ನಾನು ದೇಶ ದ್ರೋಹ ಮಾಡಿದ್ದೇನೆ ಅಂತ ಅನಿಸಿತ್ತು, ಗೆಳತಿಗೆ ಫೋನ್ ಮಾಡಿ ಕಣ್ಣೀರು ಹಾಕಿದ್ದೆ: ಇಶಾಂತ್‌ ಶರ್ಮಾ

ಪ್ರಸ್ತುತ ಭಾರತ ತಂಡದ ಯಶಸ್ವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಇಶಾಂತ್‌ ಶರ್ಮಾ ಅವರು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಂಭವಿಸಿದ್ದ ತಮ್ಮ ವೃತ್ತಿ ಜೀವನದ ಮಹತ್ವದ ತಿರುವನ್ನು ಸ್ಮರಿಸಿಕೊಂಡಿದ್ದಾರೆ.
ಇಶಾಂತ್ ಶರ್ಮಾ
ಇಶಾಂತ್ ಶರ್ಮಾ

ನವದೆಹಲಿ: ಪ್ರಸ್ತುತ ಭಾರತ ತಂಡದ ಯಶಸ್ವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಇಶಾಂತ್‌ ಶರ್ಮಾ ಅವರು 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಂಭವಿಸಿದ್ದ ತಮ್ಮ ವೃತ್ತಿ ಜೀವನದ ಮಹತ್ವದ ತಿರುವನ್ನು ಸ್ಮರಿಸಿಕೊಂಡಿದ್ದಾರೆ.

2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜೇಮ್ಸ್ ಫಾಲ್ಕನರ್‌ ಅವರಿಗೆ ಒಂದೇ ಓವರ್‌ನಲ್ಲಿ ಇಶಾಂತ್‌ ಶರ್ಮಾ 30 ರನ್‌ ನೀಡಿ ದುಬಾರಿಯಾಗಿದ್ದರು. ಇದನ್ನು ಸ್ಮರಿಸಿಕೊಂಡಿರುವ ಅವರು, 'ದೇಶ ದ್ರೋಹ'ದ ಕೆಲಸ ಮಾಡಿದ್ದೇನೆಂಬ ಭಾವನೆ ಅಂದು ಮೂಡಿತ್ತು ಎಂದು ಹೇಳಿಕೊಂಡಿದ್ದಾರೆ.

ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜೇಮ್ಸ್ ಫಾಲ್ಕನರ್‌ ನನ್ನ ಒಂದು ಓವರ್‌ನಲ್ಲಿ 30 ರನ್ ಸಿಡಿಸಿದರು. ಆ ಮೂಲಕ ಪ್ರವಾಸಿ ತಂಡ ಗೆಲುವು ಸಾಧಿಸಿತ್ತು. ಹಾಗಾಗಿ, 2013ರಲ್ಲಿ ನನ್ನ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಟರ್ನಿಂಗ್‌ ಪಾಂಯಿಂಟ್ ಸಿಕ್ಕಿತ್ತು ಇಎಸ್‌ಪಿಎನ್‌ ಕ್ರಿಕ್‌ಇನ್ಫೋದ ಕ್ರಿಕೆಟ್‌ಬಾಜಿ ಶೋನಲ್ಲಿ ಇಶಾಂತ್ ಶರ್ಮಾ ಹೇಳಿಕೊಂಡಿದ್ದಾರೆ.

2013ರಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಬಂದಿತ್ತು. ಈ ವೇಳೆ ಮೂರನೇ ಪಂದ್ಯದಲ್ಲಿ 18 ಎಸೆತಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 44 ರನ್‌ಗಳ ಅಗತ್ಯವಿತ್ತು. ಈ ವೇಳೆ ನಾಯಕರಾಗಿದ್ದ ಎಂ.ಎಸ್‌ ಧೋನಿ ಚೆಂಡನ್ನು ಇಶಾಂತ್‌ ಶರ್ಮಾ ಅವರಿಗೆ ನೀಡಿದರು. ಬೌಲಿಂಗ್‌ ಮಾಡಿದ ಇಶಾಂತ್‌, ನಾಲ್ಕು ಸಿಕ್ಸರ್‌ಗಳು ಸೇರಿದಂತೆ ಒಂದೇ ಓವರ್‌ನಲ್ಲಿ 30 ರನ್‌ಗಳನ್ನು ನೀಡಿದರು. ಆ ಮೂಲಕ ಪಂದ್ಯದ ದಿಕ್ಕು ಬದಲಾಯಿತು.

ಕೇವಲ 29 ಎಸೆತಗಳಲ್ಲಿ 63 ರನ್‌ಗಳನ್ನು ಚಚ್ಚಿದ್ದ ಜೇಮ್ಸ್‌ ಫಾಲ್ಕನರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 304 ರನ್‌ಗಳನ್ನು ಸುಲಭವಾಗಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಪಂದ್ಯದ ಬಳಿಕ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಡಲಾಯಿತು. ಆಗ ಅವರ ವಿಶ್ವಾಸ ಸಂಪೂರ್ಣ ನೆಲಕಚ್ಚಿತ್ತು.

"ಆ ವೇಳೆ ನಾನು ದೇಶಕ್ಕೆ ದ್ರೋಹ ಬಗೆದಿದ್ದೇನೆಂಬ ಭಾವನೆ ಉಂಟಾಗಿತ್ತು. ಮೊಹಾಲಿ ಪಂದ್ಯದ ಬಳಿಕ ಎರಡರಿಂದ ಮೂರು ವಾರಗಳ ಕಾಲ ಯಾರ ಬಳಿಯೂ ಮಾತನಾಡಿಲ್ಲ. ತುಂಬಾ ಕಣ್ಣಿರಿಟ್ಟಿದ್ದೆ. ನಾನು ತುಂಬಾ ಕಠಿಣ ವ್ಯಕ್ತಿ. ನಿನ್ನಂತೆ ಬೇರೆ ಯಾವ ಕಠಿಣ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ನನ್ನ ತಾಯಿ ಹೇಳಿದ್ದರು. ನನ್ನ ಗೆಳತಿಗೆ ಕರೆ ಮಾಡಿ, ಫೋನ್‌ನಲ್ಲಿಯೇ ಮಗು ರೀತಿ ಕಣ್ಣೀರಿಟ್ಟಿದ್ದೆ. ಆ ವೇಳೆ ಮೂರು ಅಥವಾ ನಾಲ್ಕು ವಾರಗಳ ಕಾಲ ನಾನು ನಿದ್ರೆಯನ್ನೇ ಮಾಡಿರಲಿಲ್ಲ. ಆಹಾರ ಸೇವಿಸುವುದನ್ನೇ ಬಿಟ್ಟಿದ್ದ ನಾನು, ನಿದ್ರೆ ಮಾಡಲಾಗದೇ ಏನಾದರೂ ಮಾಡಬೇಕು ಎಂದೆನಿಸಿತ್ತು. ಟಿವಿ ಸ್ವಿಚ್‌ ಆನ್‌ ಮಾಡಿದರೆ, ಜನರು ನನ್ನನ್ನು ಟೀಕೆ ಮಾಡುತ್ತಿರುವುದೇ ಬರುತ್ತಿತ್ತು," ಎಂದು ಇಶಾಂತ್ ಶರ್ಮಾ 2013ರ ಕಠಿಣ ಸಮಯವನ್ನು ಮೆಲುಕು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com