ಧವನ್ ರಂತಹ ಅತಿಮುಖ್ಯ ಆಟಗಾರನನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ: ಸಂಜಯ್ ಬಂಗಾರ್

ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಮತ್ತೆ ತಂಡದಲ್ಲಿ ಕಣಕ್ಕಿಳಿಯುತ್ತಾರೆಯೇ... ಇಂತಹುದೊಂದು ಪ್ರಶ್ನೆಯನ್ನು ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಹುಟ್ಟು ಹಾಕಿದ್ದಾರೆ.
ಸಂಜಯ್ ಬಂಗಾರ್ ಮತ್ತು ಶಿಖರ್ ಧವನ್
ಸಂಜಯ್ ಬಂಗಾರ್ ಮತ್ತು ಶಿಖರ್ ಧವನ್
ಲಂಡನ್: ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಮತ್ತೆ ತಂಡದಲ್ಲಿ ಕಣಕ್ಕಿಳಿಯುತ್ತಾರೆಯೇ... ಇಂತಹುದೊಂದು ಪ್ರಶ್ನೆಯನ್ನು ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಹುಟ್ಟು ಹಾಕಿದ್ದಾರೆ.
ಹೌದು.. ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಾಲ್ಟರ್ ನೈಲ್ ಎಸೆದ ಚೆಂಡು ಧವನ್ ಎಡಗೈ ಹೆಬ್ಬೆರಳಿಗೆ ತಗುಲಿ ಮೂಳೆಗೆ ಏಟಾಗಿತ್ತು. ಆ ಬಳಿಕ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಧವನ್ ವಿಶ್ವಕಪ್ ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮಾರನೆಯೇ ದಿನವೇ ಬಿಸಿಸಿಐ ಗಾಯಗೊಂಡರೂ ಧವನ್ ತಂಡ ತೊರೆಯುವಂತಿಲ್ಲ ಎಂದು ಹೇಳಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಇದೇ ರೀತಿಯ ಅಚ್ಚರಿ ಹೇಳಿಕೆ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ನೀಡಿದ್ದು, ಧವನ್ ರಂತಹ ಅತಿಮುಖ್ಯ ಆಟಗಾರನನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳುವ ಮೂಲಕ ಧವನ್ ಟೀಂ ಇಂಡಿಯಾದ ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರೆ ಎಂಬ ಚರ್ಚೆ ಹುಟ್ಟು ಹಾಕಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಬಂಗಾರ್, ಧವನ್ ರಂತಹ ಪ್ರಮುಖ ಆಟಗಾರರನ್ನು ತಂಡದಿಂದ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅವರ ಕೈ ಬೆರಳಿಗೆ ಆಗಿರುವ ಗಾಯದ ಕುರಿತು ನಮಗೆ ಅರಿವಿದೆ. ಖಂಡಿತಾ ಧವನ್ ಮುಂದಿನ ಮೂರು ಅಥವಾ ನಾಲ್ಕು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಒಂದು ವೇಳೆ ಈ ಅವಧಿಯೊಳಗೆ ಅವರು ಚೇತರಿಸಿಕೊಂಡರೆ ತಂಡದ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಕಳೆದ ಎರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಕೆಎಲ್ ರಾಹುಲ್ ಮುಂದಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಬಂಗಾರ್ ಹೇಳಿದರು. ನಾಲ್ಕನೇ ಕ್ರಮಾಂಕದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಲ್ಕನೇ ಕ್ರಮಾಂಕದಲ್ಲಿ ಆಡಲು ತಂಡದಲ್ಲಿ ಸಾಕಷ್ಟು ಆಟಗಾರರಿದ್ದಾರೆ. ಆದರೆ ಆಯಾ ಪರಿಸ್ಥಿತಿಗೆ ಅನುಗುಣವಾಗಿ ನಾಲ್ಕನೇ ಕ್ರಮಾಂಕದ ಆಯ್ಕೆ ಮಾಡಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಬಹುಶಃ ಮ್ಯಾಂಚೆಸ್ಟರ್ ನಲ್ಲಿ ರಿಷಬ್ ಪಂತ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಬಂಗಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com