ಇಸ್ಲಾಮಾಬಾದ್: ಶ್ರೀಲಂಕಾದ ಹಿರಿಯ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳದಿರುವ ನಿರ್ಧಾರದ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದ ಪಾಕ್ ಸಚಿವನ ಬಳಿಕ ಇದೀಗ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸಹ ಭಾರತದ ವಿರುದ್ಧ ಕಿಡಿಕಾರಿದ್ದಾರೆ.
ಆಫ್ರಿದಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಶ್ರೀಲಂಕಾ ಆಟಗಾರರು ಪಾಕ್ ಪ್ರವಾಸ ಕೈಗೊಳ್ಳದಿರಲು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಕಾರಣ ಎಂದು ಹೇಳಿದ್ದಾರೆ.
ಶ್ರೀಲಂಕಾ ಆಟಗಾರರನ್ನು ಪಾಕಿಸ್ತಾನದ ಪಿಎಸ್ಎಲ್ ನಲ್ಲಿ ಭಾಗವಹಿಸುವಂತೆ ನಾನು ಕೇಳಿದ್ದೆ ಆದರೆ ಅವರು ಹೇಳುವ ಪ್ರಕಾರ ಐಪಿಎಲ್ ಫ್ರಾಂಚೈಸಿಗಳು ಪಾಕಿಸ್ತಾನಕ್ಕೆ ಹೋದರೆ ನಿಮ್ಮ ಕಾಂಟ್ರಾಕ್ಟ್ ಗಳನ್ನು ಸ್ಧಗಿತಗೊಳಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹೀಗಾಗಿ ಪಾಕ್ ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಅಂತ ಆಫ್ರಿದಿ ಆರೋಪಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ತಮ್ಮ ಆಟಗಾರರ ಮೇಲೆ ಒತ್ತಡ ಹೇರಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಲ್ಲಿಗೆ ಬಂದು ಕ್ರಿಕೆಟ್ ಆಡುವ ಆಟಗಾರರು ಪಾಕಿಸ್ತಾನ ಇತಿಹಾಸದಲ್ಲಿ ಉಳಿಯಲಿದ್ದಾರೆ ಎಂದು ಆಫ್ರಿದಿ ಹೇಳಿದ್ದಾರೆ.
Advertisement