ಮುಂಬೈ: ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಬುಧವಾರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ಮುಂದಿನ 11 ತಿಂಗಳವರೆಗೆ ಸೌರವ್ ಗಂಗೂಲಿಯವರಿಗೆ ವಹಿಸುವುದೆಂದು ಇತ್ತೀಚಿನ ಬಿಸಿಸಿಐ ಸಾಮಾನ್ಯ ಮಂಡಳಿ ಸಭೆಯಲ್ಲಿ ನೀಡಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಆಳ್ವಿಕೆ ಇಂದಿಗೆ ಅಂತ್ಯವಾಗಿದೆ. ಈ ಮೂಲಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂದು ಕಳೆದ ವಾರದ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ಗಂಗೂಲಿಯವರ ಆಳ್ವಿಕೆ ಸಂದರ್ಭದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಮತ್ತು ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಅವರ ಸಹಾಯ ಪಡೆದುಕೊಂಡು ಆಳ್ವಿಕೆ ನಡೆಸಲಿದ್ದು, ಅವರ ಮಕ್ಕಳು ಇದೀಗ ಬಿಸಿಸಿಐ ಆಡಳಿತ ವಿಭಾಗದ ಭಾಗವಾಗಿದ್ದಾರೆ.
ವಿಜಿಯನಗರದ ಮಹಾರಾಜ ನಂತರ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಬಿಸಿಸಿಐ ಅಧ್ಯಕ್ಷರಾಗಿರುವವರಲ್ಲಿ ಸೌರವ್ ಗಂಗೂಲಿ ಎರಡನೆಯವರು.ಸೌರವ್ ಗಂಗೂಲಿಯವರ ಅಧಿಕಾರಾವಧಿ ಮುಂದಿನ ವರ್ಷ ಸೆಪ್ಟೆಂಬರ್ ವರೆಗೆ ಮಾತ್ರ ಇರುತ್ತದೆ. ಏಕೆಂದರೆ ಅವರು ಈಗಾಗಲೇ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರು ಕೂಡ ಆಗಿದ್ದಾರೆ. ಬಿಸಿಸಿಐ ನಿಯಮ ಪ್ರಕಾರ ಅವರು ಕೂಲಿಂಗ್ ಆಫ್ ಪಿರೆಡ್ ನಿಂದಾಗಿ ನಂತರ ಬಿಸಿಸಿಐ ಹುದ್ದೆಗೆ ರಾಜೀನಾಮೆ ನೀಡಲೇ ಬೇಕು.
ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಇಂದಿನ ಕಿರಿಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರ ಕಿರಿಯ ಸೋದರ ಅರುಣ್ ಧುಮಾಲ್ ಖಜಾಂಚಿ ಮತ್ತು ಕೇರಳದ ಜಯೇಶ್ ಜಾರ್ಜ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿರುತ್ತಾರೆ.
ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಈ ಬಾರಿ ಚುನಾವಣೆ ನಡೆಯಲಿಲ್ಲ.
Advertisement