ಆಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಡೇ-ನೈಟ್ ಟೆಸ್ಟ್ ಪಂದ್ಯದ ಹೀನಾಯ ಸೋಲಿನ ಬಗ್ಗೆ ವಿವರಿಸಲು ಪದಗಳಿಲ್ಲ ಎಂದು ಹೇಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಬ್ಯಾಟ್ಸ್ಮನ್ಗಳ ಕಳಪೆ ಆಟವನ್ನು ಟೀಕಿಸಿದ್ದಾರೆ.
ಶನಿವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ಪ್ಯಾಟ್ ಕಮಿನ್ಸ್ ಹಾಗೂ ಜಾಶ್ ಹೇಝಲ್ವುಡ್ ಮಾರಕ ದಾಳಿಗೆ ನಲುಗಿ ಕೇವಲ 36 ರನ್ಗಳಿಗೆ ಸರ್ವ ಪತನ ಕಂಡಿತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ ಎಂಟು ವಿಕೆಟ್ಗಳಿಂದ ಗೆಲುವು ಸಾಧಿಸಿತು ಹಾಗೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ,"ಸೋಲಿನ ಬಗ್ಗೆ ಉಂಟಾಗಿರುವ ಭಾವನೆಗಳನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ. 60 ರನ್ ಮುನ್ನಡೆಯೊಂದಿಗೆ ಅಂಗಳಕ್ಕೆ ಬಂದ ನಾವು ಸರ್ವಪತನವಾದೆವು. ಕಳೆದ ಎರಡು ದಿನಗಳಲ್ಲಿ ಕಠಿಣ ಪರಿಶ್ರಮ ಪಟ್ಟು ಉತ್ತಮ ಹಂತದಲ್ಲಿದ್ದ ನಾವು, ಕೇವಲ ಒಂದೇ ಒಂದು ಗಂಟೆಯಲ್ಲಿ ಗೆಲ್ಲಲಾಗದ ಪರಿಸ್ಥಿತಿಗೆ ಒಳಗಾದೆವು," ಎಂದು ಬೇಸರ ವ್ಯಕ್ತಪಡಿಸಿದರು.
ತಂಡಕ್ಕಾಗಿ ನೀವು ಬದ್ದರಾಗಿದ್ದರೆ, ಉತ್ತಮ ಫಲಿತಾಂಶ ಮೂಡಿ ಬರುತ್ತದೆ. ಈಗಿನ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಹುಡುಗರು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಖಂಡಿತಾ ಪುಟಿದೇಳಲಿದ್ದಾರೆಂಬ ನಂಬಿಕೆ ಇದೆ ಎಂದು ಹೇಳಿದರು. ಎರಡನೇ ಪಂದ್ಯ ಮೆಲ್ಬೋರ್ನ್ನಲ್ಲಿ ಡಿ.26 ರಂದು ಜರುಗಲಿದೆ.
Advertisement