡಲಿದ್ದು ಈ ಸರಣಿ ಬಳಿಕ ಪ್ರಧಾನ ಕೋಚ್ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಸಿಬ್ಬಂದಿಯ ಗುತ್ತಿಗೆ ರದ್ದಾಗಲಿದ್ದು ಈ ಹಿನ್ನೆಲೆಯಲ್ಲಿ ಬಿಸಿಸಿಐ ಎಲ್ಲರಿಗೂ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ವಿಶ್ವಕಪ್ ಹಿನ್ನೆಲೆಯಲ್ಲಿ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಗುತ್ತಿಗೆಯನ್ನು 45 ದಿನಕ್ಕೆ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರವರೆಗೂ ಅವರ ಗುತ್ತಿಗೆ ಮುಂದುವರೆಯಲಿದೆ.
ವೆಸ್ಟ್ ಇಂಡೀಸ್ ಪ್ರವಾಸ ಬಳಿಕ ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆರಂಭಗೊಳ್ಳಲಿದೆ ಇದಕ್ಕೂ ಮುನ್ನ ಹೊಸದಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ.