ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟಿ-20 ಪಂದ್ಯ ನಾಳೆ: ಕೊಹ್ಲಿ ಪಡೆಗೆ ಮೊದಲ ಪರೀಕ್ಷೆ 

ಚುಟುಕು ವಿಶ್ವಕಪ್ ಪೂರ್ವಸಿದ್ಧತೆಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಗಾಯದ ನಡುವೆಯೂ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗಿದೆ. 
ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟಿ-20 ಪಂದ್ಯ ನಾಳೆ: ಕೊಹ್ಲಿ ಪಡೆಗೆ ಮೊದಲ ಪರೀಕ್ಷೆ
ನ್ಯೂಜಿಲೆಂಡ್ ವಿರುದ್ಧ ಪ್ರಥಮ ಟಿ-20 ಪಂದ್ಯ ನಾಳೆ: ಕೊಹ್ಲಿ ಪಡೆಗೆ ಮೊದಲ ಪರೀಕ್ಷೆ

ಅಕ್ಲೆಂಡ್: ಚುಟುಕು ವಿಶ್ವಕಪ್ ಪೂರ್ವಸಿದ್ಧತೆಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಗಾಯದ ನಡುವೆಯೂ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗಿದೆ. 

ವೇಗಿಗಳಿಗೆ ಪೂರಕವಾಗಿರುವ ಇಲ್ಲಿನ ಈಡೆನ್ ಪಾರ್ಕ್ ಅಂಗಳದಲ್ಲಿ ನಾಳೆ ಮೊದಲ ಹಣಾಹಣಿಯಲ್ಲಿ ಕೇನ್ ವಿಲಿಯಮ್ಸ್‌ ಪಡೆಯ ವಿರುದ್ಧ ಟೀಮ್ ಇಂಡಿಯಾಗೆ ಮೊದಲ ಅಗ್ನಿ ಪರೀಕ್ಷೆೆ ಇದಾಗಿದೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಪೂರ್ಣಗೊಳಿಸಿ ಕೇವಲ ಐದು ದಿನಗಳ ಅಂತರದಲ್ಲೇ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಸವಾಲಿಗೆ ಹಣೆಯಾಗಿದೆ. 

ಕಳೆದ ಮಂಗಳವಾರವೇ ಬ್ಲೂ ಬಾಯ್ಸ್‌ ಅಕ್ಲೆಂಡ್‌ಗೆ ಆಗಮಿಸಿತ್ತು. ಬುಧವಾರ ವಿಶ್ರಾಂತಿ ಪಡೆದು ಗುರುವಾರ ಅಭ್ಯಾಸ ನಡೆಸಿತು. ವಿಶ್ವಕಪ್ ವರ್ಷದಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಬಿಡುವಿಲ್ಲದ ವೇಳಾಪಟ್ಟಿಯು ಎಲ್ಲ ವಿಭಾಗಗಳಲ್ಲಿ ಪ್ರಯೋಗ ನಡೆಸಲು ಟೀಮ್ ಮ್ಯಾಾನೇಜ್‌ಮೆಂಟ್‌ಗೆ ಪೂರಕವಾಗಲಿದೆ. 

ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಕೊಹ್ಲಿ ಪಡೆಗೆ ಗಾಯದ ಬರೆ: ಸೀಮಿತ ಓವರ್‌ಗಳ ತಂಡದ ಆಟಗಾರರರಾದ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ದೀಪಕ್ ಚಾಹರ್ ಹಾಗೂ ಭುವನೇಶ್ವರ್ ಕುಮಾರ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಅಲಭ್ಯತೆ ತಂಡಕ್ಕೆ ನಷ್ಟ ಉಂಟು ಮಾಡಿದೆ. ಹಾಗಾಗಿ, ಬೆಂಚ್ ಆಟಗಾರರು ದ್ವೀಪ ರಾಷ್ಟ್ರದಲ್ಲಿ ಹೊಸ ಸವಾಲು ಎದುರಿಸಲಿದ್ದಾರೆ. 

ಇನಿಂಗ್ಸ್‌ ಆರಂಭಿಸಲಿರುವ ರಾಹುಲ್-ರೋಹಿತ್ ಜೋಡಿ: ಕನ್ನಡಿಗ ಕೆ.ಎಲ್ ರಾಹುಲ್ ಲಯದಲ್ಲಿರುವುದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಗಾಯದಿಂದ ವೆಸ್ಟ್‌ ಇಂಡೀಸ್ ತವರು ಸರಣಿಯಿಂದ ಹೊರಗುಳಿದಿದ್ದ ಶಿಖರ್ ಧವನ್, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡಕ್ಕೆ ಮರಳುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದರು. ಇದೀಗ ವಿಂಡೀಸ್ ವಿರುದ್ಧ ಯಶಸ್ವಿ ಆರಂಭಿ ಜೋಡಿಯಾಗಿದ್ದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಮತ್ತೇ ಇನಿಂಗ್‌ಸ್‌ ಆರಂಭಿಸಲಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ನಾಯಕ ವಿರಾಟ್ ಕೊಹ್ಲಿ ಅವರಿಂದ ಶಹಬ್ಬಾಶ್ ಎನಿಸಿಕೊಂಡಿದ್ದ ಕೆ.ಎಲ್ ರಾಹುಲ್ ತಮ್ಮ ಎರಡೂ ಪಾತ್ರವನ್ನು ಮುಂದುವರಿಸಲಿದ್ದಾರೆ. ಟಿ-20 ಸರಣಿಯಲ್ಲಿ ಆರಂಭಿಕ ಹಾಗೂ 50 ಓವರ್‌ಗಳ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. 

ಏಕದಿನ ಕ್ರಿಕೆಟ್‌ಗೆ ಮೊಟ್ಟ ಮೊದಲ ಬಾರಿ ಅವಕಾಶ ಪಡೆದಿರುವ ಪೃಥ್ವಿ ಶಾ ಅವರು ಮೂರು ಪಂದ್ಯಗಳ 50 ಓವರ್‌ಗಳ ಪಂದ್ಯದಲ್ಲಿ ರೋಹಿತ್ ಜತೆ ಇನಿಂಗ್ಸ್‌ ಆರಂಭಿಸಬಹುದು. ಗಾಯದಿಂದ ಚೇತರಿಸಿಕೊಂಡಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಅಂತಿಮ 11ರಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದು, ಕರ್ನಾಟಕದ ಮನೀಷ್ ಪಾಂಡೆ, ಐದನೇ ವಿಶೇಷ ಬ್ಯಾಟ್ಸ್‌‌ಮನ್ ಆಗಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಧವನ್ ಸ್ಥಾನಕ್ಕೆ ತಂಡಕ್ಕೆ ಮರಳಿರುವ ಸಂಜು ಸ್ಯಾಮ್ಸನ್ ಮೊದಲನೇ ಪಂದ್ಯದಲ್ಲಿ ಅಂತಿಮ 11ರಲ್ಲಿ ಅವಕಾಶ ಸಿಗುವುದು ತೀರಾ ವಿರಳ. ಪಂತ್ ಹಾಗೂ ಪಾಂಡೆ ಇಬ್ಬರೂ ಅಂತಿಮ 11ಕ್ಕೆ ಲಗ್ಗೆ ಇಟ್ಟರೆ ನಾಯಕ ಕೊಹ್ಲಿ ಐದು ಬೌಲರ್‌ಗಳನ್ನು ಕಣಕ್ಕೆ ಇಳಿಸಿ ಆರನೇ ಸ್ಥಾನದ ಶಿವಂ ದುಬೆ ಅವರನ್ನು ಕೈಬಿಡಲಿದ್ದಾರೆ. 

ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಅವರಲ್ಲಿ ಒಬ್ಬರು ಆಡಲಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ಹೊಸ ಚೆಂಡನ್ನು ನಿರ್ವಹಿಸಲಿದ್ದಾರೆ. ಆದರೆ, ಶಾರ್ದೂಲ್ ಠಾಕೂರ್ ಅಥವಾ ನವದೀಪ್ ಸೈನಿ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಬಹುದು. ಕಳೆದ ವರ್ಷ ಭಾರತ 1-2 ಅಂತರದಲ್ಲಿ ಕಿವೀಸ್ ವಿರುದ್ಧ ಸೋಲು ಅನುಭವಿಸಿತ್ತು. ಇತ್ತೀಚೆಗೆ ನ್ಯೂಜಿಲೆಂಡ್ 2-1 ಅಂತರದಲ್ಲಿ ಶ್ರೀಲಂಕಾ ವಿರುದ್ಧ ಚುಟುಕು ಸರಣಿ ಗೆದ್ದಿತ್ತು. ಆದರೆ, ಇಂಗ್ಲೆೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ 2-2 ಡ್ರಾ ಮಾಡಿಕೊಂಡಿತ್ತು. ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಲಯದಲ್ಲಿರುವ ನ್ಯೂಜಿಲೆಂಡ್, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 0-3 ವೈಟ್ ವಾಷ್ ಅನುಭವಿಸಿತ್ತು. ಇದರ ನಡುವೆ ಗಾಯಾಳುಗಳಾದ ಟ್ರೆೆಂಟ್ ಬೌಲ್ಟ್‌, ಲಾಕಿ ಫರ್ಗೂಸನ್, ಮ್ಯಾಟ್ ಹೆನ್ರಿ ಹಾಗೂ ಜಿಮ್ಮಿ ನಿಶ್ಯಾಮ್ಸ್‌ ಅವರ ಅನುಪಸ್ಥಿಯಲ್ಲಿ ಬಲಿಷ್ಠ ಭಾರತವನ್ನು ಎದುರಿಸುವುದು ಕಿವೀಸ್‌ಗೆ ಕಠಿಣವಾಗಲಿದೆ.

ಸಂಭಾವ್ಯ ಆಟಗಾರರು, ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್/ಶಿವಂದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಜಸ್ಪ್ರಿತ್ ಬುಮ್ರಾ. ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಟಿಮ್ ಸೀಫರ್ಟ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್, ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ, ಹಮೀಶ್ ಬೆನೆಟ್, ಬ್ಲೈರ್ ಟಿಕ್ಕರ್, ಟಿಮ್ ಸೌಥ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com