ಮ್ಯಾಂಚೆಸ್ಟರ್ : ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮುಂದಿನ ಎರಡು ಮೂರು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.
ಭಾರತ- ಪಾಕಿಸ್ತಾನ ನಡುವಣ ನಿನ್ನೆ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ವಿಷಯವನ್ನು ಸ್ಪಷ್ಪಪಡಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎರಡನೇ ಓವರ್ ಮಾಡುತ್ತಿದ್ದ ಭುವನೇಶ್ವರ್ ಕುಮಾರ್ , ಸ್ನಾಯು ಸೆಳೆತದ ಕಾರಣಕ್ಕಾಗಿ ಅರ್ಧದಲ್ಲಿಯೇ ಮೈದಾನದಿಂದ ನಿರ್ಗಮಿಸಿದರು. ನಂತರ ಅವರ ಓವರ್ ನ್ನು ವಿಜಯ್ ಶಂಕರ್ ಪೂರ್ಣಗೊಳಿಸಿದರು. ಮುಂದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಮೊಹಮ್ಮದ್ ಶಮಿ ಆಡಲಿದ್ದಾರೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಮುಂದಿನ ಎರಡು ಅಥವಾ ಮೂರು ಪಂದ್ಯಗಳಿಂದ ಭುವನೇಶ್ವರ್ ಕುಮಾರ್ ದೂರ ಉಳಿಯಲಿದ್ದಾರೆ. ಆದರೆ, ಈ ಟೂರ್ನಿಯಲ್ಲಿ ಅವರು ಮತ್ತೆ ಟೀಂ ಇಂಡಿಯಾ ಸೇರಬೇಕಾಗಿದೆ. ನಮ್ಮಗೆ ಅವರು ಅತಿ ಪ್ರಮುಖರಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಜೂನ್ 22ರಂದು ಅಪ್ಘಾನಿಸ್ತಾನ, ಜೂನ್ 27 ವೆಸ್ಟ್ ಇಂಡೀಸ್ ಹಾಗೂ ಜೂನ್ 30 ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ.
ಬೆರಳಿನ ಗಾಯದ ಸಮಸ್ಯೆಯಿಂದಾಗಿ ಶಿಖರ್ ಧವನ್ ಈಗಾಗಲೇ ಕೆಲ ಪಂದ್ಯಗಳಿಂದ ದೂರ ಉಳಿದಿದ್ದು, ಇದೀಗ ಭುವನೇಶ್ವರ್ ಕುಮಾರ್ ಕೂಡಾ ಮುಂದಿನ ಕೆಲ ಪಂದ್ಯಗಳಿಂದ ದೂರ ಉಳಿಯಬೇಕಾಗಿದೆ. ಆದರೆ, ಅವರ ಸ್ಥಾನವನ್ನು ತುಂಬುವ ಆಟಗಾರರು ಟೀಂ ಇಂಡಿಯಾದಲ್ಲಿ ಇದ್ದಾರೆ ಎಂಬುದು ಸಮಾಧಾನಕಾರ ಸಂಗತಿಯಾಗಿದೆ.