ರಾಹುಲ್ ದ್ರಾವಿಡ್‌ ತಮ್ಮ ಶ್ರೇಷ್ಠ ಲಯದ ವೇಳೆ ಸಚಿನ್‌ಗೂ ಸಡ್ಡು ಹೊಡೆದಿದ್ದರು: ರಮೀಝ್ ರಾಜ

'ದಿ ವಾಲ್‌' ಎಂದೇ ಖ್ಯಾತಿ ಪಡೆದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಒಬ್ಬ ದಿಗ್ಗಜ ಬ್ಯಾಟ್ಸ್‌ಮನ್‌ ಎಂಬುದನ್ನು ಅವರ ದಾಖಲೆಗಳೇ ಹೇಳುತ್ತವೆ. ರಾಹುಲ್ ಬ್ಯಾಟಿಂಗ್‌ಗೆ ಇಳಿದಾಗಲೆಲ್ಲಾ ಬೌಲರ್‌ಗಳಿಗೆ ಅಗ್ನಿ ಪರೀಕ್ಷೆ. ಏಕೆಂದರೆ ಅವರ ರಕ್ಷಣಾತ್ಮಕ ಬ್ಯಾಟಿಂಗ್‌ನ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಮಾತಲ್ಲ.
ಸಚಿನ್-ದ್ರಾವಿಡ್
ಸಚಿನ್-ದ್ರಾವಿಡ್

ನವದೆಹಲಿ: 'ದಿ ವಾಲ್‌' ಎಂದೇ ಖ್ಯಾತಿ ಪಡೆದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಒಬ್ಬ ದಿಗ್ಗಜ ಬ್ಯಾಟ್ಸ್‌ಮನ್‌ ಎಂಬುದನ್ನು ಅವರ ದಾಖಲೆಗಳೇ ಹೇಳುತ್ತವೆ. ರಾಹುಲ್ ಬ್ಯಾಟಿಂಗ್‌ಗೆ ಇಳಿದಾಗಲೆಲ್ಲಾ ಬೌಲರ್‌ಗಳಿಗೆ ಅಗ್ನಿ ಪರೀಕ್ಷೆ. ಏಕೆಂದರೆ ಅವರ ರಕ್ಷಣಾತ್ಮಕ ಬ್ಯಾಟಿಂಗ್‌ನ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಮಾತಲ್ಲ.

2001ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಲಕ್ಷ್ಮಣ್ ಜೊತೆಗಿನ ಜೊತೆಯಾಟ ಮತ್ತು 1999ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ 153 ರನ್‌ಗಳ ಇನಿಂಗ್ಸ್ ದ್ರಾವಿಡ್‌ ಬ್ಯಾಟ್‌ನಿಂದ ಮೂಡಿಬಂದ ಶ್ರೇಷ್ಠ ಇನಿಂಗ್ಸ್‌ಗಳು.

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ರಮೀಝ್‌ ರಾಜ, ತಮ್ಮ ಶ್ರೇಷ್ಠ ಲಯದಲ್ಲಿದ್ದ ವೇಳೆ ರಾಹುಲ್‌ ದ್ರಾವಿಡ್‌ ಟೀಮ್‌ ಇಂಡಿಯಾ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ಗೂ ಸಡ್ಡು ಹೊಡೆದಿದ್ದರು ಎಂದು ಹೇಳಿದ್ದಾರೆ. ಸಚಿನ್‌ಗೆ ಬ್ಯಾಟಿಂಗ್‌ ವರದಾನವಾಗಿ ಸಿಕ್ಕಿತ್ತು, ಆದರೆ ದ್ರಾವಿಡ್‌ ತಮ್ಮ ಕಠಿಣ ಪರಿಶ್ರಮದಲ್ಲಿ ಶ್ರೇಷ್ಠತೆ ಸಾಧಿಸಿದ್ದರು ಎಂದಿದ್ದಾರೆ.

"ಸಚಿನ್‌ ತೆಂಡೂಲ್ಕರ್‌ ಅವರಲ್ಲಿ ವರದಾನದಂತೆ ಇದ್ದಂತಹ ಸ್ವಾಭಾವಿಕ ಆಟ ದ್ರಾವಿಡ್‌ ಅವರಲ್ಲಿ ಇರಲಿಲ್ಲ. ಆದರೂ ಕ್ರಿಕೆಟ್‌ ಜಗತ್ತಿನ ದಿಗ್ಗಜರ ಎದುರು ಪೈಪೋಟಿ ನಡೆಸಲು ಅವರು ಕಠಿಣ ಪರಿಶ್ರಮ ವಹಿಸಿದ್ದರು. ಏಕೆಂದರೆ ನಿಮ್ಮ ಅತ್ಯುತ್ತಮ ಪ್ರಯತ್ನ ಹೊರತಂದರೂ ಬೆಸ್ಟ್‌ ಬ್ಯಾಟ್ಸ್‌ಮನ್‌ ಆಗಲು ಸಾಧ್ಯವಾಗದೇ ಇದ್ದರೆ ತಂಡದಲ್ಲಿ ನಿಮಗೆ ಉಳಿಗಾಲ ಇರುವುದಿಲ್ಲ," ಎಂದು ಸ್ಫೋರ್ಟ್ಸ್‌ಕೀಡಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಮೀಝ್‌ ಹೇಳಿದ್ದಾರೆ.

"ಆದರೆ, ದ್ರಾವಿಡ್‌ ಅವರ ಸಾಧನೆಯನ್ನು ಮೆಚ್ಚಲೇ ಬೇಕು. ಅವರ ಶ್ರೇಷ್ಠ ಲಯದ ವೇಳೆ ತೆಂಡೂಲ್ಕರ್‌ಗೂ ಸಡ್ಡು ಹೊಡೆದಿದ್ದರು. ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್‌. ಕಠಿಣ ಪಿಚ್‌ಗಳಲ್ಲೂ ಕೂಡ ತಮ್ಮ ಭದ್ರ ಡಿಫೆನ್ಸ್‌ನೊಂದಿಗೆ ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಿದ್ದರು. 3ನೇ ಕ್ರಮಾಂಕದಲ್ಲಿ ಟೀಮ್‌ ಇಂಡಿಯಾ ಪರ ಹಲವು ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದಾರೆ," ಎಂದಿದ್ದಾರೆ.

"ರಾಹುಲ್ ದ್ರಾವಿಡ್‌ಗೆ ಸದಾ ಗೌರವ ಸಿಗುತ್ತದೆ. ಒಬ್ಬ ಆಟಗಾರನ ಶ್ರೇಷ್ಠತೆ ಆತನಿಗೆ ಡ್ರೆಸಿಂಗ್‌ ರೂಮ್‌ನಲ್ಲಿ ಸಿಗುವ ಗೌರವದಲ್ಲಿ ತಿಳಿಯುತ್ತದೆ. ಕಠಿಣ ಸಂದರ್ಭದಲ್ಲಿ ಈ ಬ್ಯಾಟ್ಸ್‌ಮನ್‌ ನಮಗೆ ಆಸರೆಯಾಗುತ್ತಾನೆ ಎಂಬ ವಿಶ್ವಾಸ ಸಹ ಆಟಗಾರರಲ್ಲಿ ಇರುತ್ತದೆ. ಶತಕಗಳಿಗಿಂತಲೂ ಅಗತ್ಯದ ಸಂದರ್ಭದಲ್ಲಿ ಗಳಿಸುವ 30-50 ರನ್‌ಗಳು ಅತ್ಯಂತ ಮಹತ್ವದ್ದಾಗುತ್ತದೆ," ಎಂದು ರಮೀಝ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com