ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯ ಇನ್ನೂ ನಿಗೂಢ, ಯಾರ ನಿಲುವಿಗೂ ಸಿಗುತ್ತಿಲ್ಲ ಉತ್ತರ!

ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಶ್ರೇಷ್ಠ ನಾಯಕರಲ್ಲಿ ಮುಂಚೂಣಿಯಲ್ಲಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಭವಿಷ್ಯ ಇನ್ನೂ ನಿಗೂಢವಾಗಿದೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ...
ಎಂಎಸ್ ಧೋನಿ
ಎಂಎಸ್ ಧೋನಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಶ್ರೇಷ್ಠ ನಾಯಕರಲ್ಲಿ ಮುಂಚೂಣಿಯಲ್ಲಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಭವಿಷ್ಯ ಇನ್ನೂ ನಿಗೂಢವಾಗಿದೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ತಂಡದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದರ ನಡುವೆ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. 

ಇದೆಲ್ಲವನ್ನೂ ಗಮನಿಸುತ್ತಿದ್ದರೆ ಬಿಸಿಸಿಐಗೆ ಎಂ.ಎಸ್ ಧೋನಿ ಸೇವೆ ಸಾಕು ಎಂದೆನಿಸುತ್ತಿದೆ. ಆದರೆ, ಮಾಜಿ ನಾಯಕನು ಸೀಮಿತ ಓವರ್ ಗಳ ತಂಡದಲ್ಲಿ ನಿರ್ವಹಿಸಬೇಕಾದ ಹಲವು ಜವಾಬ್ದಾರಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅವರ ಅಗತ್ಯತೆತೆ ಭಾರತಕ್ಕೆ ಇನ್ನೂ ಇದೆ ಎಂದು ಹೇಳಬಹುದು. ಇದರ ನಡುವೆ ತಮ್ಮ ಮುಂದಿನ ನಡೆ ಬಗ್ಗೆ ಮಾಜಿ ನಾಯಕ  ಮೌನ ವಹಿಸಿರುವುದು ಕೂಡ ಸರಿಯಲ್ಲ. ಒಮ್ಮೆ ಅವರು ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸದರೆ ಗಾಳಿ ಸುದ್ದಿಗಳಿಗೆ ಬ್ರೇಕ್ ಬೀಳಲಿದೆ. 
 
ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿ ಎಂದೇ ಕರೆಯುತ್ತಿರುವ ರಿಷಭ್ ಪಂತ್ ಅವರು ಇನ್ನೂ ವಿಕೆಟ್ ಕೀಪಿಂಗ್ ನಲ್ಲಿ ಪರಿಪಕ್ವತೆ ಸಾಧಿಸಿಲ್ಲ. ಜತೆಗೆ, ಅವರಿಂದ ಬ್ಯಾಟಿಂಗ್ ನಲ್ಲೂ ಹೇಳಿಕೊಳ್ಳುವಂತ ಪ್ರದರ್ಶನ ಇನ್ನೂ ಮೂಡಿಬಂದಿಲ್ಲ.  ಹಲವು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ವೇಳೆ ಪಂತ್ ಎಸಗಿದ್ದ ಎಡವಟ್ಟುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದರು.  ಒಂದು ವೇಳೆ ಧೋನಿ ತಂಡದಲ್ಲಿ ಇದ್ದರೆ ಪಂತ್ ಅವರನ್ನು ತಿದ್ದಲು ನೆರವಾಗುತ್ತಾರೆ. ಜತೆಗೆ, ಧೋನಿಯಿಂದ ಯುವ ವಿಕೆಟ್ ಕೀಪರ್ ಹಲವು ಸಂಗತಿಗಳಲ್ಲಿ ಪರಿಪಕ್ವತೆ ಸಾಧಿಸಲು ಸಹಾಯವಾಗುತ್ತದೆ. 

ಇತ್ತೀಚೆಗೆ ಮುಕ್ತಾಯವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಬದಲು ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವರು ಎಂ.ಎಸ್ ಧೋನಿ ಸ್ಥಾನಕ್ಕೆ ಕೆ.ಎಲ್ ರಾಹುಲ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿದ್ದರು. ಆದರೆ, ಸೀಮಿತ ಓವರ್ ಗಳ ಭಾರತ ತಂಡಕ್ಕೆ ಧೋನಿಗೆ ಸರಿಸಮನಾದ ವಿಕೆಟ್ ಕೀಪರ್ ಇನ್ನೂ ಸಿಕ್ಕಿಲ್ಲ ಎಂಬುದು ಸ್ಪಷ್ಟ.  

ಇದೇ ವರ್ಷ ಅಕ್ಟೋಬರ್ ನಲ್ಲಿ ನಡೆಯುವ ಐಸಿಸಿ ಟಿ-20 ವಿಶ್ಬಕಪ್ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆೆ ಅಗತ್ಯವಿದೆ. ಧೋನಿ ತಂಡದಲ್ಲಿದ್ದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡಕ್ಕೆೆ ಆನೆಬಲ ಸಿಕ್ಕಂತಾಗುತ್ತದೆ. ಜೆತೆಗೆ, 2007ರ ಐಸಿಸಿ ಟಿ-20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ತಂದುಕೊಟ್ಟ ರಾಂಚಿ ಆಟಗಾರನಿಗೆ ಗೌರವದ ವಿದಾಯ ನೀಡಲು ಕೂಡ ಈ ಟೂರ್ನಿ ಸೂಕ್ತ ವೇದಿಕೆಯಾಗಬಹುದು. ಇದು ಸಕಾರವಾದರೆ  ಧೋನಿ ಭಾರತೀಯ ಕ್ರಿಕೆಟ್ ಗೆ ಸಲ್ಲಿಸಿರುವ ಸೇವೆ ಬೆಲೆ ಬಂದಂತಾಗುತ್ತದೆ. 

2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಂಡ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಎಂ.ಎಸ್ ಧೋನಿ ತಮ್ಮ ಕೋರಿಕೆಯಂತೆ ಎರಡು ತಿಂಗಳ ಕಾಲ ಸೇನೆಯ ಜತೆ ಕಾಲ ಕಳೆದಿದ್ದರು. ಬಳಿಕ ಭಾರತ ತಂಡಕ್ಕೆ ಮರಳಲೇ ಇಲ್ಲ. ವಿಶ್ವಕಪ್ ಬಳಿಕ ಬಾಂಗ್ಲಾಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಧೋನಿಯನ್ನು ಆಯ್ಕೆ ಮಾಡಿರಲಿಲ್ಲ. 

ಭಾರತ ತಂಡಕ್ಕೆ ಹಿಂತಿರುಗಲು ಧೋನಿಗೆ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎಂಬುದು ಯಾರಿಗೂ ಗೊತ್ತಿಲ್ಲ. ಧೋನಿ ನಿವೃತ್ತಿ ಹಂಚಿನಲ್ಲಿದ್ದು, ಸದ್ಯ ಫಾರ್ಮ್ ಕೂಡ ಕಳೆದುಕೊಂಡಿರುವುದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಹಿಂದೇಟು ಹಾಕುತ್ತಿದೆಯೇ ಎಂಬ ಅನುಮಾನಗಳು ಕೂಡ ಕಾಡುತ್ತಿದೆ. ಆದರೆ, ಧೋನಿ ಕ್ರಿಕೆಟ್ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com