ಯಂಗ್ ರಿಷಬ್ ಪಂತ್ ಬದಲಿಗೆ, ದಿನೇಶ್ ಕಾರ್ತಿಕ್ ಗೆ ಅವಕಾಶ ಕೊಟ್ಟಿದ್ದೇಕೆ..? ನಾಯಕ ಕೊಹ್ಲಿ ಸ್ಪಷ್ಟನೆ ಇಲ್ಲಿದೆ..

ಉದಯೋನ್ಮಖ ಆಟಗಾರ ಮತ್ತು ಫಾರ್ಮ್ ನಲ್ಲಿದ್ದ ರಿಷಬ್ ಪಂತ್ ಬದಲಿಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಉದಯೋನ್ಮಖ ಆಟಗಾರ ಮತ್ತು ಫಾರ್ಮ್ ನಲ್ಲಿದ್ದ ರಿಷಬ್ ಪಂತ್ ಬದಲಿಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 15 ದಿನಗಳಷ್ಟೇ ಬಾಕಿ ಇದ್ದು, ಈಗಾಗಲೇ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಲು ಸಜ್ಜಾಗಿ ನಿಂತಿದೆ. ಏತನ್ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ, ಯಂಗ್ ಅಂಡ್ ಎನರ್ಜಿಟಿಕ್ ಆಟಗಾರ ರಿಷಬ್ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ ರನ್ನು ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಕೊಹ್ಲಿ ಅಭಿಪ್ರಾಯದಂತೆ ರಿಷಬ್ ಪಂತ್ ಬದಲಿಗೆ ಕಾರ್ತಿಕ್ ರನ್ನು ಆಯ್ಕೆ ಮಾಡಲು ಕಾರ್ತಿಕ್ ಅನುಭವವೇ ಕಾರಣವಂತೆ. ಹೌದು.. ದಿನೇಶ್ ಕಾರ್ತಿಕ್ ಅನುಭವ ಮತ್ತು ಒತ್ತಡವನ್ನು ನಿಭಾಯಿಸಿಕೊಂಡು ಬ್ಯಾಟ್ ಬೀಸುವ ಚಾಕಚಕ್ಯತೆಯೇ ಅವರನ್ನು ತಂಡಕ್ಕೆ ಅಯ್ಕೆ ಮಾಡುವಂತೆ ಮಾಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
'ವಿಶ್ವಕಪ್ ತಂಡದ ಆಯ್ಕೆ ವೇಳೆ ಭಾರತ ತಂಡದ ವಿಕೆಟ್ ಕೀಪಿಂಗ್ ವಿಭಾಗಕ್ಕೆ ಮಹೇಂದ್ರ ಸಿಂಗ್ ಧೋನಿ ನಮ್ಮ ಮೊದಲ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ 2ನೇ ವಿಕೆಟ್ ಕೀಪರ್ ಆಯ್ಕೆ ವಿಚಾರ ಬಂದಾಗ ನಮಗೆ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ಗೊಂದಲ ಉಂಟಾಗಿತ್ತು. ಈ ವೇಳೆ ಆಯ್ಕೆಗಾರರು ಕಾರ್ತಿಕ್ ರನ್ನು ಆಯ್ಕೆ ಮಾಡಿದ್ದಾರೆ. ಬಹುಶಃ ದಿನೇಶ್ ಕಾರ್ತಿಕ್ ರ ಅನುಭವ ಮತ್ತು ಯಾವುದೇ ರೀತಿಯ ಒತ್ತಡವನ್ನು ನಿಭಾಯಿಸಿಕೊಂಡು ಆಡುವ ಆವರ ಕೌಶಲ್ಯತೆಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಮಾಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಅಂತೆಯೇ ಮೇ 23ರವರೆಗೂ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶವಿದೆ. ಟೂರ್ನಿ ವೇಳೆ ದುರಾದೃಷ್ಟವಶಾತ್ ಧೋನಿ ಗಾಯಗೊಂಡರೆ ಆ ಜಾಗವನ್ನು ತುಂಬಲು ಕಷ್ಟ ಸಾಧ್ಯ. ಇದೇ ಕಾರಣಕ್ಕೆ ದಿನೇಶ್ ಕಾರ್ತಿಕ್ ರನ್ನು ಅವರ ಅನುವಭದ ಆಧಾರದ ಮೇಲೆ 2ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ವಿಕೆಟ್ ಹಿಂದೆ ಖಂಡಿತಾ ಕಾರ್ತಿಕ್ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಬಲ್ಲರು. ಅಂತೆಯೇ ಓರ್ವ ಫಿನಿಷರ್ ಆಗಿಯೂ ಅತ್ಯುತ್ತಮ ನಿರ್ವಹಣೆ ತೋರಬಲ್ಲರು ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಬೌಲಿಂಗ್ ವಿಭಾಗದ ಕುರಿತು ಮಾತನಾಡಿದ ಕೊಹ್ಲಿ, ನಾವು ಈಗ ಪ್ರಬಲ ಬೌಲಿಂಗ್ ಅಸ್ತ್ರಗಳನ್ನು ಹೊಂದಿದ್ದೇವೆ. ಡೆತ್ ಓವರ್ ಗಳಲ್ಲಿ ಎದುರಾಳಿಗಳ ದೃತಿಗೆಡಿಸಬಲ್ಲ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ ಪ್ರೀತ್ ಬುಮ್ರಾ ತಂಡದಲ್ಲಿದ್ದು, ಅವರಿಗೆ ಮತ್ತೋರ್ವ ಸ್ಪೆಷಲಿಸ್ಟ್ ಮಹಮದ್ ಶಮಿ ಸಾಥ್ ನೀಡಲಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಸಾಕಷ್ಟು ಸರಣಿಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ ಆಡಿದ್ದು, ಅಲ್ಲಿನ ಪಿಚ್ ಗಳ ಮರ್ಮ ಭುವಿಗೆ ತಿಳಿದಿದೆ. ಹೀಗಾಗಿ ಇಂಗ್ಲೆಂಡ್ ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಸೌಥ್ಯಾಂಪ್ಟನ್ ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com